ಹಿಂದು ಧರ್ಮ ಅಥವಾ ಸನಾತನ ಧರ್ಮವು ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾಗಿದೆ. ಜಗತ್ತೇ ಒಂದು ಕುಟುಂಬ, ಎಲ್ಲರೂ ಸುಖವಾಗಿರಲಿ, ಜ್ಞಾನವೇ ಗುರಿಯಾಗಿರಲಿ ಎಂಬ ಶ್ರೇಷ್ಠ ತತ್ವಗಳ ಆಧಾರದ ಮೇಲೆ ನಿಂತಿರುವ ವಿಶಾಲ ಹಾಗೂ ಪವಿತ್ರ ಧರ್ಮವಾಗಿದೆ. ಇಂತಹ ಶ್ರೇಷ್ಠ ಧರ್ಮವನ್ನು ಪಾಲಿಸುತ್ತಿದ್ದ ಭಾರತ ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಜ್ಞಾನದ ಬೆಳಕು ನೀಡಿ ವಿಶ್ವಗುರುವೆನಿಸಿಕೊಂಡಿತ್ತು.
ಆದರೆ ಅನ್ಯದೇಶಗಳ ಅನಾಗರೀಕರ ಬರ್ಬರ ದಾಳಿಗೆ ಸಿಲುಕಿ ಹಿಂದು ಧರ್ಮದ ವೈಭವ ದಿನಗಳೆದಂತೆ ಕಳೆಗುಂದಿತ್ತು. ತನ್ನ ಶ್ರೇಷ್ಠತೆ ಮತ್ತು ವಿಶಾಲತೆಯ ಕಾರಣದಿಂದಾಗಿ ಜಗತ್ತನ್ನೇ ಆವರಿಸಿಕೊಳ್ಳಬೇಕಾಗಿದ್ದ ನಮ್ಮ ಧರ್ಮ ನಮ್ಮವರ ಆತ್ಮವಿಸ್ಮೃತಿಯಿಂದ ಸ್ವದೇಶದಲ್ಲೇ ವಿನಾಶದಂಚಿಗೆ ಸಾಗುವ ಅಪಾಯವನ್ನೆದುರಿಸಬೇಕಾಯಿತು.
ವಿದೇಶಿಯರ ಆಳ್ವಿಕೆ ಎಪ್ಪತ್ತು ವರ್ಷಗಳ ಹಿಂದೆಯೇ ಅಂತ್ಯಗೊಂಡಿದ್ದರೂ ಸಹಾ ಸ್ವಾತಂತ್ರ್ಯಾನಂತರ ಇಂದಿಗೂ ಕೀಳು ಮಟ್ಟದ ಧರ್ಮವಿರೋಧಿ ರಾಜಕಾರಣದಿಂದಾಗಿ ಹಿಂದುತ್ವ ಅಪಾಯದಲ್ಲಿಯೇ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಬ್ರಿಟೀಷರು ಆರಂಭಿಸಿದ್ದ ಭೌದ್ಧಿಕ ಗುಲಾಮಿತನದ ಪರಂಪರೆಯನ್ನೇ ಆಳುವವರು ಮುಂದುವರೆಸಿಕೊಂಡು ಬಂದುದರ ಪರಿಣಾಮವಾಗಿ ಭಾರತ ತನ್ನ ಮೂಲ ಸತ್ವವಾದ ಧರ್ಮದಿಂದ ಇಂದು ಬಹುದೂರ ಸಾಗಿಬಿಟ್ಟಿದೆ.
ರಾಜಕೀಯವಾಗಿ ಇಂದು ಹಿಂದು ಸ್ವಲ್ಪ ಮೇಲುಗೈ ಸಾಧಿಸಿದಂತೆ ಕಂಡುಬಂದರೂ ಸಹಾ ಧಾರ್ಮಿಕ ಶಿಕ್ಷಣದಲ್ಲಿ ಬಹಳ ಹಿಂದುಳಿದಿರುವುದು ಸತ್ಯ. ಮತಾಂತರ, ನಾಸ್ತಿಕವಾದ, ಸ್ವೇಚ್ಛಾಚಾರಗಳು, ಮೂಢನಂಬಿಕೆ, ಜಾತಿ ತಾರತಮ್ಯ, ಭಯೋತ್ಪಾದನೆ, ಅಂತಾರಾಷ್ಟ್ರೀಯ ಮಟ್ಟದ ಹಿಂದುವಿ ರೋಧಿ ಲಾಭಿಗಳು, ಮೆಕಾಲೆ ಶಿಕ್ಷಣ, ಸರ್ಕಾರದ ತುಷ್ಟೀಕರಣ ನೀತಿಗಳು, ವೋಟು ಬ್ಯಾಂಕು ಆಧಾರಿತ ಓಲೈಕೆ ರಾಜಕಾರಣಗಳಂತಹ ಅನೇಕ ಸವಾಲುಗಳು ಹಿಂದುವನ್ನು ಹಿಂದೂಸ್ಥಾನದಲ್ಲಿ ಅಲ್ಪಸಂಖ್ಯಾತನನ್ನಾಗಿ ಮಾಡುತ್ತಿವೆ. ವಿದೇಶೀ ಹಣದ ಮೂಲಕ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಕ್ರೈಸ್ತ ಮಿಷನರಿಗಳು, ಇಸ್ಲಾಮಿಕ್ ಜಿಹಾದೀ ಶಕ್ತಿಗಳು ಪ್ರತಿ ದಿನ ನೂರಾರು ಹಿಂದುಗಳನ್ನು ಮತಾಂತರಿಸುತ್ತಿವೆ.
ಇಂದು ಹಿಂದು ಯುವಕರಿಗೆ, ಮಕ್ಕಳಿಗೆ ಅಷ್ಟೇ ಏಕೆ ಹಿರಿಯರಿಗೂ ಕೂಡಾ ತಮ್ಮ ಧರ್ಮದ ಬಗ್ಗೆ ಅರಿವಿಲ್ಲ. ತನ್ನ ಧರ್ಮದ ಬಗ್ಗೆ ಅನ್ಯಮತೀಯರು ಕೇಳಬಹುದಾದ ನಾಲ್ಕು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಸ್ಥಿತಿಯಲ್ಲಿ ಒಬ್ಬ ಸಾಮಾನ್ಯ ಹಿಂದು ಇಲ್ಲ. ಬಾಯಲ್ಲಿ ಹಿಂದುತ್ವ ಹೇಳುವ ಕೆಲವೇ ಕೆಲವು ಜನರಲ್ಲಿಯೂ ಅನುಷ್ಠಾನದ ಕೊರತೆ ಸಾಕಷ್ಟಿದೆ. ಇಂತಹಾ ಪರಿಸ್ಥಿತಿಯಲ್ಲಿ ಧರ್ಮವನ್ನು ಜಾತಿ – ಪಂಥಗಳ ಹೆಸರಿನಲ್ಲಿ ಒಡೆಯುವ ದುಷ್ಟ ಶಕ್ತಿಗಳೂ ತೀವ್ರವಾಗಿ ಕಾರ್ಯಪ್ರವೃತ್ತವಾಗಿವೆ.
ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು? ಈ ಗಂಡಾಂತರಕಾರಿ ಸ್ಥಿತಿಯಿಂದ ಹಿಂದುವನ್ನು ಪಾರುಮಾಡುವ ದಾರಿ ಯಾವುದು? ಇವೆಲ್ಲವನ್ನೂ ಮೆಟ್ಟಿ ನಿಂತು ಹಿಂದು ಧರ್ಮವನ್ನು ಇಂದು ಪುನರುಜ್ಜೀವನಗೊಳಿಸಲು ಇರುವ ಮಾರ್ಗ ಯಾವುದು? ಇವೆಲ್ಲವುಗಳ ಜೊತೆಗೆ ಆತ್ಮವಿಸ್ಮೃತಿಯಲ್ಲಿ ಮುಳುಗಿರುವ ಹಿಂದುಗಳನ್ನು ಬಡಿದೆಬ್ಬಿಸುವುದು ಹೇಗೆ? ಬಹಳ ಆತಂಕ ತಂದೊಡ್ಡುವ ಪ್ರಶ್ನೆಗಳಿವು.
ಇಂದು ಹಿಂದುತ್ವದ ಶಕ್ತಿ, ಹಿಂದುತ್ವದ ಪರಂಪರೆ, ಹಿಂದುತ್ವದ ಜ್ಞಾನ, ಹಿಂದುತ್ವದ ಪವಿತ್ರತೆ, ಹಿಂದುತ್ವದ ಶ್ರೇಷ್ಠತೆಯನ್ನು ಮತ್ತೊಮ್ಮೆ ಹಿಂದುವಿಗೆ ಜ್ಞಾಪಿಸಿಕೊಡುವ ಪ್ರಯತ್ನ ತೀವ್ರವಾಗಿ ನಡೆಯದಿದ್ದರೆ ಹಿಂದು ಧರ್ಮ ಅಳಿದು ಹೋದ ಧರ್ಮಗಳ ಸಾಲಿಗೆ ಸೇರಿಬಿಡಬಹುದೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕಾಗಿಯೇ ಹಿಂದು ಧರ್ಮ ಜಾಗೃತಿಯು ಭಾರತದಲ್ಲಿ ಅತ್ಯಂತ ತುರ್ತಿನಲ್ಲಿ ನಡೆಯಬೇಕಿರುವ ಕಾರ್ಯವಾಗಿದೆ. ದೇಶದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣವೇ ರಾಮಬಾಣವೆನ್ನುವುದು ಇತಿಹಾಸದಿಂದ ನಾವು ಕಲಿತ ಪಾಠವಾಗಿರುವುದರಿಂದ ಜಾಗೃತಿಯೊಂದೇ ಎಲ್ಲದಕ್ಕೂ ಪರಿಹಾರವಾಗಿದೆ.
ಧರ್ಮ ಶಿಕ್ಷಣದ ಮೂಲಕ ಮಾಡುವ ಧರ್ಮ ಜಾಗೃತಿಯಿಂದ ಮಾತ್ರ ಹಿಂದುತ್ವ ಮತ್ತೊಮ್ಮೆ ಪುನರುತ್ಥಾನಗೊಳ್ಳಬಲ್ಲದು. ಇದಕ್ಕಾಗಿ ಹಿಂದು ಬಾಂಧವರು ಕಾರ್ಯಪ್ರವೃತ್ತರಾಗಬೇಕಾಗಿದೆ. ತಮ್ಮ ತನು ಮನ ಧನವನ್ನು ಈ ಕಾರ್ಯಕ್ಕಾಗಿ ಸಮರ್ಪಿಸಿ ಧರ್ಮಜಾಗೃತಿ ಕಾರ್ಯದಲ್ಲಿ ಕೈಜೋಡಿಸಬೇಕಿದೆ.
ಈ ಮೇಲ್ಕಂಡ ಚಿಂತನೆಗಳ ದೃಷ್ಟಿಯಿಂದ ವಿವೇಕ ಶಿಕ್ಷಣ ವಾಹಿನಿಯು ತನ್ನ ಶಕ್ತ್ಯಾನುಸಾರ ಕಾರ್ಯನಿರ್ವಹಿಸಲು ತೀರ್ಮಾನಿಸಿದೆ. ಸನಾತನಂ -The Construction Of Spiritual Minds! ಎಂಬ ಹೆಸರಿನ ನೂತನ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಸಜ್ಜಾಗಿದೆ.
ಜನವರಿ ತಿಂಗಳಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ನಿರ್ಮಾಣಂ – The Construction Of Powerful Minds ಎಂಬ ಯೋಜನೆಯ ಮೂಲಕ ಹತ್ತಿರ ಹತ್ತಿರ ಹತ್ತು ಸಾವಿರ ವಿದ್ಯಾರ್ಥಿಗಳಲ್ಲಿ ಶಕ್ತಿಯುತ ವ್ಯಕ್ತಿತ್ವ ರೂಪಿಸುವ ಪ್ರಯತ್ನ ಮಾಡಿದ್ದ ವಾಹಿನಿಯು ಅದೇ ಮಾದರಿಯಲ್ಲಿ ಇಂದು ಜೂನ್ ತಿಂಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವಾದ ಹಿಂದವಿ ಸ್ವರಾಜ್ಯ ಸ್ಥಾಪನಾ ದಿವಸದ ಪ್ರಯುಕ್ತ ಸಾರ್ವಜನಿಕರಲ್ಲಿ ಧಾರ್ಮಿಕ ಮತ್ತು ಅಧ್ಯಾತ್ಮಿಕ ವ್ಯಕ್ತಿತ್ವ ರೂಪಿಸಿ ಧರ್ಮಜಾಗೃತಿ ಮಾಡುವ ಪ್ರಯತ್ನಕ್ಕೆ ಕೈ ಹಾಕುತ್ತಿದೆ. ಧರ್ಮ ಶಿಕ್ಷಣದ ಗುರಿಯನ್ನು ಹೊಂದಿರುವ ಈ ಯೋಜನೆಗೆ ಅಪಾರ ಪ್ರಮಾಣದ ಸಹಕಾರ, ಸಹಾಯದ ಅವಶ್ಯಕತೆಯಿದೆ. ನಿಮ್ಮ ಸಹಕಾರವಿರಲಿ. ವಂದೇ ಮಾತರಂ.
-ನಿತ್ಯಾನಂದ ವಿವೇಕವಂಶಿ
Discussion about this post