ಶಿವಮೊಗ್ಗ: ಸೋಲಾರ್ ವಿದ್ಯುತ್ತಿನ ಉತ್ಪಾದನೆ ಹಾಗೂ ಬಳಕೆಯಿಂದ ಆರ್ಥಿಕ ಉಳಿತಾಯ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಭಿಪ್ರಾಯಪಟ್ಟರು.
ಇಂದು ನಗರದ ಹರ್ಷ ಕಾಂಪ್ಲೆಕ್ಸ್ ಮೇಲ್ಭಾಗದಲ್ಲಿ ಪ್ರಥಮ ಬಾರಿಗೆ 100 ಕಿ.ವ್ಯಾಟ್ ಸಾಮರ್ಥ್ಯದ ಸೋಲಾರ್ ರೂಫ್ಟಾಪ್ ಅನಾವರಣಗೊಳಿಸಿ ಅವರು ಮಾತನಾಡಿದರು.
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಭಾರತ ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ದಿನದಿಂದ ದಿನಕ್ಕೆ ಸೋಲಾರ್ ಪವರ್ನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ನಾಡು ಕಂಡ ಶ್ರೇಷ್ಠ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಶರಾವತಿ ಭಾಗದಲ್ಲಿ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಮೊದಲು ಆರಂಭಿಸಿದ್ದಕ್ಕಿಂತ ಈಗಿನ ಉತ್ಪಾದನೆ ಹೆಚ್ಚಾಗಿದೆ ಎಂದ ಅವರು, ಅಂದು ಸರ್.ಎಂ.ವಿ. ಯಾವ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದೆಯಾಗುತ್ತಿತ್ತೋ ಇಂದು ಅದೇ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದು ತಾಂತ್ರಿಕತೆಯಲ್ಲಿ ಆಗಿರುವ ಬದಲಾವಣೆ ಎಂದು ಹೇಳಿದರು.
ಎಸ್.ಎಸ್.ಏಜೆನ್ಸಿಯವರು ಪ್ರಥಮ ಬಾರಿಗೆ ಈ ರೀತಿಯ ಪ್ರಯೋಗವನ್ನು ಮಾಡಿರುವುದು ಅತ್ಯಂತ ಉಪಯುಕ್ತವಾಗಿದೆ ಎಂದು ವ್ಯಕ್ತಪಡಿಸಿದ ಅವರು, ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿ ಎಂದು ಆಶಿಸಿದರು.
ನಾಗರೀಕ ಹಿತರಕ್ಷಣಾ ಸಮಿತಿಯ ಕೆ.ವಿ. ವಸಂತ್ಕುಮಾರ್, ಟಾಟಾ ಪವರ್ ಸೋಲಾರ್ನ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ್ ಬೈಂದೂರು, ಮ್ಯಾನೇಜಿಂಗ್ ವ್ಯವಸ್ಥಾಪಕರಾದ ಎಸ್.ಎಂ.ಶೆಣೈ, ನಿರ್ದೇಶಕ ಸಿ.ಬಿ.ಶಾಂತವೀರಪ್ಪ, ವಿಭಾಗೀಯ ಮುಖ್ಯಸ್ಥ ಎ. ಫಣಿರಾಜ್ ಚಂದ್ರ ಇದ್ದರು.
Discussion about this post