ಚೆನ್ನೈ: ಇಂದು ಸಂಜೆ ವಿಧಿವಶರಾದ ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ಅವರು ರಾಜಕೀಯ ಕ್ಷೇತ್ರದಲ್ಲಿ ಎಷ್ಟು ಮುಗಿಲೆತ್ತಕ್ಕೆ ಏರಿದ್ದರೋ, ಅದೇ ರೀತಿ ದಕ್ಷಿಣ ಭಾರತದ ಅದರಲ್ಲೂ ಪ್ರಮುಖವಾಗಿ ತಮಿಳು ಚಿತ್ರರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಗಳನ್ನು ನೀಡಿದ್ದರು.
ಚಿತ್ರರಂಗದಲ್ಲಿ ಆಸಕ್ತಿ ಹೊಂದಿದ್ದ ಕರುಣಾನಿಧಿ, 20ನೆಯ ವಯಸ್ಸಿನಲ್ಲಿ ಜುಪಿಟರ್ ಪಿಕ್ಚರ್ಸ್ ನಲ್ಲಿ ಕಥಾಲೇಖಕರಾಗಿ ಕೆಲಸ ಆರಂಭಿಸಿದರು. ಅವರ ಮೊದಲ ಸಿನಿಮಾ ರಾಜಕುಮಾರಿ ಅವರಿಗೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟಿತು. ಇಲ್ಲಿ ಕಥಾಲೇಖಕರಾಗಿ ಅವರ ಕೌಶಲಗಳು ಗೋಚರವಾದವು. ಅವರು 70ಕ್ಕಿಂತಲೂ ಹೆಚ್ಚು ಚಿತ್ರಕಥೆಗಳನ್ನು ಬರೆದರು. ಅವುಗಳಲ್ಲಿ ಪ್ರಮುಖವಾದವು, ರಾಜಕುಮಾರಿ, ಅಭಿಮನ್ಯು, ಮಂದಿರಿ ಕುಮಾರಿ, ಮರುದ ನಾಟು ಇಳವರಸಿ, ಮಾನಮಗನ್, ದೇವಕಿ, ಪರಾಸಕ್ತಿ, ಪಣಮ್, ತಿರುಂಬಿಪಾರ್, ನಾಮ್, ಮನೋಹರ, ಅಮ್ಮೈಯಪ್ಪನ್, ಮಲೈ ಕಲ್ಲನ್, ರಂಗೂನ್ ರಾಧ, ರಾಜ ರಾಣಿ ಪುದೈಯಲ್, ಪುದುಮೈ ಪಿತನ್, ಎಲ್ಲೋರುಮ್ ಇನ್ನಾಟು ಮನ್ನಾರ್, ಕುರವಂಜಿ, ತಾಯಿಲ್ಲಪಿಳ್ಳೈ, ಕಾಂಜಿ ತಲೈಯವನ್, ಪಾಡಾಧ ತೆನೀಕ್ಕಲ್, ನಿಯಾಯ ತರಾಸು, ಪಾಸಕಿಳಿಗಲ್, ಕಣ್ಣಮ್ಮ, ಉಲಿಯಿನ್ ಒಸೈ, ಮುಲೈ ಪಾಲ್.
ಇನ್ನು, ಸಾಹಿತ್ಯ ಕ್ಷೇತ್ರಕ್ಕೂ ಸಹ ಕರುಣಾನಿಧಿ ಅವರ ಕೊಡುಗೆ ಅಪಾರವಾದುದು. ತಮಿಳು ಸಾಹಿತ್ಯದ ಬಗ್ಗೆ ವಿಪುಲ ಜ್ಞಾನ ಮತ್ತು ಅದಕ್ಕೆ ನೀಡಿದ ಕೊಡುಗೆಗಾಗಿ ಇವರು ಪ್ರಸಿದ್ಧರು.
ಕವನಗಳು, ಪತ್ರಗಳು, ಚಿತ್ರಕಥೆಗಳು, ಕಾದಂಬರಿಗಳು, ಜೀವನ ಚರಿತ್ರೆ, ಐತಿಹಾಸಿಕ ಕಾದಂಬರಿಗಳು, ರಂಗಕೃತಿ, ಸಂಭಾಷಣೆ, ಗೀತೆಗಳು ಇತ್ಯಾದಿ ವ್ಯಾಪಕ ಕ್ಷೇತ್ರಗಳಲ್ಲಿ ಇವರು ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ತಿರುಕುರಲ್ಗೆ ಕುರಲೋವಿಯಮ್, ತೋಲ್ಕಾಪ್ಪಿಯ ಪೂಂಗ, ಪೂಂಬುಕಾರ್ ಮೊದಲಾದವುಗಳನ್ನು ಕೌಶಲದಿಂದ ರಚಿಸಿದ್ದಲ್ಲದೆ ಹಲವಾರು ಕವನಗಳು, ಪ್ರಬಂಧಗಳು ಮತ್ತು ಪುಸ್ತಕಗಳನ್ನೂ ರಚಿಸಿದ್ದಾರೆ.
ರೋಮಪುರಿ ಪಾಂಡಿಯನ್, ತೆನ್ಪಾಂಡಿ ಸಿಂಗಮ್, ವೆಳ್ಳಿಕಿಳಮೈ, ನೆಂಜುಕು ನೀಧಿ, ಇನಿಯವೈ ಇರುಬದು, ಸಂಗ ತಮಿಳ್, ಕುರಲೋವಿಯಮ್, ಪೊನ್ನಾರ್ ಸಂಕರ್, ತಿರುಕುರಲ್ ಉರೈ ಎಂಬ ಪುಸ್ತಕಗಳನ್ನು ರಚಿಸಿರುವ ಕರುಣಾನಿಧಿ, ಮಣಿಮಗುದಮ್, ಒರ್ ರತ್ತಮ್, ಪಳನಿಯಪ್ಪನ್, ತೂಕು ಮೇಡೈ, ಕಾಗಿದಪೂ,
ನಾನೆ ಅರಿವಾಲಿ, ವೆಲ್ಲಿಕಿಳಮೈ, ಉಧಯಸೂರಿಯನ್, ಸಿಲಪತಿಕಾರಮ್ ಎಂಬ ರಂಗಕೃತಿಗಳ ರಚನೆಗಳ ಮೂಲಕ ರಂಗಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಹಾಗೆಯೇ, ಕಲೆ ಮತ್ತು ವಾಸ್ತುಶಿಲ್ಪ ರಚನೆಯ ಮೂಲಕ ತಮಿಳು ಭಾಷೆಗೆ ವಿಶೇಷ ಕಾಣಿಕೆ ಸಲ್ಲಿಸಿರುವ ಕರುಣಾನಿಧಿ, ತಿರುಕ್ಕುರಳ್ ಕುರಿತು ಕುರಲೋವಿಯಮ್ ರಚಿಸಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ವಳ್ಳುವರ್ ಕೊಟ್ಟಮ್ ನಿರ್ಮಾಣದ ಮೂಲಕ ತಿರುವಳ್ಳುವರ್ ಪ್ರತಿಮೆಗೆ ವಾಸ್ತುಶಿಲ್ಪದ ವಿನ್ಯಾಸವನ್ನು ನೀಡಿದ್ದು, ಕರುಣಾನಿಧಿಯವರು ಕನ್ಯಾಕುಮಾರಿಯಲ್ಲಿ 133 ಅಡಿ ಎತ್ತರದ ತಿರುವಳ್ಳುವರ್ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.
Discussion about this post