ಭದ್ರಾವತಿ: ಉಪ ಚುಣಾವಣೆಯಲ್ಲಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆಲ್ಲುವುದು ಖಚಿತ. ಗೆದ್ದ ಮರುಕ್ಷಣ ಸಮಿಶ್ರ ಸರಕಾರ ಉರುಳುವುದು ನಿಶ್ಚಿತ. ರಾಜ್ಯದಲ್ಲಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಇವರ ದೊಂಬರಾಟಕ್ಕೆ ತಿಲಾಂಜಲಿ ಹಾಡಬೇಕಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.
ಅವರು ಮಂಗಳವಾರ ಬಿಜೆಪಿ ಏರ್ಪಡಿಸಿದ್ದ ಬಂಜಾರ ಸಮುದಾಯದ ಸಮಾವೇಶದಲ್ಲಿ ಮಾತನಾಡಿ, ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ ಸೇವಾಲಾಲ್ ಜನ್ಮ ಸ್ಥಳ ಸೂರಗೊಂಡನಕೊಪ್ಪ ಪವಿತ್ರ ಸ್ಥಳದ ಅಭಿವೃದ್ದಿಗೆ 3 ಕೋಟಿ ರೂ. ಅನುದಾನ ನೀಡಿದ ಕೀರ್ತಿ ನಮ್ಮದಾಗಿದೆ. ಹಿಂದಿನ ಯಾವ ಸರಕಾರಗಳು ಬಂಜಾರ ಸಮಾಜದ ಏಳಿಗೆಗೆ ಮುಂದಾಗಿರಲಿಲ್ಲ. ಕೆಪಿಸಿಸಿ ಸದಸ್ಯ ಸೇರಿದಂತೆ ಅನೇಕ ನಿಗಮಗಳಿಗೆ ಬಂಜಾರ ಮುಖಂಡರುಗಳನ್ನು ನೇಮಿಸುವಲ್ಲಿ ಸಾಧಿಸಲಾಗಿದೆ ಎಂದರು.
ಬಂಜಾರ ಸಮಾಜದ ಶಾಸಕರುಗಳಿಗೆ ನಮ್ಮ ಅಧಿಕಾರದ ಅವಧಿಯಲ್ಲಿ ಸಚಿವ ಸ್ಥಾನ ನೀಡಿದ್ದೆ. ಅದರಿಂದ ಸಮುದಾಯ ಅಭಿವೃದ್ದಿ ಸಾಧಿಸಲು ಸಾಧಯವಾಗಿತ್ತು. ಆದರೀಗ ಬಂಜಾರ ಶಾಸಕರುಗಳು ಇದ್ದರು ಸಮಿಶ್ರ ಸರಕಾರದಲ್ಲಿ ಯಾರನ್ನು ಸಚಿವರನ್ನಾಗಿ ನೇಮಿಸದೆ ಅವಮಾನ ಮಾಡಿದ್ದಾರೆ. ಈ ಸಮಾಜದ ಬಂಧುಗಳು ರಾಜ್ಯದೆಲ್ಲೆಡೆ ಚರ್ಚೆಗೆ ಮುಂದಾಗಬೇಕು. ಸರ್ವರಿಗೂ ಸಮಪಾಲು ಎನ್ನುವ ಹಾಗೆ ನಾವು ಅಧಿಕಾರ ಮಾಡಿದ್ದೇವೆ. ತಾಂಡ ಅಭಿವೃದ್ದಿ ನಿಗಮ ರಚಿಸುವ ಮೂಲಕ ರಾಜ್ಯದ ಎಲ್ಲಾ ಬಂಜಾರ ತಾಂಡಗಳ ರಸ್ತೆ, ನೀರು, ನಿವೇಶನ, ಸೂರು, ಮಾಸಾಶನ ಮುಂತಾದ ಯೋಜನೆಗಳನ್ನು ನೀಡಿದ ಕೀರ್ತಿ ತಮ್ಮದಾಗಿದೆ ಎಂದರು.
ಈ ಎಲ್ಲಾ ಅಂಶಗಳನ್ನು ಗ್ರಹಿಸಿ ಸಮಾಜ ಬಾಂಧವರು ಉಪ ಚುನಾವಣೆಯಲ್ಲಿ ಬಿವೈಆರ್ ಅವರನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿ. ಪ್ರಧಾನಿ ಬಳಿ ನಿಮ್ಮ ಸಮಸ್ಯೆಗಳು ತಲುಪಲಿದೆ ಎಂದರು.
ರಾಜ್ಯದ ಸಮಿಶ್ರ ಸರಕಾರ ಬಹಳ ದಿನಗಳು ಉಳಿಯಲ್ಲ. ರಾಘವೇಂದ್ರ ಗೆದ್ದ ಮರುಕ್ಷಣ ಉರುಳುತ್ತದೆ. ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದೇನೆಂದು ಸುಳ್ಳು ಹೇಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲದಂತಾಗಿದೆ. ಆದ್ದರಿಂದ ಈ ಸರಕಾರ ತೊಲಗಬೇಕಾಗಿದ್ದು, ಎಚ್ಡಿಡಿ ಮತ್ತು ಎಚ್ ಡಿಕೆ ದೊಂಬರಾಟಕ್ಕೆ ಕಡಿವಾಣ ಹಾಕಬೇಕಿದೆ.
-ಬಿ.ಎಸ್. ಯಡಿಯೂರಪ್ಪ
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ, ಬಂಜಾರ ಸಮಾಜದ ಆಶಾಕಿರಣ ಬಿಎಸ್ವೈ ಆಗಿದ್ದಾರೆ. ತಾಲೂಕು ಅತ್ಯಂತ ಹಿಂದುಳಿದ ಬಂಜಾರ ಸಮಾಜ ನೆಲ ಕಚ್ಚಿದೆ. ಹೊಸ ಹೊಸ ಸಮಸ್ಯೆಗಳು ಹುಟ್ಟಿವೆ. ಇನ್ನು ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರಿಗೆ ಮತ್ತು ಯಾರಿಗೂ ಹೆದರದೆ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸಲು ಬಿಎಸ್ವೈ ಮತ್ತು ನಾವು ಇದ್ದೇವೆ. ತಾಲೂಕಿನ 34 ಬಂಜಾರ ತಾಂಡಗಳಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬರುವಂತೆ ಶ್ರಮ ವವಹಿಸಬೇಕೆಂದು ಕರೆ ನೀಡಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಔರಾದ್ ಶಾಸಕ ಪ್ರಭು ಚವ್ಹಾಣ್ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ಶಾಸಕರುಗಳಾದ ಹರ್ಷವರ್ದನ್, ನಿರಂಜನ್ ಕುಮಾರ್, ಸಂಸದ ಭಗವಂತ ಕುಮಾರ್, ಮುಖಂಡರಾದ ನಾನ್ಯಾನಾಯ್ಕ, ಸುರೇಶ್ ನಾಯ್ಕ, ಅಶೋಕ್ ನಾಯ್ಕ, ರಮೇಶ್ ನಾಯ್ಕ, ಮಹೇಶ್ ನಾಯ್ಕ, ಬಿ.ಜಿ. ಪಾಟೀಲ್, ದೇವರಾಜನಾಯ್ಕ, ದತ್ತಾತ್ರಿ, ಪ್ರವೀಶ್ ಪಟೇಲ್, ಕೂಡ್ಲಿಗೆರೆ ಹಾಲೇಶ್, ಡಾ.ಮಂಜುನಾಥ್, ವಿ. ಕದಿರೇಶ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ಬಾಗೀಬಾಯಿ ಸಂಗಡಿಗರು ಪ್ರಾರ್ಥಿಸಿ, ರಾಮಾನಾಯ್ಕ ಸ್ವಾಗತಿಸಿದರು. ಹೈಕೋರ್ಟ್ ನ್ಯಾಯವಾದಿ ಮಾಲಾನಾಯ್ಕ ನಿರೂಪಿಸಿದರು. ಇದೇ ಸಂದಭದಲ್ಲಿ ಅನೇಕರು ಜೆಡಿಎಸ್ ತೊರೆದು ಬಿಜೆಪಿ ಸೇರಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post