ಶಿಕಾರಿಪುರ: ಗುತ್ತಿಗೆ ಕಾರ್ಮಿಕರ ಹಲವು ವರ್ಷದ ಪಿಎಫ್ ಹಣದಲ್ಲಿ ಕೋಟ್ಯಂತರ ರೂ. ಅವ್ಯವಹಾರವಾಗಿದ್ದು ಇದರ ಜತೆಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಹೆಚ್ಚುವರಿ ಸೇವೆಗೆ ಹಣ ನೀಡದೆ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರ ಶೋಷಣೆ ವಿಪರೀತವಾಗಿದೆ ಎಂದು ಆರೋಪಿಸಿ ತಾಲೂಕಿನ ಸಂಡ ಗ್ರಾಮದ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಕರ್ನಾಟಕ ಹಾಲು ಮಹಾಮಂಡಳದ ಪಶು ಆಹಾರ ಘಟಕದ ಗುತ್ತಿಗೆ ಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.
ಘಟಕದಲ್ಲಿರುವ ನೂರಾರು ಗುತ್ತಿಗೆ ನುರಿತ ಕಾರ್ಮಿಕರು ಸತತ 5 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಹುಬ್ಬಳ್ಳಿ ಮೂಲದ ಸ್ವಸ್ಥಿಕ್ ಕನ್ಸ್ ಲ್ಟೆನ್ಸಿ ಕಂ. ಕಾರ್ಮಿಕರ ಕೋಟ್ಯಂತರ ಹಣವನ್ನು ಪಿಎಫ್ ಪಾವತಿಸದೆ ಕುಂಟು ನೆಪದ ಮೂಲಕ ಕಾರ್ಮಿಕರಿಗೆ ಸಾಮೂಹಿಕವಾಗಿ ಸ್ಥಳೀಯ ಪ್ರಧಾನ ವ್ಯವಸ್ಥಾಪಕರ ಜತೆ ಸೇರಿ ಉಂಡೆ ನಾಮ ಹಾಕಲು ಸಿದ್ದತೆಯನ್ನು ಕೈಗೊಂಡಿದೆ ಎಂದು ಪ್ರತಿಭಟನಾ ನಿರತ ಕಾರ್ಮಿಕರು ದೂರಿದರು.
ಸ್ಥಳೀಯ ಕಾರ್ಮಿಕರನ್ನು ಹಾಜರಾತಿ ಕಡಿತ, ಕ್ಷುಲ್ಲಕ ಆರೋಪದಿಂದ ಉದ್ದೇಶಪೂರ್ವಕ ಶೋಷಿಸಿ ಕೇಂದ್ರ ಕಚೇರಿಯ ಅನುಮತಿಯಿಲ್ಲದೆ ಪರಸ್ಥಳದ ಹಲವರನ್ನು ಲಕ್ಷಾಂತರ ಹಣ ಪಡೆದು ಕೆಲಸಕ್ಕೆ ಪ್ರಧಾನ ವ್ಯವಸ್ಥಾಪಕ ಹೇಮಶೇಖರಪ್ಪ ನೇಮಿಸಿಕೊಂಡಿದ್ದು, ಕಾರ್ಮಿಕರ ವಿರುದ್ದದ ಶೋಷಣೆಯಲ್ಲಿ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಕೂಡಲೇ ಅಧಿಕಾರಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾ ನಿರತ ಕಾರ್ಮಿಕರು ಆರೋಪಿಸಿ ವ್ಯವಸ್ಥೆ ಸುಧಾರಣೆಯಾಗುವವರೆಗೂ ಮುಷ್ಕರ ನಡೆಸುವುದಾಗಿ ಎಚ್ಚರಿಸಿದರು.
ಘಟಕದ ನೂತನ ಪ್ರಧಾನ ವ್ಯವಸ್ಥಾಪಕ ಸದಾಶಿವಪ್ಪ ಮಾತನಾಡಿ, ಪಿಎಫ್ ಪಾವತಿಗೆ ಯುಎನ್ಎ ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದ್ದು ಹಲವರ ಸಂಖ್ಯೆ ತಪ್ಪಾಗಿ ಗೊಂದಲ ಉಂಟಾಗಿದೆ. ವೇತನದ ಶೇ.12 ಪಿಎಫ್ ಹಣ ಪ್ರತಿ ತಿಂಗಳು ಕಡಿತಗೊಳ್ಳಲಿದ್ದು, ಸರ್ಕಾರದ ಕಾನೂನು ಇಲಾಖೆಯ ನಿಯಮದನ್ವಯ ಎಲ್ಲಾ ಸೌಲಭ್ಯ ನೀಡಲು ಬದ್ದವಾಗಿರುವುದಾಗಿ ತಿಳಿಸಿದರು. ಗೊಂದಲವಾಗಿರುವ ಪಿಎಫ್ ಸರಿಪಡಿಸಲು ಕಾಲಾವಕಾಶ ಅಗತ್ಯವಾಗಿದೆ. ಗುತ್ತಿಗೆದಾರ ಕಂಪನಿಯ ಪ್ರತಿನಿಧಿ ಘಟಕದಲ್ಲಿದ್ದು ಸರಿಪಡಿಸಲು ಸೂಚಿಸುವುದಾಗಿ ಬರವಸೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಸುರೇಶ್ ಮೇಸ್ತ್ರಿ, ರಾಜು ಡಿ.ಎಸ್, ಷಣ್ಮುಖ, ಬಸವರಾಜ್, ಮಾರುತಿ, ಬಂಗಾರಪ್ಪ, ಶಶಿಕುಮಾರ್, ಯೋಗೀಶ್, ವಿನಯ, ಮಂಜುನಾಥ್, ನಾಗಮ್ಮ, ಭಾಗ್ಯಮ್ಮ, ಮೈನಾವತಿ, ವೇದಾವತಿ ಮತ್ತಿತರರು ಹಾಜರಿದ್ದರು.
ಆರೋಪಗಳೇನು?
- ಕಾರ್ಮಿಕ ಕಾನೂನಿನನ್ವಯ ನಿತ್ಯ ಟನ್ ಬಾರದ ಉತ್ಪಾದನೆಯನ್ನು ಗರಿಷ್ಠ 14 ಕಾರ್ಮಿಕರು ನಿರ್ವಹಿಸಬೇಕಾಗಿದ್ದು, ಘಟಕದಲ್ಲಿ 13 ಕಾರ್ಮಿಕರಿಂದ ನಿರ್ವಹಿಸಲಾಗುತ್ತಿದೆ.
- ಉದ್ದೇಶಪೂರ್ವಕವಾಗಿ ತಪ್ಪು ವಿಳಾಸವನ್ನು ನೀಡುವ ಮೂಲಕ ಪಿಎಫ್ ಮತ್ತಿತರ ಸೌಲಭ್ಯದಿಂದ ವಂಚಿಸಲಾಗುತ್ತಿದೆ.
- 50 ಕೆಜಿ ತೂಕದ ಬದಲಿಗೆ 70 ರಿಂದ 80 ಕೆಜಿ ತೂಕದ ಭಾರವನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ.
- ವರ್ಷಕ್ಕೆ ನೀಡಲಾಗುವ ಬೋನಸ್ ನಲ್ಲಿ ಕಡಿತಗೊಳಿಸಲಾಗುತ್ತಿದೆ.
- ಘಟಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಭರವಸೆ ಮೇರೆಗೆ ಆರಂಭಿಸಿ, ಇದೀಗ ಏಕಾಏಕಿ ಬಿಹಾರ ಮತ್ತಿತರ ಪರರಾಜ್ಯದವರನ್ನು ನೇಮಿಸಿಕೊಳ್ಳಲಾಗುತ್ತಿದೆ.
- ಕಳೆದ ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕ ಮಂಜುನಾಥ್ ಬಡ ಕುಟುಂಬಕ್ಕೆ ಕನಿಷ್ಠ ಮಾನವೀಯತೆ ಆಧಾರದಲ್ಲಿ ಪರಿಹಾರ ವಿತರಿಸಿಲ್ಲ.
- ಹರಗುವಳ್ಳಿಯ ಕಾರ್ಮಿಕ ವೀರೇಶ್ ಹೆಚ್ಚಿನ ಭಾರದ ಚೀಲವನ್ನು ನಿತ್ಯ ಹೋರುತ್ತಿದ್ದು ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ವೀರೇಶ್ ಇದೀಗ ಬೆನ್ನುಮೂಳೆ ಜಾರಿ ಖಾಯಂ ಹಾಸಿಗೆಯಲ್ಲಿ ಮಲಗಿದ್ದಾನೆ ಇಂದಿಗೂ ಚಿಕಿತ್ಸೆ ಹಾಗೂ ಪರಿಹಾರ ನೀಡದೆ ಅನಾಥವಾಗಿಸಿದೆ.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post