ಶಿಕಾರಿಪುರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಜವಾಬ್ದಾರಿ ಹೆಚ್ಚಿನದಾಗಿದ್ದು, ಚುನಾವಣಾ ಅಕ್ರಮವನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಪಾರದರ್ಶಕವಾಗಿ ನಡೆಸುವಲ್ಲಿ ಅತ್ಯಂತ ಜಾಗರೂಕತೆಯಿಂದ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶಿಕಾರಿಪುರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದರಿ ನೀತಿ ಸಂಹಿತೆ ತಂಡಗಳಿಗೆ ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಚುನಾವಣೆಗಳಲ್ಲಿ ಸೆಕ್ಟರ್ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದ್ದು, ಈ ಬಾರಿಯ ಚುನಾವಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಹೆಚ್ಚು ಜವಾಬ್ದಾರಿಯನ್ನು ಚುನಾವಣಾ ಆಯೋಗ ವಹಿಸಿದೆ. ಕರ್ತವ್ಯದ ಸಂದರ್ಭದಲ್ಲಿ ಮೊಬೈಲ್, ಜಿಪಿಆರ್ಎಸ್, ಇಂಟರ್ನೆಟ್ ಸಂಪರ್ಕ ಕಡ್ಡಾಯವಾಗಿದ್ದು ಸಿ ವಿಜಿಲ್ ಆಪ್ ಮೂಲಕ ಪ್ರತಿ ಚಲನವಲನ ಆಯೋಗದ ಅರಿವಿಗೆ ಬರಲಿದೆ ಎಂದು ತಿಳಿಸಿದರು.
ಶಿಕಾರಿಪುರ ಅಭ್ಯರ್ಥಿಯ ಸ್ವಕ್ಷೇತ್ರ ಎಂಬ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದು, ಹಣ ಮದ್ಯ ಮತ್ತಿತರ ಅಕ್ರಮ ವಸ್ತುಗಳ ಸರಬರಾಜು ಬಗ್ಗೆ ಹೆಚ್ಚಿನ ನಿಗಾವಹಿಸಬೇಕಾಗಿದೆ. ಸ್ಟಾರ್ ಪ್ರಚಾರಕರು ಪಕ್ಷದ ಖಜಾಂಚಿ ಪತ್ರ ಪಡೆದು 1 ಲಕ್ಷ ಹಣ ಕಾರಿನಲ್ಲಿ ತೆಗೆದುಕೊಂಡು ಹೋಗಲು ಅವಕಾಶವಿದ್ದು, ಇತರೆ ವ್ಯಕ್ತಿಗಳು ಲಕ್ಷಾಂತರ ಹಣ ಸಾಗಿಸುತ್ತಿದ್ದಲ್ಲಿ ವಾಹನದಲ್ಲಿನ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಅನುಮಾನ ಕಂಡು ಬಂದಲ್ಲಿ ಕೂಡಲೇ ದೂರು ದಾಖಲಿಸುವಂತೆ ಸಲಹೆ ನೀಡಿದರು. ಸಿ ವಿಜಿಲ್ ಆಪ್ ಮೂಲಕ ದಾಖಲಾಗುವ ದೂರುಗಳನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ 15 ನಿಮಿಷದಲ್ಲಿ ಸ್ಥಳಕ್ಕೆ ತೆರಳಿ 100 ನಿಮಿಷದಲ್ಲಿ ದೂರಿನ ಬಗ್ಗೆ ಸ್ಪಷ್ಟ ಮಾಹಿತಿಯನ್ನು ದಾಖಲಿಸುವಂತೆ ತಿಳಿಸಿದರು.
ಚುನಾವಣಾ ಸಭೆಗಳಲ್ಲಿ ವೇದಿಕೆ, ಕುರ್ಚಿ, ಮೈಕ್, ಶಾಮಿಯಾನ ಮತ್ತಿತರ ಪ್ರತಿಯೊಂದು ವಸ್ತುಗಳಿಗೆ ಹಣ ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಪಡೆದ ಪರವಾನಿಗೆಯನ್ನು ಮೀರಿದಲ್ಲಿ ಪ್ರತಿಯೊಂದನ್ನು ಸ್ಪಷ್ಟ ವಿಡಿಯೋ ಮೂಲಕ ದಾಖಲಿಸಿ ಚುನಾವಣಾಧಿಕಾರಿಗೆ ದೂರು ಸಲ್ಲಿಸುವಂತೆ ತಿಳಿಸಿದ ಅವರು, ಸಿ ವಿಜಿಲ್ ಆಪ್ ಮೂಲಕ ದಾಖಲಾದ ದೂರನ್ನು ಕಡ್ಡಾಯವಾಗಿ ಪರಿಶೀಲಿಸಿ ಕ್ರಮದ ಬಗ್ಗೆ ಮಾಹಿತಿಯನ್ನು ಸಲ್ಲಿಸುವಂತೆ ತಿಳಿಸಿದರು.
ಖಾಸಗಿ ವಾಹನದಲ್ಲಿ ಚುನಾವಣಾ ಸಭೆ ಸಮಾರಂಭಗಳಿಗೆ ತೆರಳುವವರ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ತಿಳಿಸಿದ ಅವರು, ಸಭೆಯಲ್ಲಿ ಸೀಮಿತ ಕಾರ್ಯಕರ್ತರಿಗೆ ಊಟಕ್ಕೆ ಅನುಮತಿ ನೀಡಲಾಗುವುದು. ವಾಹನಗಳಲ್ಲಿ ಪ್ರಚಾರ ಸಾಮಗ್ರಿ ಅನುಮತಿ ಕಡ್ಡಾಯವಾಗಿದ್ದು ತಪ್ಪಿದಲ್ಲಿ ದೂರು ದಾಖಲಿಸುವಂತೆ ತಿಳಿಸಿದರು. ಸ್ಟಾರ್ ಪ್ರಚಾರಕರ ಕಾರ್ಯಕ್ರಮದಲ್ಲಿ ಪ್ರತಿಯೊಂದು ಚೆಕ್ ಪೋಸ್ಟ್ ನಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮವನ್ನು ಅನುಸರಿಸಬೇಕು, ಕರ್ತವ್ಯದಲ್ಲಿನ ನಿರ್ಲಕ್ಷಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುವುದು ಮತದಾನಕ್ಕೆ ಮತದಾರರಿಗೆ ಅಡ್ಡಿ ಪಡಿಸುವ ಬೂತ್ಗಳನ್ನು ಗುರುತಿಸಲಾಗಿದ್ದು ಬಿಡುವಿನ ವೇಳೆಯಲ್ಲಿ ಮತದಾರರಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಮಾತನಾಡಿ, ಚೆಕ್ ಪೋಸ್ಟ್ನಲ್ಲಿ ಪೊಲೀಸರು ಕಡ್ಡಾಯವಾಗಿ ಜಾಕೆಟ್ ಧರಿಸಿ ಹೆಚ್ಚು ಜವಾಬ್ದಾರಿಯಿಂದ ವರ್ತಿಸುವಂತೆ ತಿಳಿಸಿದರು. ಹಣ ಮತ್ತಿತರ ವಸ್ತುಗಳು ವಾಹನದಲ್ಲಿ ಕಂಡುಬಂದಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ಸಂಬಂದಿಸಿದ ವ್ಯಾಪ್ತಿಯ ಠಾಣೆಯಲ್ಲಿ ದೂರು ದಾಖಲಿಸುವಂತೆ ತಿಳಿಸಿದರು.
ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ವರದಿಯಲ್ಲಿನ ವ್ಯತ್ಯಾಸ ಬಗ್ಗೆ ಜಿಲ್ಲಾ ಕೇಂದ್ರದಲ್ಲಿ ಸರಿಪಡಿಸುವುದಾಗಿ ತಿಳಿಸಿದ ಅವರು ಈ ಹಿಂದಿನ ಚುನಾವಣೆಯಲ್ಲಿ ಅಕ್ರಮ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ದೂರು ದಾಖಲಾದ ವ್ಯಕ್ತಿಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಈ ಬಗ್ಗೆ ನೆಪಹೇಳದಂತೆ ಎಚ್ಚರಿಸಿದರು.
ತೋಟಗಾರಿಕೆ ಇಲಾಖೆ ನಿರ್ದೇಶಕ ಯೋಗೀಶ್ ಫ್ಲೈಯಿಂಗ್ ಸ್ಕ್ವಾಡ್ ಜವಾಬ್ದಾರಿ ಕರ್ತವ್ಯದ ಬಗ್ಗೆ ವಿವಿರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ.ರಂಗಸ್ವಾಮಿ, ತಹಸೀಲ್ದಾರ್ ಕವಿರಾಜ್, ಇಒ ಆನಂದ್ಕುಮಾರ್ ಸಹಿತ ತಾ.ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post