ಭದ್ರಾವತಿ: ಹಳೇನಗರದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರು ವಾದಿರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಮೂಲ ವೃಂದಾವನಕ್ಕೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀವಾದಿರಾಜರ ರಜತ ಬೃಂದಾವನ ಮತ್ತು ಶ್ರೀ ಮುಖ್ಯಪ್ರಾಣ ದೇವರ ರಜತ ಮೂರ್ತಿಯನ್ನು ರಥದಲ್ಲಿರಿಸಿ ಮಠದಿಂದ ಪುರಾಣ ಪ್ರಸಿದ್ಧವಾದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದವರೆಗೆ ರಥೋತ್ಸವ ನಡೆಸಲಾಯಿತು. ರಥ ಮಠಕ್ಕೆ ಹಿಂದಿರುಗಿಬಂದ ನಂತರ ಕಾಣಿಯೂರು ಮಠದ ಶ್ರೀಗಳು ಶ್ರೀವಾದಿರಾಜಸ್ವಾಮಿಗಳ ಮಹಿಮೆ ಕುರಿತು ಉಪನ್ಯಾಸ ನೀಡಿದರು.
ನೂರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಂಡಿತ ಶ್ರೀನಿವಾಸಾಚಾರ್, ಗೋಪಾಲಾಚಾರ್ ಶೇಷಗಿರಿ ಆಚಾರ್ ಮತ್ತಿತರರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















