ಸೊರಬ: ಸಿಎಂ ಕುಮಾರಸ್ವಾಮಿ ಅವರ ಅಭಿವೃದ್ದಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿದ್ದು, ಈ ಮೂಲಕ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದೇವೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.
ಸೊರಬದಲ್ಲಿಂದು ಮಾತನಾಡಿದ ಅವರು, ಈ ಭಾಗದ ರೈತರನ್ನು ಒಕ್ಕಲೆಬ್ಬಿಸಿದಾಗ ನಾನು ಇದೇ ಗ್ರಾಮದಿಂದ ಪಾದಯಾತ್ರೆ ಮಾಡಿದ್ದೆ. ಕುಬಟೂರಿಗೆ ನೀಡಿದಕ್ಕಿಂತ ಹೆಚ್ಚಿನ ಅನುದಾನವನ್ನ ಕೆರೆಹಳ್ಳಿಗೆ ನೀಡಿದ್ದೇನೆ. ಅದಕ್ಕಾದರೂ ನೀವು ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತ ನೀಡಿ ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಜಾತಿ ನೋಡದೆ ರೈತರ 2 ಲಕ್ಷ ರೂ. ಸಾಲವನ್ನು ಮನಾ ಮಾಡಿದ್ದಾರೆ. ಅವರು ಹೇಳಿದಂತೆ ನಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ರೈತರ ಮನೆಗೆ ಋಣಮುಕ್ತ ಪತ್ರವನ್ನು ತಲುಪಿಸಿದ್ದಾರೆ ಎಂದರು.

ನಾನು ಶಾಸಕನಾಗಿದ್ದ ವೇಳೆ ವಿರೋಧ ಪಕ್ಷದ ಸ್ಥಾನದಲ್ಲಿದ್ದರು, ಸಾಕಷ್ಟು ಅನುದಾನ ತಂದೆ ಆದರೆ ಚುನಾವಣೆಯಲ್ಲಿ ಸೋಲಿಸಿದಿರಿ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದಿದ್ದರೆ ಮಂತ್ರಿಯಾಗಿ ಇನ್ನಷ್ಟು ಅನುದಾನವನ್ನು ಕ್ಷೇತ್ರಕ್ಕೆ ನೀಡುತ್ತಿದ್ದೆ. ಆದರೆ ನೀವು ಅವಕಾಶ ನೀಡಲಿಲ್ಲ, ಈಗ ಕುಮಾರಣ್ಣನವರ ಕೈ ಬಲ ಪಡಿಸಬೇಕು, ನಿಮ್ಮ ಧ್ವನಿಯಾಗಿ ನಾನು ಕೇಂದ್ರ ಹೋಗಬೇಕಿದೆ ನೀವು ನನಗೆ ನಿಮ್ಮ ಮತ ನೀಡಬೇಕು ಎಂದರು.
ಕಳೆದ ಉಪಚುನಾವಣೆಯಲ್ಲಿ ಸೋಲನ್ನು ಕಂಡಿದ್ದು ನನಗೆ ನೋವಿಲ್ಲ, ಅದಕ್ಕೂ ಮುಂಚೆ ನಾನು ವಿಧಾನಸಭೆಯಲ್ಲಿ ಸೋತಿದ್ದು ನನಗೆ ಸಾಕಷ್ಟು ನೋವಾಯಿತು. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ಸೋಲನ್ನು ಕಾಣಬೇಕಾಯಿತು. ನಾನು ಸೋತ ಬಳಿಕವೂ ಕ್ಷೇತ್ರದ ಬಗ್ಗೆ ಕಾಳಜಿ ಇತ್ತು, ನಾನು ಜನಪ್ರತಿನಿಧಿಯಾಗಿಲ್ಲದಿದ್ದರು ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ತರಲು ಕೆಲಸ ಮಾಡಿದ್ದೇನೆ ಎಂದರು.
ಇನ್ನು ತಾಲೂಕಿನ ಮಾವಲಿ ಗ್ರಾಮದಲ್ಲಿ ಇಂದು ಮಧು ಬಂಗಾರಪ್ಪ ಕೈದಳ ಕಾರ್ಯರ್ತರ ಸಭೆಯಲ್ಲಿ ಪಾಲ್ಗೊಂಡರು.

ಉಪಚುನಾವಣೆಯಲ್ಲಿ ಸಮಯದ ಅಭಾವವಿರುವ ಕಾರಣ ಗ್ರಾಮಕ್ಕೆ ಬಾರದಿದ್ದರೂ ನಿಮಗೆ ಹೆಚ್ಚಿನ ಮತ ನೀಡಿದ್ದೇವೆ. ಈಗ ನೀವು ಬಂದಿದ್ದೀರಾ ನಿಮಗೆ ಇನ್ನೂ ಹೆಚ್ಚಿನ ಮತ ನೀಡಲು ನಾವು ಶ್ರಮಿಸುತ್ತೇವೆ. ಮಧು ಬಂಗಾರಪ್ಪನವರ ನೋಡಿದ್ದೇವೆ, ಕುಮಾರ ಬಂಗಾರಪ್ಪನವರ ನೋಡಿದ್ದೇವೆ. ಆದರೆ ತಂದೆಗೆ ತಕ್ಕ ಮಗ ಮಧು ಬಂಗಾರಪ್ಪ ಎಂದು ಸ್ಥಳೀಯ ಕಾರ್ಯಕರ್ತರು ಬೆಂಬಲ ನೀಡಿದರು.
ತಾಲೂಕಿನ ಶಕುವನಹಳ್ಳಿ ಕೈ-ದಳ ಕಾರ್ಯಕರ್ತರ ಜಂಟಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಮಧು, ಭರ್ಜರಿ ಪ್ರಚಾರ ಕಾರ್ಯ ಕೈಗೊಂಡರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ನಾಗರಾಜ್, ರಾಮಚಂದ್ರಪ್ಪ, ವೀರೆಂದ್ರ ಪಾಟೀಲ್, ಶಿವಲಿಂಗೇ ಗೌಡ, ಲಕ್ಷ್ಮೀ ಕಾಂತ್, ರಫೀಕ್, ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ತಾಲೂಕಿನ ಹಂಚಿ ಗ್ರಾಮದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿದ ಮಧು ಬಂಗಾರಪ್ಪ, ಸಭೆ ನಡೆಸಿದರು.

















