ನಮ್ಮ ದೇಶದಲ್ಲಿ ಗೋವಿಗೆ ಅತ್ಯಂತ ಪವಿತ್ರ ಸ್ಥಾನವನ್ನು ಕೊಡಲಾಗಿದ್ದು ಗೋವು ನಮಗೆ ತಾಯಿಯ ಸಮ. ನಮ್ಮ ಹಿಂದಿನವರು ಗೋವಿನಲ್ಲಿ ಕೋಟಿ ಕೋಟಿ ದೇವತೆಗಳನ್ನು ಕಾಣುತ್ತಾರೆ. ಗೋವಿನ ಮುಖದಲ್ಲಿ ಬ್ರಹ್ಮನನ್ನು, ಕಣ್ಣುಗಳಲ್ಲಿ ವಿಷ್ಣುವನ್ನು, ಕಂಠದಲ್ಲಿ ರುದ್ರನನ್ನೂ, ಕೊಂಬುಗಳಲ್ಲಿ ಸೂರ್ಯ ಚಂದ್ರರನ್ನೂ, ನಾಲ್ಕು ಕಾಲುಗಳಲ್ಲಿ ನಾಲ್ಕು ವೇದಗಳನ್ನೂ, ನಾಲ್ಕು ಕಾಲುಗಳ ಎಂಟೂ ಗೊರಸುಗಳಲ್ಲಿ ಅಷ್ಟದಿಕ್ಪತಿಗಳನ್ನು, ಬಾಲದಲ್ಲಿ ಸರ್ಪ ಸಂತತಿಯನ್ನು, ರೋಮಾ ರೋಮಾಗಳಲ್ಲಿ ಕೋಟಿ ಕೋಟಿ ದೇವತೆಗಳನ್ನು, ಕೆಚ್ಚಲಿನಲ್ಲಿ ಅಮೃತವನ್ನು ಕಂಡ ದೇಶ ನಮ್ಮದು.
ಗೋವು ಒಂದು ಸಾಧು ಪ್ರಾಣಿ ಹಾಗೂ ಸಾಕುಪ್ರಾಣಿಯಾಗಿರುವುದರಿಂದ ಪ್ರತಿಯೊಂದು ಮನೆಗಳಲ್ಲೂ ಕೂಡ ಗೋವನ್ನು ತಮ್ಮ ಜೀವನಾಧಾರ ಎಂಬಂತೆ ನಂಬಿಕೊಂಡು ಬಂದಿದ್ದಾರೆ. ಹಾಲು, ಮೊಸರು, ತುಪ್ಪ ಇವುಗಳು ಅತೀ ಬೇಡಿಕೆ ಇರುವ ಆಹಾರ ಪದಾರ್ಥಗಳು. ಗೋವಿನ ಎಲ್ಲಾ ಉತ್ಪನ್ನಗಳು ನಮ್ಮ ದಿನನಿತ್ಯದ ಬದುಕಿಗೆ ಅವಶ್ಯಕವಾಗಿದೆ. ಇನ್ನು ಹಳ್ಳಿಗಳಲ್ಲಿ ಕೃಷಿಯನ್ನು ಜೀವನಾಧಾರವಾಗಿಸಿಕೊಂಡ ಅದೆಷ್ಟೋ ಕುಟುಂಬಗಳ ಬದುಕಿನ ಭಾಗವಾಗಿದೆ ಗೋ ಸಾಗಾಣಿಕೆ.
ಸೂರ್ಯನಿಂದ ಉತ್ಪತ್ತಿಯಾಗುವ ಕೊಸ್ಮಿಕ್ ಕಿರಣಗಳನ್ನು ಹಸುಗಳು ತಮ್ಮ ಕೊಂಬುಗಳಲ್ಲಿ ಹೀರಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಯಕೃತ್ತು, ಮನಸ್ಸು, ಹೃದಯದ ಆರೋಗ್ಯಕ್ಕೆ ಗೋಮೂತ್ರ ಉತ್ತಮ ಔಷಧಿ ಎಂದು ಹಿಂದಿನವರು ಹೇಳುತ್ತಾರೆ. ಕ್ಯಾನ್ಸರ್ ಕಣಗಳು ನೇರವಾಗಿ ರಕ್ತವನ್ನು ಸೇರುವುದನ್ನು ತಡೆಯುವ ಶಕ್ತಿ ಗೋವಿನ ಹಾಲಿಗೆ ಇದೆ ಎಂದು ವೈದ್ಯರು ಹೇಳುತ್ತಾರೆ. ಗೋವಿನ ಹಾಲಿನಲ್ಲಿ ಹೇರಳವಾಗಿ ಕ್ಯಾರೊಟಿನಾ ಇರುದರಿಂದ ಗೋವಿನ ಹಾಲನ್ನು ನಿರಂತರವಾಗಿ ಸೇವಿಸುದರಿಂದ ಮನುಷ್ಯನ ದೇಹಕ್ಕೆ ವಿಟಮಿನ್ ಎ ದೊರೆಯುತ್ತದೆ.
ಹೀಗೆ ಹತ್ತು ಹಲವಾರು ಔಷಧಿಯ ಗುಣವನ್ನು ಹೊಂದಿರುವ ಗೋವು ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಹಲವಾರು ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರೆ. ಭಾರತದ ಈ ಪುಣ್ಯ ಭೂಮಿಯಲ್ಲಿ ಜನಿಸಿದ ಗೋವಿನಲ್ಲಿ ತಾಯಿಯನ್ನು ತಾಯಿನಾಡನ್ನು ಕಾಣುತ್ತೇವೆ. ವ್ಯವಸಾಯ ಮಾಡುವ ಹಳ್ಳಿ ಜನರ ಬದುಕಿನ ಅವಿಭಾಜ್ಯ ಅಂಗ ಗೋವುಗಳು. ಹಸುವಿನ ಗೊಬ್ಬರವನ್ನು ಕೃಷಿ ಕಾರ್ಯಗಳಿಗೆ ಬಳಸುತ್ತಾರೆ. ಗೋವು ತನ್ನ ಜೀವನದ ಕೊನೆಯ ಉಸಿರು ಇರುವ ತನಕ ಪರೋಪಕಾರಿಯಾಗಿ ಬದುಕುತ್ತದೆ.
ಈ ಭಾರತದ ಪುಣ್ಯ ನೆಲದಲ್ಲಿ ಗೋವಿಗೆ ಪೂಜನೀಯ ಸ್ಥಾನವನ್ನು ಕೊಟ್ಟು ಹಗಲು ರಾತ್ರಿ ಪೂಜಿಸುತ್ತಿದ್ದರೋ ಅದೇ ಮಣ್ಣಿನಲ್ಲಿ ಹಾಲು ಕೊಡುವ ಗೋಮಾತೆಯನ್ನು ಹಗಲು ರಾತ್ರಿಯೆನ್ನದೇ ಮಾಂಸಕ್ಕಾಗಿ ಕೊಲ್ಲುತ್ತಿದ್ದಾರೆ. ಕೊಂದ ಗೋವನ್ನು ತುಂಡು ತುಂಡಾಗಿ ಕತ್ತರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಾರೆ.
ಮನೆಯಲ್ಲಿ ಸಾಕಬೇಕಾದ ಗೋವುಗಳು ಆಹಾರಕ್ಕಾಗಿ ಬೀದಿ ಬೀದಿಗಳಲ್ಲಿ ಅಲೆಯುವಂತೆ ಮಾಡುತ್ತಾರೆ. ಪೇಟೆಯಲ್ಲಿ ಜನರು ಗೋವುಗಳನ್ನು ಸಾಕುತ್ತಾರೆ. ಆದರೆ ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಆಹಾರಕ್ಕಾಗಿ ಮಾರುಕಟ್ಟೆಗಳಲ್ಲಿ ಪೇಪರ್ ಹಾಗೂ ಪ್ಲಾಸ್ಟಿಕ್ ತಿನ್ನುವ ಗೋವುಗಳನ್ನು ನೋಡಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ.
ಇಲ್ಲಿ ನಾನು ಒಂದು ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ. ವರ್ಷಕ್ಕೆ ಒಂದೇ ಒಂದು ಕರು ಹಾಕುವ ಗೋವಿನ ಸಂತತಿ ಇನ್ನು ನಶಿಸಿಲ್ಲ. ವರ್ಷಕ್ಕೆ 4-5 ಮರಿ ಹಾಕುವ ಹುಲಿಯ ಸಂತತಿ ಅಳಿವಿನ ಅಂಚಿನಲ್ಲಿದೆ. ಇದೆ ಅಲ್ಲವೇ ದೇವರು ಧರ್ಮಕ್ಕೆ ಬೆಂಬಲಿಸುತ್ತಾನೆ. ಅಧರ್ಮವನ್ನು ಶಿಕ್ಷಿಸುತ್ತಾನೆ ಎನ್ನುದಕ್ಕೆ ಉತ್ತಮ ಉದಾಹರಣೆ.
ವಿದೇಶಗಳಿಗೆ ಗೋ ಮಾಂಸ ರಪ್ತು ಮಾಡುವ ದೇಶಗಳಲ್ಲಿ ಭಾರತ ಒಂದು ಪ್ರಮುಖ ರಾಷ್ಟ್ರ ಎಂದು ಹೇಳಿಕೊಳ್ಳಲು ನನಗೆ ಬಹಳ ಬೇಸರವಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಗೋ ಸಂತತಿಯ ಉಳಿವಿಗಾಗಿ ಹೋರಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ.
ಜೈ ಭಾರತ ಮಾತೆ, ಜೈ ಗೋ ಮಾತೆ
ಲೇಖನ: ಗೌರೀಶ್ ಆವರ್ಸೆ
Discussion about this post