ಭದ್ರಾವತಿ: ಗುರುಕರುಣೆ ಇಲ್ಲದೆ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರ ದೊರೆತಾಗ ಮಾತ್ರ ತಮ್ಮ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದು ಗೋಣಿಬೀಡು ಶ್ರೀ ಶೀಲ ಸಂಪಾದನಾ ಮಠದ ಶ್ರೀ ಡಾ.ಸಿದ್ದಲಿಂಗ ಮಹಾ ಸ್ವಾಮಿ ಹೇಳಿದರು.
ಅವರು ತಾಲೂಕಿನ ಗೋಣಿಬೀಡು ಶ್ರೀ ಮಠದಲ್ಲಿ ಏರ್ಪಡಿಸಿದ್ದ 36 ನೇ ಅನುಭಾವ ಸಂಗಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಎಲ್ಲಾ ಧರ್ಮಗಳಲ್ಲಿ ದೀಕ್ಷಾ ಸಂಸ್ಕಾರ ಮಾಡುವುದು ಕಡ್ಡಾಯ. ಜೀವನದಲ್ಲಿ ಏನನ್ನಾದರು ಸಾಧಿಸಲು ಸಂಸ್ಕಾರ ಮುಖ್ಯ. ಅನ್ಯ ಧರ್ಮಗಳಲ್ಲಿ ಅವರವರ ಪದ್ದತಿಯ ದೀಕ್ಷಾ ಸಂಸ್ಕಾರ ಸಹಜ ಪ್ರಕ್ರಿಯೆಯಾಗಿದೆ. ಪ್ರತ್ಯೇಕವಾಗಿ ಲಿಂಗಾಯಿತರಲ್ಲಿ ಇಷ್ಟಲಿಂಗ ದೀಕ್ಷೆಯ ಕುರಿತು ಸಾಕಷ್ಟು ತಪ್ಪು ಕಲ್ಪನೆ ಹೊಂದಿದ್ದಾರೆ. ಕೇವಲ ಯುವ ಜನಾಂಗ ವಿವಾಹ ಸಂಧರ್ಭದಲ್ಲಿ ಮಾತ್ರ ಸೀಮಿತಗೊಳಿಸಿದ್ದಾರೆ. ಅಂತಹ ಮಹತ್ವ ಇಷ್ಟಲಿಂಗ ತಮಲ್ಲಿದ್ದರೆ ಗುರುಕಾರುಣ್ಯ ಕಾಪಾಡುತ್ತದೆ.
ಆಧ್ಯಾತ್ಮ ಚಿಂತಕ ವಿ.ಸಂತೋಷ್ ಕುಮಾರ್ ಮಾತನಾಡಿ ಆಧ್ಯಾತ್ಮ ಮತ್ತು ಧಾರ್ಮಿಕ ಸಂಗತಿಗಳು 60 ವರ್ಷ ವಯಸ್ಸಿನ ನಂತರದವರಿಗೆ ಎಂದು ಭಾವಿಸಿರುವುದು ಸರಿಯಲ್ಲ. ಮರ ಬೆಳದು ದೊಡ್ಡದಾದ ಮೇಲೆ ಫಲ ನೀಡಬೇಕಾದಲ್ಲಿ ಪೋಷಣೆ ಅಗತ್ಯ. ಅದೇ ರೀತಿ ಮಕ್ಕಳಿಗೆ ಬಾಲ್ಯದಲ್ಲಿ ದೀಕ್ಷೆ ನೀಡಿದ್ದಲ್ಲಿ ಮುಂದೆ ಉತ್ತಮ ಸನ್ನಡತೆಯ ವ್ಯಕ್ತಿಗಳಾಗುವುದರಲ್ಲಿ ಸಂಶಯವಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ ಶ್ರೀ ಮಠದಲ್ಲಿ ನಡೆಯುವ ಅನುಭಾವ ಸಂಗಮ ಕಾರ್ಯಕ್ರಮ ಸಮಾಜ ಉತ್ತಮ ವಿಚಾರಗಳ ಪರಸ್ಪರ ವಿಮಿಮಯ ನಡೆಯುತ್ತದೆ. ಅದ್ದರಿಂದ ಪ್ರತಿಯೊಬ್ಬರು ಭಾಗವಹಿಸುವುದರ ಮೂಲಕ ಜೀವನ ಬದಲಾಯಿಸಿಕೊಳ್ಳಲು ಸಾಧ್ಯ. ಇದರಿಂದ ನೂತನ ಆಧ್ಯಾತ್ಮ ಅನುಭಾವ ಕಾಣಲು ಸಾಧ್ಯ. ಗುರುಗಳ ನುಡಿಗಳಲ್ಲಿ ಬರುವಂತಹ ನುಡಿಗಳು ಮಂತ್ರಮಯವಾಗಿರುತ್ತದೆ. ಗುರುವಿನ ತಪಸ್ಸಿನ ಶಕ್ತಿ ಅಡಗಿರುವುದರಿಂದ ಜೀವನಕ್ಕೆ ದಾರಿ ದೀಪವಾಗುತ್ತದೆ ಎಂದರು.
ಶಿಕಾರಿಪುರ ತಾಲ್ಲೂಕು ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀ ರೇವಣಸಿದ್ದ ಮಹಾಸ್ವಾಮಿಗಳು ಉದ್ಘಾಟಿಸಿದರು. ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಶಾಂತ್ ಎಸ್ ರಾವ್, ಲತಾ ನಾಗೇಶ್, ಸಂತೋಷ್ ಶಾಸ್ತ್ರಿ ದಂಪತಿಗಳಿಗೆ ಸನ್ಮಾನ ಮಾಡಲಾಯಿತು. ಚಂದ್ರಶೇಖರ್ ನುಡಿ ನಮನ ಸಲ್ಲಿಸಿದರು. ನಾಗರತ್ನ ಹಾಗು ಅನುಷ ಪ್ರಾರ್ಥಿಸಿ, ಹೆಚ್.ವಿ.ವಿಶ್ವನಾಥ್ ಸ್ವಾಗತಿಸಿದರೆ, ಎಸ್.ಕೆ.ಶೇಖರಪ್ಪ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post