ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಬ್ರಿಟೀಷರ ವಿರುದ್ಧ ರಣಕಹಳೆ ಊದಿದ ಈಸೂರು ಗ್ರಾಮದ ಸ್ವಾತಂತ್ರ ಹೋರಾಟಗಾರ ಹುಚ್ಚರಾಯಪ್ಪ (104) ಅವರು ವಿಧಿವಶರಾಗಿದ್ದಾರೆ.
104ವರ್ಷ ವಯಸ್ಸಾಗಿತ್ತು. 4ಜನ ಗಂಡು ಮಕ್ಕಳು, ಓರ್ವ ಮಗಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಎನ್.ಎಸ್.ಹುಚ್ಚರಾಯಪ್ಪ ಅವರಿಗೆ ಅಂದಿನ ಬ್ರಿಟೀಷ್ ಸರ್ಕಾರ ಮರಣದಂಡಣೆ ಘೋಷಿಸಿತ್ತು. ಹುಚ್ಚರಾಯಪ್ಪ ಅವರು ಅಪ್ರಾಪ್ತ ವಯಸ್ಕರಾಗಿದ್ದರಿಂದಾಗಿ ಸರ್ಕಾರವು ಘೋಷಿಸಿದ್ದ ಮರಣದಂಡನೆಯನ್ನು ಬದಲಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಅನೇಕ ವಿಶೇಷ ಮತ್ತು ಗಂಭೀರ ಎನಿಸುವಂತಹ ಘಟನೆಗಳು ನಡೆದು ಚರಿತ್ರಾರ್ಹ ಎನಿಸಿದವು. ಚಳುವಳಿಗಳು ನಿರಂತರವಾಗಿದ್ದವು. ವಿದ್ಯಾರ್ಥಿಗಳು, ಯುವ ಸಮುದಾಯ, ಸತ್ಯಾಗ್ರಹಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು. ಇನ್ನೂ ಕೆಲವರು ಭೂಗತರಾಗಿ ಚಳುವಳಿಗೆ ಜೀವತುಂಬಲು ಕಲ್ಲಚ್ಚಿನಿಂದ ಪತ್ರಿಕೆಗಳನ್ನು ಮುದ್ರಿಸಿ ವಿತರಿಸಿದರು.
ಕಂದಾಯ ವಸೂಲಿ ವಿರುದ್ಧ ಪ್ರತಿಭಟನೆ ನಡೆಸಿ, ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡ ದೇಶದ ಏಕೈಕ ಗ್ರಾಮ ಈಸೂರು. ಈಸೂರಿನ ಗ್ರಾಮಸ್ಥರು ತಮ್ಮದೇ ಆದ ಸರ್ಕಾರವನ್ನು ರಚಿಸಿಕೊಂಡು ಆಡಳಿತ ನಡೆಸಲು ಹೋರಾಟ ನಡೆಸಿದವರಲ್ಲಿ ಪ್ರಮುಖಪಾತ್ರ ವಹಿಸಿದ್ದ ಅನೇಕರಲ್ಲಿ ಹುಚ್ಚರಾಯಪ್ಪ ಅವರೂ ಒಬ್ಬರು.
ಸ್ವತಂತ್ರ ಹಳ್ಳಿ ಎಂದು ಘೋಷಿಸಿಕೊಂಡು ಆಡಳಿತ ನಡೆಸುತ್ತಿದ್ದ ಈಸೂರು ಗ್ರಾಮಸ್ಥರ ಮೇಲೆ, ಅಮಾಯಕರು, ನಿರಪರಾಧಿಗಳ ಮೇಲೆ ಬ್ರಿಟೀಷ್ ಸರ್ಕಾರದ ಅಣತಿಯಂತೆ ಬ್ರಿಟೀಷ್ ಅಧಿಕಾರಿಗಳು ಲಾಠಿ ಪ್ರಹಾರ ನಡೆಸಿದರು. ಇದರಿಂದ ರೊಚ್ಚಿಗೆದ್ದ ಜನ ಅಮಲ್ದಾರ ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಂದುಹಾಕಿದರು. ಇದರಿಂದಾಗಿ ಹಳ್ಳಿಯವರು ಪೊಲೀಸರ ದೌರ್ಜನ್ಯಕ್ಕೆ ಒಳಗಾದರು. ಬ್ರಿಟೀಷ್ ಆಡಳಿತಗಾರರು 05ಮಂದಿಯನ್ನು ಗಲ್ಲಿಗೇರಿಸಿ ಸೇಡು ತೀರಿಸಿಕೊಂಡರು.
ಭಾರತ ಬ್ರಿಟೀಷರ ಸಂಕೋಲೆಯಿಂದ ಬಿಡುಗಡೆಗೊಳ್ಳಲು, ಸ್ವತಂತ್ರ ದೇಶದ ಕನಸು ಕಂಡ ನಾಡಿನ ಅಸಂಖ್ಯಾತ ಮಹನೀಯರು ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಶಾಂತಿಯುತ ಹೋರಾಟ ನಡೆಸಿದರು. ಚಳುವಳಿ, ಸತ್ಯಾಗ್ರಹಗಳನ್ನು ಕೈಗೊಂಡರು. ಅನೇಕ ಹಿರಿಯರ ತ್ಯಾಗ ಬಲಿದಾನದ ನಂತರ ಭಾರತ ಸ್ವತಂತ್ರ ದೇಶವಾಗಿ ಘೋಷಿಸಲ್ಪಟ್ಟದ್ದು ಎಲ್ಲರಿಗೂ ತಿಳಿದ ಸಂಗತಿ.
ಈ ಸ್ವಾತಂತ್ರ್ಯಕ್ಕೂ ಮುನ್ನ ದೇಶದಾದ್ಯಂತ ಅನೇಕ ಭಾಗಗಳಲ್ಲಿನ ಹೋರಾಟಗಾರರು ತಮ್ಮ ತಮ್ಮ ಪ್ರದೇಶಗಳಲ್ಲಿ ಒಟ್ಟುಗೂಡಿ ಅನೇಕ ಕಾರ್ಯಾಚರಣೆಗಳನ್ನು ನಡೆಸಿ, ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಂಡು ಬ್ರಿಟೀಷ್ ಸರ್ಕಾರಕ್ಕೆ ವಿರುದ್ದವಾಗಿ ಸೆಟೆದು ನಿಂತರು. ಶಿಕ್ಷೆಗಳನ್ನು ಅನುಭವಿಸಿದರು. ವೀರಮರಣವನ್ನಪ್ಪಿದರು. ಬ್ರಿಟೀಷರ ಆದೇಶ, ಶಿಕ್ಷೆಗೆ ಹೆದರಿ ಶರಣಾಗತರಾಗದೆ ನಗುನಗುತ್ತಾ ಗಲ್ಲಿಗೇರಿದರು. ಹುತಾತ್ಮರಾದರು ಎಂಬುದು ನೆನೆದಾಗ ಎಂತಹ ಕಠಿಣ ಹೃದಯಿಗೂ ಕಣ್ತುಂಬಿ ಬರದೆ ಇರಲಾರದು.
ಇಂತಹ ಮಹತ್ವದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದ ಹುಚ್ಚರಾಯಪ್ಪ ಅವರನ್ನು ದೇಶದ ಪ್ರಧಾನಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ತಾಮ್ರಪತ್ರ ನೀಡಿ ಗೌರವಿಸಿದ್ದರು. ಅಲ್ಲದೇ ಆಡಳಿತಾರೂಢ ಸರ್ಕಾರಗಳು ಹುಚ್ಚರಾಯಪ್ಪ ಅವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ ಅಲ್ಲದೇ ಸ್ಥಳೀಯ ಸಂಘ-ಸಂಸ್ಥೆಗಳ ಹತ್ತು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಕಂಬನಿ
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈಸೂರಿನ ಸ್ವಾತಂತ್ರ್ಯ ಹೋರಾಟಗಾರ ಎನ್.ಎಸ್.ಹುಚ್ಚರಾಯಪ್ಪ ಅವರ ನಿಧನದಿಂದಾಗಿ ದೇಶ ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಂತಾಗಿದೆ. ಇವರ ಕುಟುಂಬಕ್ಕೆ ಮೃತರ ನೋವನ್ನು ನೀಗಿಸುವ ಶಕ್ತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ತಾಲೂಕು ಬ್ಲಾಕ್ ಕಾಂಗ್ರೆಸ್ ಆದ್ಯಕ್ಷ ಗೋಣಿ ಮಾಲತೇಶ್ ಸೇರಿದಂತೆ ಅನೇಕ ಗಣ್ಯ ಮಾನ್ಯರು ಹಾಗೂ ಬಂಧು ಮಿತ್ರರು ಸಂತಾಪ ವ್ಯಕ್ತಪಡಿಸಿದ್ದಾರೆ.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Get In Touch With Us info@kalpa.news Whatsapp: 9481252093
Discussion about this post