ನವದೆಹಲಿ, ಸೆ.6: ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡುವಂತೆ ಭಾರತದ ಕುಸ್ತಿ ಫೆಡರೇಷನ್ ಶಿಫಾರಸು ಮಾಡಿದೆ.
ಸುಶೀಲ್ ಕುಮಾರ್ ಒಲಂಪಿಕ್ಸ್ ನ ವೈಯಕ್ತಿಕ ವಿಭಾಗದಲ್ಲಿ ಎರಡು ಬಾರಿ ಪದಕ ಜಯಿಸಿದ್ದಾರೆ. 2008ರ ಬೀಜಿಂಗ್ ಒಲಂಪಿಕ್ಸ್ ನಲ್ಲಿ ಕಂಚು ಹಾಗೂ 2012 ರ ಲಂಡನ್ ಒಲಂಪಿಕ್ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಹಿನ್ನಲೆಯಲ್ಲಿ ಕುಸ್ತಿ ಫೆಡರೇಷನ್ ಪದ್ಮ ಭೂಷಣ ಪುರಸ್ಕಾರಕ್ಕೆ ಶಿಫಾರಸು ಮಾಡಿದೆ.
2016ರ ರಿಯೋ ಒಲಂಪಿಕ್ಸ್ ನಲ್ಲಿ ಗಾಯದ ಕಾರಣ ಸುಶಿಲ್ ಅರ್ಹತೆ ಪಡೆದಿರಲಿಲ್ಲ. ನರಸಿಂಗ್ ಯಾದವ್ ಅವರೊಂದಿಗೆ ಟ್ರಯಲ್ ನಡೆಸಿ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅವಕಾಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರೂ, ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತ್ತು. ನರಸಿಂಗ್ ಯಾದವ್ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದರೂ ಡೋಪಿಂಗ್ ಟೆಸ್ಟ್ ನಲ್ಲಿ ಅನುತ್ತೀರ್ಣಗೊಂಡ ಹಿನ್ನಲೆಯಲ್ಲಿ ಅವಕಾಶ ಕೈಜಾರಿತ್ತು. ಎರಡು ವರ್ಷಗಳ ಹಿಂದೆ ಪದ್ಮ ಪುರಸ್ಕಾರಕ್ಕೆ ಸುಶೀಲ್ ಕುಮಾರ್ ಹೆಸರು ಕೇಳಿಬಂದಿತ್ತಾದರೂ ಪ್ರಶಸ್ತಿ ಸಿಕ್ಕಿರಲಿಲ್ಲ. ಈಗ ಅವರ ಸಾಧನೆ ಪರಿಗಣಿಸಿ ಕುಸ್ತಿ ಫೆಡರೇಷನ್ ಪದ್ಮ ಭೂಷಣಕ್ಕೆ ಶಿಫಾರಸು ಮಾಡಿದೆ.
ಸುಶೀಲ್ ಕುಮಾರ್ ಕೋಚ್ ಯಶ್ವಿರ್ ಸಿಂಗ್ ಗೆ ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಮಹಿಳಾ ಕುಸ್ತಿಪಟು ಅಲ್ಕಾ ಥೋಮರ್ ಅವರಿಗೂ ಪ್ರಶಸ್ತಿ ನೀಡುವಂತೆ ಆಗ್ರಹಿಸಲಾಗಿದೆ















