ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಮೀಸಲಾತಿ ಹೋರಾಟಗಳು, ಮುಕ್ತ ಅಭಿವ್ಯಕ್ತಿ, ಜನಸಾಮಾನ್ಯರ ಆಹಾರ ಮತ್ತು ವೈಯಕ್ತಿಕ ಆಯ್ಕೆಗಳನ್ನು ನಿಯಂತ್ರಿಸಲು ಹಲವು ಶಕ್ತಿಗಳು ಯತ್ನಿಸುತ್ತಿರುವ ಈ ಕಾಲಮಾನದಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರಂತಹ ದಿಟ್ಟ ಹೋರಾಟಗಾರರು- ಹೋರಾಟಗಳ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ವಿಭಾಗದ ಸಂಚಾಲಕ ಗುರುಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಪ್ರೊ. ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ವತಿಯಿಂದ ವಿವಿಯ ಪ್ರೊ. ಹಿರೇಮಠ್ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ‘ದಲಿತ ಚಳವಳಿ’ ವಿಚಾರ ಸಂಕಿರಣದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರೊ. ಬಿ. ಕೃಷ್ಣಪ್ಪ ಅವರು ಹತ್ತಾರು ಬಗೆಯ ಸಾಮಾಜಿಕ ಹೋರಾಟಗಳನ್ನು ಸಂಘಟಿಸಿದವರು. ದಲಿತ ವ್ಯಕ್ತಿಗಳ ಕೊಲೆ ವಿರುದ್ಧ, ಅತ್ಯಾಚಾರಗಳ ವಿರುದ್ಧ ಪ್ರತಿಭಟನೆ, ಚಂದ್ರಗುತ್ತಿ ಬೆತ್ತಲೆ ಸೇವೆ ರದ್ದು, ಸಿದ್ಲಿಪುರದ ಭೂ ಹೋರಾಟ ಸೇರಿದಂತೆ ಅಸ್ಪೃಶ್ಯತೆ, ಹೆಣ್ಣುಮಕ್ಕಳ ಗೌರವ, ಜಾತಿ ನಿರ್ಮೂಲನೆ, ಸಾರ್ವಜನಿಕ ಸ್ಥಳಗಳ ಪ್ರವೇಶ, ಭೂಸುಧಾರಣೆ ಸೇರಿದಂತೆ ವೈವಿಧ್ಯಮಯ ವಿಷಯಗಳಲ್ಲಿ ಚಳವಳಿಗಳನ್ನು ರೂಪಿಸಿದವರು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಸಮುದಾಯಗಳ ಮುಂದುವರಿದ ಭಾಗವಾಗಿ ಪ್ರಭುತ್ವಗಳೇ ಇಂದು ಜನಸಾಮಾನ್ಯರನ್ನು ದಮನಿಸುವ ಕೆಲಸಕ್ಕೆ ಮುಂದಾಗಿವೆ. ಪ್ರೊ. ಭಗವಾನ್ರ ವಿಚಾರಗಳನ್ನು ವೈಚಾರಿಕವಾಗಿ ಎದುರಿಸದೇ ಮಸಿಬಳಿದು ಸಂವಿಧಾನಕ್ಕಿಂತ ಧರ್ಮ ಮುಖ್ಯ ಎನ್ನಲಾಗುತ್ತಿದೆ. ದಲಿತ ಅಸ್ಮಿತೆಯ ಮೂಲವಾದ ದಲಿತ ಪದವನ್ನೇ ಸರ್ಕಾರಿ ಪದಕೋಶದಿಂದ ತೆಗೆದು ಹಾಕುವ ಆದೇಶ ಹೊರಡಿಸಲಾಗಿದೆ ಎಂದರು.
ಸರ್ಕಾರವನ್ನು ಟೀಕಿಸಿದಲ್ಲಿ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗುತ್ತದೆ. ಸಮಾಜ ಉದ್ಧರಿಸಬೇಕಾದ ಸ್ವಾಮೀಜಿಗಳು ಮೀಸಲಾತಿ ಹೋರಾಟಗಳಿಗೆ ಇಳಿದಿದ್ದಾರೆ. ಯಾವ ಆಹಾರವನ್ನು ತಿನ್ನಬೇಕು, ಯಾರನ್ನು ಪ್ರೀತಿಸಬೇಕು ಎಂಬುದನ್ನು ಕಾನೂನುಗಳ ಮೂಲಕವೇ ನಿಯಂತ್ರಿಸಲು ಹೊರಟಿರುವಂತಹ ಈ ಆತಂಕಕಾರಿ ದಿನಗಳಲ್ಲಿ ಗಟ್ಟಿಯಾಗಿ ದನಿಯೆತ್ತಬಲ್ಲಂತಹ ಪ್ರೊ. ಬಿ. ಕೃಷ್ಣಪ್ಪ ಇಂದು ಹೆಚ್ಚು ಅಗತ್ಯವಾಗಿದ್ದರು. ವಿಶ್ವವಿದ್ಯಾಲಯಗಳಲ್ಲಿರುವ ಪ್ರೊ. ಕೃಷ್ಣಪ್ಪ, ಜಗಜೀವನ್ರಾಂ, ಬಸವಣ್ಣ, ಅಂಬೇಡ್ಕರ್ರಂತಹ ಅಧ್ಯಯನ ಪೀಠಗಳು ಕ್ಯಾಂಪಸ್ನಿಂದ ಹೊರಬಂದು ಸಮಾಜದಲ್ಲಿ ಹಲವು ವಿಧಧ ಶೋಷಣೆಗಳ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪ ಅವರು ಹರಿಹರ, ಚಿತ್ರದುರ್ಗಗಳಲ್ಲಿ ನಡೆದ ಚಳವಳಿಗಳ ವೇದಿಕೆಯಿಂದಲೇ ದಲಿತರಿಗೆ ದೇವಾಲಯಗಳ ಬದಲಿಗೆ ಸಂಸತ್ತು, ಶಾಸನಸಭೆಗಳಿಗೆ ಪ್ರವೇಶಕ್ಕೆ ಕರೆಕೊಟ್ಟಿದ್ದನ್ನು ನಾನು ಸ್ವತಃ ನೋಡಿದ್ದೇನೆ. ಶಿಕ್ಷಿತರಲ್ಲೇ ಹೆಚ್ಚಿನ ಮೌಢ್ಯ ಆಚರಣೆ, ದುರಾಸೆಯ ಪ್ರವೃತ್ತಿಗಳು, ಅಸಮಾನತೆಯ ಮನೋಭಾವನೆಗಳು ಇರುವ ಈ ಕಾಲದಲ್ಲಿ ಕೃಷ್ಣಪ್ಪ ಅವರಂತಹ ಹೋರಾಟಗಾರರ ಅವಶ್ಯಕತೆಯಿದೆ. ಹೀಗಾಗಿಯೇ ಅವರನ್ನು ನಾವು ಕರ್ನಾಟಕದ ಅಂಬೇಡ್ಕರ್ ಎಂದು ಹೆಮ್ಮೆಯಿಂದ ಕರೆಯುತ್ತೇವೆ ಎಂದರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಕಣ್ಣನ್, ಪ್ರೊ. ಬಿ.ಕೃಷ್ಣಪ್ಪ, ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಶಿವಾನಂದ ಕೆಳಗಿನಮನಿ, ಕನ್ನಡ ಭಾರತಿ ವಿಭಾಗದ ಪ್ರೊ. ಪ್ರಶಾಂತ್ನಾಯ್ಕ್, ಡೊಮಿನಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post