ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ವೇತನದಲ್ಲಿ ಕಡಿತವಾಗುತ್ತಿರುವ ಪಿಎಫ್ ಹಣದ ಶೇಕಡ ಮೊತ್ತವನ್ನು ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿ ಪೌರ ಕಾರ್ಮಿಕರು ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವೇತನದಲ್ಲಿ ಪ್ರತಿ ತಿಂಗಳು ಕಡಿತವಾಗುವ ಪಿಎಫ್ ಹಣದಲ್ಲಿ ಶೇಕಡ ಮೊತ್ತವನ್ನು ಪಡೆಯಲು ಅವಕಾಶವಿದೆ. ಆ ಹಣವನ್ನು ಖಾತೆಗೆ ಜಮಾ ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೌರ ಕಾರ್ಮಿಕ ನಾರಾಯಣಪ್ಪ ದೂರಿದರು.
ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯವನ್ನು ಪೌರ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕು ಎಂದು ಅಂಜನಪ್ಪ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಮಾತನಾಡಿ, ಇಎಸ್ಐ ಹಾಗೂ ಪಿಎಫ್ ಸೇರಿದಂತೆ ವೇತನದ ಯಾವುದೇ ಹಣ ದುರುಪಯೋಗವಾಗಿಲ್ಲ. ಕಡಿತ ಮಾಡಲಾಗಿರುವ ಹಣವನ್ನು ಕೇಳಿದ ತಕ್ಷಣ ಬಿಡಿಸಿಕೊಡಲು ಆಗುವುದಿಲ್ಲ. ಆಗಿರುವ ದೋಷವನ್ನು ಆಲ್ಲೈನ್ನಲ್ಲಿ ಸರಿಪಡಿಸಬೇಕು ಎಂದು ಪೌರ ಕಾರ್ಮಿಕರಿಗೆ ತಿಳಿವಳಿಕೆ ಹೇಳಿದರು.
ಕೆಲ ಪೌರಕಾರ್ಮಿಕರ ಖಾತೆಗೆ 50-60 ಸಾವಿರ ರೂ. ಜಮಾ ಆಗಿದೆ. ನೇರ ನೇಮಕಾತಿ ಸಂದರ್ಭದಲ್ಲಿ ಆಧಾರ್ ಕಾರ್ಡ್ಗಳನ್ನು ತಿದ್ದುಪಡಿ ಮಾಡಿರುವ ಕಾರ್ಮಿಕರಿಗೆ ತೊಂದರೆಯಾಗಿದೆ. ಡಿಜಿಟಲ್ ಕೀಯಿಂದ ಆನ್ಲೈನ್ ಮೂಲಕ ಸರಿಪಡಿಸಲು ಕಾಲಾವಕಾಶ ಬೇಕಾಗುತ್ತದೆ ಎಂದು ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಹೇಳಿದರು.
ಕಡಿತ ಮಾಡಿರುವ ಪಿಎಫ್ನ ಹಣವನ್ನು ಖಾತೆ ಜಮಾ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಪಾಲಯ್ಯ ಪೌರ ಕಾರ್ಮಿಕರಿಗೆ ಭರವಸೆ ನೀಡಿದರು.
ಪೌರಕಾರ್ಮಿಕ ಬಸವರಾಜ, ಅಂಜನಪ್ಪ, ಕೊಲ್ಲಮ್ಮ, ಲಕ್ಷ್ಮೀದೇವಿ, ಪಾಲಮ್ಮ, ಭೀಮಣ್ಣ, ರಾಮಚಂದ್ರಪ್ಪ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post