ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ: ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ತಂದೆಯ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಪುತ್ರನಿಗೆ ಒಂದನೆಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ 6 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಾಪೂಜಿ ನಗರದ ವಾಸಿ ಓ. ಪ್ರಕಾಶ (65) ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಇವರ ಪುತ್ರ ಹರ್ಷ ಎಂಬಾತ ಆಸ್ತಿ ವಿಚಾರವಾಗಿ ತಂದೆಯ ಜತೆ ಜಗಳವಾಡಿ, 2019ರ ನವೆಂಬರ್ 10ರಂದು ತಂದೆಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಅವರ ಎಡಕಿವಿ, ಭುಜ ಮತ್ತು ಎಡಕೈಗಳಿಗೆ ಗಂಭೀರ ಗಾಯಗಾಳಾಗಿದ್ದವು. ಹಾಗೂ ಈ ಸಂಬಂಧ ಓ. ಪ್ರಕಾಶ್ ಅವರ ಪತ್ನಿ ಎನ್. ಎಸ್. ಗೀತಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ.

ಪ್ರಕರಣದ ಕುರಿತು ತನಿಖೆ ನಡೆಸಿದ ನಗರ ಠಾಣೆಯ ಪೊಲೀಸ್ ನಿರೀಕ್ಷಕ ನಹೀಂ ಅಹಮದ್ ಆರೋಪಿ ಹರ್ಷ ವಿರುದ್ದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವಿವರವಾದ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಒಂದನೆಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪ ಸಾಬೀತಾಗಿದ್ದ ಕಾರಣ ಕಲಂ. 235(2) ಸಿಆರ್ಪಿಸಿ ರೀತ್ಯ ಆರೋಪಿ ಹರ್ಷನಿಗೆ ಕಲಂ. 307 ಐ.ಪಿ.ಸಿ. ಅಡಿಯಲ್ಲಿ ೬ ವರ್ಷಗಳ ಸಾದಾ ಶಿಕ್ಷೆ ಹಾಗೂ 30,000ರೂ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಿಷ್ಪಕ್ಷಪಾತ ತನಿಖೆ ನಡೆಸಿ ಅರೋಪಿಗೆ ಶಿಕ್ಷೆಯಾಗಲು ಸಹಕರಿಸಿದ ಪೊಲೀಸ್ ನಿರೀಕ್ಷಕ ನಹೀಂ ಅಹಮದ್ ಅವರ ಕಾರ್ಯವನ್ನು ಪೊಲೀಸ್ ಅಧೀಕ್ಷಕಿ ಜಿ. ರಾಧಿಕಾ ಶ್ಲಾಘಿಸಿದ್ದಾರೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















