ಕಲ್ಪ ಮೀಡಿಯಾ ಹೌಸ್
ಸೊರಬ: ಈಚೆಗಷ್ಟೆ ಐತಿಹಾಸಿಕ ಮಹತ್ವವುಳ್ಳ ಹಳೇಸೊರಬ ಕಾನನ್ನು ಜೀವವೈವಿಧ್ಯ ತಾಣ ಹೆಸರಿನಡಿಯಲ್ಲಿ ಕಾಯ್ದಿಟ್ಟ ಅರಣ್ಯ ಎಂದು ಹಳೇಸೊರಬ ಗ್ರಾಪಂ ಮತ್ತು ರಾಜ್ಯ ಜೀವವೈವಿಧ್ಯ ಮಂಡಳಿ ಘೋಷಿಸಿತ್ತು. ಹಲವು ವರ್ಷಗಳ ಹಿಂದೆ ಇದೇ ಕಾಡನ್ನು ದೇವರಕಾಡು ಎಂದು ಪಶ್ಚಿಮಘಟ್ಟ ಕಾರ್ಯಪಡೆ ಘೋಷಿಸಿತ್ತು. ರಾಜ್ಯದಲ್ಲಿಯೆ ವಿಶೇಷ ಎನಿಸಿರುವ ಮಲೆನಾಡಿಗೆ ಅತ್ಯಗತ್ಯವಾಗಿರುವ ಇಂತಹ ತಾಣದಲ್ಲಿ ಅಪಾರ ಪ್ರಮಾಣದ ನಾಟ ಕಡಿತಲೆಯಾಗಿರುವುದು ಖಂಡನೀಯ ಎಂದು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್ ಹೇಳಿದ್ದಾರೆ.
ತಾಲ್ಲೂಕು ಹಳೆಸೊರಬ ವ್ಯಾಪ್ತಿಯ ಸರ್ವೆ ನಂ. 245ರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಲಕ್ಷಾಂತರ ರೂ., ಬೆಲೆ ಬಾಳುವ ಮರಗಳನ್ನು ಕಡಿತಲೆ ಮಾಡಿ ಆರೋಪಿಗಳು ಸೆರೆಯಾಗಿರುವ ಹಿನ್ನೆಲೆಯಲ್ಲಿ ಪರಿಸರ ಜಾಗೃತಿ ಟ್ರಸ್ಟ್, ಹಸಿರು ಮಡಿಲು ಹಾಗೂ ಇನ್ನೂ ಅನೇಕ ಪರಿಸರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಕೊರೋನಾ ಲಾಕ್ಡೌನ್ ಮರಗಳ್ಳರಿಗೆ ವರದಾನವಾಗಿದೆ. ಇಂದು ಸೊರಬ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮನೆಗೊಂದರಂತೆ ಮರಕಡಿಯಲೆಂದೆ ಅತ್ಯಾಧುನಿಕ ಯಂತ್ರೋಪಕರಣಗಳು ಬಂದಿವೆ. ವಿಶೇಷವಾಗಿ ಸೊರಬ ಭಾಗದ ಹಳೆಸೊರಬ, ಸಾರೆಕೊಪ್ಪ, ಸಂಪಗೋಡು, ಜಂಬಳ್ಳಿ, ಕಂತನಹಳ್ಳಿ, ತವನಂದಿ ಕಾಡುಗಳಲ್ಲಿ ಬೆಲೆಬಾಳುವ ದೇವದಾರು, ಹಲಸು, ಹೊನ್ನೆ, ಜಂಬೆ, ಬೀಟೆ ಮುಂತಾದ ಮರಗಳು ಉಳಿದುಕೊಂಡಿದ್ದು, ವ್ಯಾಪಾರಿ ದೃಷ್ಟಿಯಿಂದ ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡಿ ಸಾಗಿಸುತ್ತಿರುವುದು ಆತಂಕಕಾರಿ ಸಂಗತಿ. ಹೋದವರ್ಷ ಕೂಡ ಲಾಕ್ಡೌನ್ ಅವಧಿಯಲ್ಲಿ ಮರಗಳ್ಳತನದ ಜೊತೆಗೆ ಬಗರ್ಹುಕುಂ ಹಾವಳಿ ಅಧಿಕವಾಗಿತ್ತು. ಇಂತವರಿಗೆ ರಾಜಕೀಯ ಪ್ರೇರಣೆ, ಕುಮ್ಮಕ್ಕು ಇದ್ದು, ಇದೇ ಪರಿಪಾಟ ಮುಂದುವರೆದರೆ ಸೊರಬ ಶೀಘ್ರದಲ್ಲಿಯೆ ಬಯಲುನಾಡು ಆಗುವುದರಲ್ಲಿ ಸಂದೇಹವಿಲ್ಲ ಎಂದು ಹಸಿರುಮಡಿಲಿನ ಅನ್ಸರ್ ಖೇದ ವ್ಯಕ್ತಪಡಿಸಿದ್ದಾರೆ.
ಮರಗಳ್ಳರು ಬಲೆಗೆ:
ಖಚಿತ ಮಾಹಿತಿ ಮೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳಾದ ಡಿಎಫ್ಒ ಮೋಹನ್ ಕುಮಾರ್, ಎಸಿಎಫ್ ಪ್ರವೀಣ್ಕುಮಾರ್ ಬಸರೂರು ಮಾರ್ಗದರ್ಶನದಲ್ಲಿ ಆರ್ಎಫ್ಒ ಪ್ರಭುರಾಜ ಪಾಟೀಲ್ ನೇತೃತ್ವದ ತಂಡದಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ಶ್ರೀಕಾಂತ್ ರಾಥೋಡ್, ಮುತ್ತಣ್ಣ, ಹನುಮಂತಪ್ಪ, ಅರಣ್ಯ ವೀಕ್ಷಕ ಮಂಜುನಾಥ್ ಇದ್ದು ದಾಳಿ ನಡೆಸಿದೆ. ಕಡಿತಲೆ ಮಾಡಿದ ಮರಗಳ ಸಮೇತ ಆರೋಪಿತರಾದ ಸುರೇಶ್ ನಾರಾಯಣ ಆಚಾರ್, ಪ್ರಶಾಂತ್ ಪರಶುರಾಮ್, ಕೃತಿಕ್ ಗೋವಿಂದಪ್ಪ ಅವರನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್, ಟ್ರ್ಯಾಕ್ಟರ್, ಮರಗಳ ಕಡಿತಲೆ ಮಿಷನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ನೋಂದಣಿಯಾಗದ ಟ್ರ್ಯಾಕ್ಟರ್ಗಳು ಮತ್ತು ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಕಡಿತಲೆಗೊಂಡಿರುವ ಮರಗಳನ್ನು ವಶಕ್ಕೆ ಪಡೆಯಬೇಕಿದ್ದು, ಕೃತ್ಯದಲ್ಲಿ ಪಾಲ್ಗೊಂಡ ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ವಿವಿದೆಡೆಯಿಂದ ಲಾಕ್ಡೌನ್ ನಿಮಿತ್ತ ಸ್ವಸ್ಥಾನಕ್ಕೆ ಆಗಮಿಸಿರುವ ಯುವಕರ ದಂಡು ಕಾಡುಗಳ್ಳತನದಂತಹ ದುಷ್ಕೃತ್ಯಕ್ಕೆ ಮುಂದಾಗಿರುವುದು ತೀರಾ ಆತಂಕಕಾರಿ ಸಂಗತಿ. ಈ ನಿಟ್ಟಿನಲ್ಲಿ ಯಾವುದೇ ರಾಜಕೀಯ, ಕೆಲಸಕ್ಕೆ ಬಾರದ ಮುಂಖಂಡರ ಮಾತಿಗೆ ಮಾನ್ಯತೆ ನೀಡದೆ ಇಂತಹ ಕೃತ್ಯ ಎಸಗುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ವೇಳೆ ಇಲಾಖೆ ಜಾಗೃತವಾಗಿರಬೇಕು.
ಶ್ರೀಪಾದ ಬಿಚ್ಚುಗತ್ತಿ
ತಜ್ಞ ಸಮಿತಿ ಸದಸ್ಯರು, ರಾಜ್ಯ ಜೀವವೈವಿಧ್ಯ ಮಂಡಳಿ
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post