ಕಲ್ಪ ಮೀಡಿಯಾ ಹೌಸ್
ಸಾಗರ: ಕೋವಿಡ್19 ಈ ತುರ್ತು ಪರಿಸ್ಥಿತಿಯಲ್ಲಿ ಉಪವಿಭಾಗೀಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಕೋವಿಡ್19 ಸಂದರ್ಭದಲ್ಲಿ ಸೋಂಕಿನ ನಿಯಂತ್ರಣ ಹಾಗೂ ಸೋಂಕಿತರಿಗೆ ಅನುಕೂಲವಾಗುವಂತೆ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.
ಉಪವಿಭಾಗೀಯ ಆಸ್ಪತ್ರೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ 7 ಲೀಟರ್ ಸಾಮರ್ಥ್ಯದ 10 ಕಾನ್ಸನ್ಟ್ರೇಟರ್ ಹಾಗೂ ಎಂಎಸ್’ಐಎಲ್ ವತಿಯಿಂದ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಸರಬರಾಜು ಮಾಡಲಾಗುತ್ತಿದ್ದು, ಉಪ ವಿಭಾಗೀಯ ಆಸ್ಪತ್ರೆಗೆ 150 ಕಿ.ವ್ಯಾ ಸಾಮರ್ಥ್ಯದ ಜನರೇಟರ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಉಪ ವಿಭಾಗೀಯ ಆಸ್ಪತ್ರೆಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ನಿರ್ಮಾಣವಾಗಲಿದ್ದು, ಆಸ್ಪತ್ರೆಯ 40 ಹಾಸಿಗಳ ಕೊಠಡಿ ದುರಸ್ಥಿ ಶೀಘ್ರ ನಡೆಯಲಿದೆ ಎಂದರು.
ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಮೊದಲಿದ್ದ 53 ಆಕ್ಸಿಜನ್ ಬೆಡ್’ಗಳ ಸಂಖ್ಯೆಯನ್ನು 117ಕ್ಕೆ ಏರಿಸಲಾಗಿದ್ದು, ಜಂಬಗಾರು ವಿದ್ಯಾರ್ಥಿನಿ ನಿಲಯದಲ್ಲಿ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ನಿರ್ಮಾಣವಾಗಲಿದೆ ಎಂದರು.
ಕೋವಿಡ್ ಪೀಡಿತ ರೋಗಿಗಳಿಗೆ (250) ಪ್ರತಿನಿತ್ಯ ಊಟ ವಿತರಣೆಯಾಗುತ್ತಿದ್ದು, ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದೆ ಎಂದರು.
ಸರ್ಕಾರದ ವತಿಯಿಂದ 30 ಆಕ್ಸಿಜನ್ ಬೆಡ್’ಗಳ ಖಾಸಗಿ ಆಸ್ಪತ್ರೆ ವಹಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಹಾಲಿ 15 ಜನ ದಾಖಲಾಗಿದ್ದಾರೆ. ಉಪ ವಿಭಾಗೀಯ ಆಸ್ಪತ್ರೆಯ ಕೋವಿಡ್ ರೋಗಿಗಳಿಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಶವ ಸಾಗಣಿಕೆಗೆ ಪ್ರತ್ಯಕ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಉಪ ವಿಭಾಗೀಯ ಆಸ್ಪತ್ರೆಗೆ 3 ನೂತನ ವೈದ್ಯರ ಸ್ಥಳ ನಿಯುಕ್ತಿಗೊಳಿಸಲಾಗಿದ್ದು, ಗಾಂಧಿ ಮೈದಾನದಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಹೊರ ರೋಗಿಗಳ ತಪಾಸಣಾ ಕೇಂದ್ರ ಆರಂಭಿಸಲು ಸಿದ್ಧಪಡಿಸಲಾಗಿದೆ. ಕೋವಿಡ್ 3ನೆಯ ಅಲೆಯನ್ನು ಸಮರ್ಥವಾಗಿ ಎದುರಿಸಲು ಪೂರ್ವ ತಯಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post