ಕಲ್ಪ ಮೀಡಿಯಾ ಹೌಸ್
ಭದ್ರಾವತಿ: 18 ವರ್ಷ ವಯೋಮಾನ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಸಿಗುವಂತಾಗಲಿ ಎಂದು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಮುಖಂಡರು ಇಂದು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೋವಿಡ್ -19 ವೈರಸ್ ನಿಂದಾಗಿ ದೇಶ ಹಾಗೂ ರಾಜ್ಯದ ಜನರು ಲಸಿಕೆ, ಆಕ್ಸಿಜನ್ ಹಾಗೂ ವೆಂಟಿಲೇಟರ್ ಇಲ್ಲದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಸಮಗ್ರವಾಗಿ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ.

ಆಸ್ಪತ್ರೆಗಳಲ್ಲಿ ಸರದಿಯಲ್ಲಿ ನಿಂತು ಲಸಿಕೆ ಸಿಗದೆ ವೈರಸ್ ಸೋಂಕು ಹೆಚ್ಚಾಗಿರುವುದನ್ನು ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳು ಗಮನಿಸಿ ಆದೇಶ ಮಾಡಿವೆ. ಇದರಿಂದ ಪ್ರತಿಯೊಬ್ಬರ ಪ್ರಾಣ ಉಳಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ಜವಾಬ್ದಾರಿ ನಿರ್ವಹಿಸದೇ, ಉಚಿತ ಲಸಿಕೆ ಉತ್ಪಾದನೆಗೆ ಸರ್ಕಾರ ಕ್ರಮಕೈಗೊಂಡು ಉತ್ಪಾದನೆಗೆ ತೊಡಕಾಗಿರುವ ಪೇಟೆಂಟ್ ನ್ನು ಮುಕ್ತಗೊಳಿಸಿ ಲಸಿಕೆ ಉತ್ಪಾದಿಸಿ ವೈರಸ್ ನಿಯಂತ್ರಣಕ್ಕೆ ಲಸಿಕೆ ಎಲ್ಲರಿಗೂ ಸಿಗುವಂತೆ ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕೆಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್. ಎಲ್. ಷಡಾಕ್ಷರಿ, ಮುಖಂಡರಾದ ಎಂ. ಶಿವಕುಮಾರ್, ಶ್ರೀನಿವಾಸ್, ಪ್ರಕಾಶ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















