ಬೀದರ್, ಅ.9: ಜಿಲ್ಲೆಯ ಏಕೈಕ ನೀರಾವರಿಯ ಕಾರಂಜಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂನ ಮೂರು ಗೇಟ್ಗಳ ಮೂಲಕ ನೀರು ಹರಿಬಿಡಲಾಗಿದೆ.
ಕಾರಂಜಾ ಡ್ಯಾಂನ ಸಹಾಯಕ ಅಭಿಯಂತರ ಬಿಎಸ್ ಪಾಟೀಲ್ ಅವರು, ಕಾರಂಜಾ ಜಲಾಶಯದ ಹಿನ್ನಿರು ಕೆಲವು ಗ್ರಾಮಗಳ ಹೊಲಗಳಿಗೆ ನುಗ್ಗುತ್ತಿರುವುದರಿಂದ ಡ್ಯಾಂನ ಮೂರು ಗೇಟ್ಗಳ ಮೂಲಕ 3ಸಾವಿರ ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಈಗಾಗಲೇ ಕಾರಂಜಾ ಜಲಾಶಯದಲ್ಲಿ ಒಳಹರಿವು 2,500 ಕ್ಯೂಸೆಕ್ಸ್ ಇದ್ದು, ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆ ಸುರಿಯುತ್ತಿರುವುದರಿಂದ ಕಾರಂಜಾ ಜಲಾಶಯ ಅಪಾಯ ಮಟ್ಟಕ್ಕೆ ತಲುಪುವ ಸಾಧ್ಯತೆ ಕಂಡು ಬಂದಲ್ಲಿ ಎಲ್ಲಾ ಆರೂ ಗೇಟ್ಗಳ ಮೂಲಕ ನೀರು ಹೊರಬಿಡುವ ಬಗ್ಗೆಯೂ ಪರಿಶೀಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಗರಿಷ್ಠ ಮುಟ್ಟಿ ನೀರು ಸಂಗ್ರಹವಾಗಿದೆ. ಕಾರಂಜಾ ಜಲಾಶಯ ಭರ್ತಿಯಾಗಿರುವುದರಿಂದ ಹಿನ್ನಿರು ಹಲವು ಗ್ರಾಮಗಳ ಹೊಲಗಳಿಗೆ ನುಗ್ಗಿದೆ. ಇದರಿಂದ ಭಾರೀ ಪ್ರಮಾಣದ ಬೆಳೆ ಹಾನಿಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ. ಕಾರಂಜಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೀದರ್ ತಾಲೂಕಿನ ಹೊಚಕನಳ್ಳಿ ಗ್ರಾಮದ ಕರಬಸಪ್ಪಾ ಪಾಟೀಲ ಹಾಗೂ ಇತರರು ಹಿನ್ನಿರು ಬಂದು ಬೆಳೆ ಸಂಪೂರ್ಣ ಮುಳುಗಿ ಹೋಗಿವೆ. ಬೆಳೆ ನಷ್ಟದ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.













