ಕಲ್ಪ ಮೀಡಿಯಾ ಹೌಸ್ | ಬೀದರ್ |
ಕಳೆದ ಮೂರು ವರ್ಷಗಳಿಂದ ಸತತವಾಗಿ ಎದುರಾಗುತ್ತಿರುವ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಿಂದಾಗಿ ರೈತರು, ಬಡವರು, ಶ್ರಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕಾಗಿದೆ. ಸರ್ಕಾರ ರೈತರ, ಬಡವರ ಸಂಕ?ಕ್ಕೆ ನೇರವಾಗುವ ಕೆಲಸ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಮೂರನೇ ದಿನದ ವಿಧಾನಸಭೆ ಕಲಾಪದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ನಿಯಮ 69ರಡಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬರಗಾಲದ ವಿಷಯಗಳ ಕುರಿತು ಸುಮಾರು 20 ನಿಮಿಷಗಳಿಗೂ ಹೆಚ್ಚು ಸಮಯ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಬಹಳಷ್ಟು ನಷ್ಟ ಉಂಟಾಗಿದೆ. ಆದರೇ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಪರಿಹಾರ ಸರಿಯಾಗಿ ಬಂದಿಲ್ಲ. ನಿಯಮಗಳ ಪ್ರಕಾರ ನೀಡಬೇಕಾಗಿರುವಷ್ಟು ಕೂಡ ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬರಬೇಕಾಗಿದ್ದ ಪರಿಹಾರ ಬಂದಿಲ್ಲ:
ನಿಯಮದ ಪ್ರಕಾರ ನಮ್ಮ ರಾಜಕ್ಕೆ 2019ರಲ್ಲಿ 3891.80 ಕೋಟಿ ರೂ. ಪರಿಹಾರ ಹಣ ಬರಬೇಕಿತ್ತು. ಕೇವಲ 1552 ಕೋಟಿ ರೂ. ಮಾತ್ರ ಬಂದಿದೆ. 2020ರ ಆಗಸ್ಟ್ ನಲ್ಲಿ 255 ಕೋಟಿ ಬರಬೇಕಿತ್ತು, ಆದರೆ 577 ಕೋಟಿ ಮಾತ್ರ ಬಂದಿದೆ. ಅಕ್ಟೋಬರ್ ನಲ್ಲಿ 1505 ಕೋಟಿ ಬರಬೇಕಿತ್ತು, ಆದರೆ 740 ಕೋಟಿ ರೂ. ಮಾತ್ರ ಪರಿಹಾರದ ಹಣ ಬಂದಿದೆ. ಈ ವರ್ಷ ಸುಮಾರು 18000 ಕೋಟಿಯಷ್ಟು ಬೆಳಹಾನಿಯಾಗಿದೆ. ಇನ್ನೂ ಕೇಂದ್ರ ಸರ್ಕಾರದಿಂದ ಬರಬೇಕಾದಷ್ಟು ಪರಿಹಾರ ಬಂದಿಲ್ಲ.
ಈ ವರ್ಷ ಅಕ್ಟೋಬರ್ – ನವೆಂಬರ್ ನಲ್ಲಿ 20 ಲಕ್ಷ ಹೆಕ್ಟರ್ ಕೃಷಿ ಭೂಮಿ ಹಾನಿಯಾಗಿದೆ. 20 ಸಾವಿರ ಮನೆಗಳು ಹಾನಿಗಿಡಾಗಿವೆ. 1 ಲಕ್ಷ 25 ಸಾವಿರ ಹೆಕ್ಟರ್ ತೋಟಗಾರಿಕೆ ಬೆಳೆಗಳು, 74 ಸಾವಿರ ಹೆಕ್ಟರ್ ಬೆಳೆಗಳು ಹಾನಿಯಾಗಿವೆ. 376 ಪ್ರಾಣಿಗಳು ಸಾವನ್ನಪ್ಪಿವೆ. ಸಣ್ಣ ನೀರಾವರಿ ವ್ಯಾಪ್ತಿಯ ಬಹಳಷ್ಟು ಕೆರೆಗಳು ಹಾನಿಗಿಡಾಗಿವೆ. 7711 ಸರ್ಕಾರಿ ಕಟ್ಟಡಗಳು ಹಾನಿಯಾಗಿವೆ. ಇವೆಲ್ಲವುಗಳ ಬಗ್ಗೆ ಸರ್ಕಾರ ಹೆಚ್ಚಿನ ಗಮನಹರಿಸಬೇಕು. ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆಯಾಗಿ ಅನೇಕ ಅನಾಹುತಗಳು ಸಂಭವಿಸಿವೆ. ಮನೆ, ಬೆಳೆ, ಜಮೀನು, ರಸ್ತೆಗಳು ಹಾಳಾಗಿವೆ. ಇವುಗಳಿಂದ ರೈತರೇ ಹೆಚ್ಚಿನ ಪ್ರಮಾಣದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಂದರು.
ಬೀದರ್ ಗೂ ಪರಿಹಾರ ಬಂದಿಲ್ಲ:
ಬೀದರ್ ನಲ್ಲಿ ಕಳೆದ ವರ್ಷ ಹೆಚ್ಚಿನ ಮಳೆಯಾಗಿತ್ತು. ಸೋಯಾ, ಉದ್ದು, ಹೆಸರು ಬೆಳೆಗಳು ಚನ್ನಾಗಿ ಬಂದಿದ್ದವು. ಹೆಚ್ಚಿನ ಮಳೆ ಬಿದ್ದು ಬೆಳೆ ಹಾನಿಯಾಗಿವೆ. ಕೃಷಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಕಳಿಸಿದ್ದಾರೆ. ಆದರೆ ಸರ್ಕಾರದಿಂದ ಪರಿಹಾರ ಸರಿಯಾಗಿ ಬಂದಿಲ್ಲ. ಅಲ್ಲದೆ ಹತ್ತಿ, ಜೋಳ, ಕಡಲೆ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿವೆ. ಸರ್ಕಾರದಿಂದ ಜನರಿಗೆ ಏನು ಪರಿಹಾರ ಬಂತು ಎಂಬುದನ್ನು ಸರ್ಕಾರವೇ ಹೇಳಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.
ನೀವು ರೈತರ ಸಾಲಮನ್ನಾ ಮಾಡಿ:
ಕುಮಾರಸ್ವಾಮಿರವರು ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನಾ ಮಾಡಲಾಗಿತ್ತು. ಈಗ ಅಧಿಕಾರದಲ್ಲಿರುವ ನೀವು ರೈತರ ಸಾಲಮನ್ನಾ ಮಾಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದರು.
ಬೆಳೆ ವಿಮೆ ಸಮರ್ಪಕವಾಗಿ ದೊರಕುತ್ತಿಲ್ಲ:
ರೈತರಿಗೆ ಬೆಳೆ ವಿಮೆಯ ಪರಿಹಾರ ವಿತರಣೆ ಕೂಡ ಸರಿಯಾಗಿ ಆಗುತ್ತಿಲ್ಲ. ಬೆಳೆ ವಿಮೆಯ ವಿಚಾರದಲ್ಲಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನಾವು ೨೦೦೬ರಲ್ಲೆ ಬೆಳೆ ವಿಮೆಯ ವಿಚಾರದಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೆ ತರುವ ಯೋಚನೆ ಮಾಡಿದ್ದೇವೆಂದರು.
ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಬೇಕು:
ಕಳೆದ ಅಧಿವೇಶನದಲ್ಲಿ ನಾನು ಕಾರಂಜಾ ಸಂತ್ರಸ್ತರ ಪರಿಹಾರದ ವಿಚಾರವಾಗಿ ಪ್ರಶ್ನೆ ಎತ್ತಿದ್ದೆ. ಸಮರ್ಪಕವಾಗಿ ಪರಿಹಾರ ಒದಗಿಸಿಕೊಡುತ್ತೇವೆ ಎಂಬ ಭರವಸೆಯನ್ನು ಸಚಿವರು ನೀಡಿದ್ದರು. ಆದರೇ ಇಲ್ಲಿಯವರೆಗೂ ಕೂಡ ಸರಿಯಾಗಿ ಪರಿಹಾರ ಒದಗಿಸಿಲ್ಲ. ಈ ಬಾರಿ ಕೂಡ ರೈತರ ಜಮೀನುಗಳಲ್ಲಿ ನೀರು ನಿಂತಿದೆ. ಇದುವರೆಗೂ ಪರಿಹಾರ ನೀಡಿಲ್ಲ. ಅಧಿವೇಶನದಲ್ಲಿ ಹೇಳಿರುವುದಕ್ಕೂ ಪರಿಹಾರ ನೀಡಿಲ್ಲ ಎಂದರೆ ಹೇಗೆ. ಆದಷ್ಟು ಬೇಗ ಪರಿಹಾರ ನೀಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.
ರೈತರ ಬೆಳೆ ಹಾನಿಯನ್ನು ಆಫ್ ಮೂಲಕ ನೋಂದಾಯಿಸಬೇಕೆಂದು ಆಫ್ ತಯಾರಿಸಿದ್ದಾರೆ. ಆ ಆಫ್ ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆ ಸರಿಯಾಗಿ ವರ್ಕ್ ಆಗುತ್ತಿಲ್ಲ. ಈ ವಿಷಯದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಕೂಡ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಸದನದಲ್ಲಿ ನಾವು ಏನು ಮಾಡಿದ್ದೇವು. ನೀವು ಏನು ಮಾಡಿದ್ದಿರಿ ಎಂಬ ಚರ್ಚೆ ಮಾಡುವುದನ್ನು ಬಿಟ್ಟು, ಎಲ್ಲರೂ ಸೇರಿ ಒಳ್ಳೆಯ ಕೆಲಸ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post