ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ದಿನನಿತ್ಯ 40 ನಿಮಿಷ ಯೋಗಾಸನ ಮಾಡಬೇಕು. 6 ತಿಂಗಳಿಗೊಮ್ಮೆ ಬಿಪಿ, ಶುಗರ್, ಹಿಮೋಗ್ಲೋಬಿನ್ ಟೆಸ್ಟ್ ಮಾಡಿಸಬೇಕು. ಇಡೀ ಕುಟುಂಬ ಆರೋಗ್ಯವಾಗಿರಬೇಕಾದರೆ, ಮೊದಲು ಆ ಕುಟುಂಬದ ಒಡತಿ ಆರೋಗ್ಯವಾಗಿರಬೇಕು. ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಉಜ್ಜಿನಿಪುರ ಪ್ರಾಥಮಿಕ ಕೇಂದ್ರದ ಆರೋಗ್ಯಾಧಿಕಾರಿ ಡಾ. ಪೂರ್ಣಿಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸ್ನೇಹಮಿಲನ ಮಹಿಳಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ International Women’s Day ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಭದ್ರಾವತಿ ನಗರಸಭೆ ಸಮನ್ವಯಾಧಿಕಾರಿ ಸುಹಾಸಿನಿ ಮಾತನಾಡಿ, ಮೊದಲು ನಮ್ಮ ಮಕ್ಕಳಿಗೆ ನಾವು ರೋಲ್ ಮಾಡೆಲ್ ಆಗಿರಬೇಕು. ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಬೇಕು. ಆಗ ನಮ್ಮ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ. ದಿನದಲ್ಲಿ ಒಂದು ಬಾರಿಯಾದರೂ ನಿಮ್ಮ ಜೊತೆ ನೀವು ಮಾತನಾಡಿ, ಏಕೆಂದರೆ ದಿನವಿಡೀ ಎಲ್ಲಾ ಜವಾಬ್ಧಾರಿಯನ್ನು ನಿಭಾಯಿಸಿರುತ್ತೀರಾ ಆಗ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
Also read: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹೆಸರಿಡುವಂತೆ ಸಿಎಂಗೆ ಮನವಿ
ಸಂಘದ ಅಧ್ಯಕ್ಷೆ ಕವಿತಾ ಸುರೇಶ್ ಮಾತನಾಡಿ, ಮಹಿಳೆ ಎಂದರೆ, ಭೂಮಿ, ಇಳೆ. ಎರಡು ಭೂಮಿ ತೂಕದ ಶಕ್ತಿಯನ್ನು ಮಹಿಳೆ ಹೊಂದಿದ್ದಾಳೆ. ತಾಳ್ಮೆಗೆ ಇನ್ನೊಂದು ಹೆಸರೇ ಸ್ತ್ರೀ. ನಮ್ಮ ಸಂಘ ನಾಲ್ಕು ಗೋಡೆಯ ಮಧ್ಯೆ ನಡೆಯುವ ಸಂಘವಲ್ಲ. ಉಚಿತ ಜಾನಪದ, ರಂಗತರಬೇತಿ ಶಿಬಿರದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಶೇ.೫೦ ಮೀಸಲಾತಿ ಸಿಕ್ಕಾಗ ಮಾತ್ರ ಮಹಿಳೆಗೆ ಇನ್ನಷ್ಟು ಶಕ್ತಿ ದೊರೆತಂತೆ ಎಂದು ಹೇಳಿದರು.
ಉಜ್ಜಿನಿಪುರ ಪ್ರಾಥಮಿಕ ಕೇಂದ್ರದ ಆರೋಗ್ಯಾಧಿಕಾರಿ ಪೂರ್ಣಿಮಾ, ನಗರಸಭೆ ಸಮನ್ವಯಾಧಿಕಾರಿ ಸುಹಾಸಿನಿ ಮತ್ತು ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ, ಸ್ನೇಹಮಿಲನ ಮಹಿಳಾ ಸಂಘದ ಕಾರ್ಯದರ್ಶಿ ವತ್ಸಲಾ ರಮೇಶ್, ಲಕ್ಷ್ಮಿ, ರೇಣುಕಾ, ಬಿ.ಎಸ್. ರೂಪಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post