ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರ ಉಳಿವಿಗಾಗಿ ಹಾಗೂ ವಾತಾವರಣದಲ್ಲಿನ ಅಸಮತೋಲನ ಪರಿಹಾರಕ್ಕಾಗಿ ಪ್ರತಿ ಊರಿನಲ್ಲಿಯೂ ಲಂಗ್ಸ್ ಸ್ಪೇಸ್ ನಿರ್ಮಾಣವಾಗಬೇಕಿದ್ದು, ಈ ಕುರಿತಂತೆ ಚಿಂತನೆ ನಡೆಸಲಾಗಿದೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಗುರುವಾರ ತಾಲೂಕಿನ ಜೇಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೈನಿಕ ವನ ನಿರ್ಮಾಣಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಕೆಲವು ಕಡೆಗಳಲ್ಲಿ ಹೆಚ್ಚು ಆಮ್ಲಜನಕ ಹೊರಸೂಸುವ ಗಿಡಗಳನ್ನು ಬೆಳೆಸಿ ಒಂದು ಶ್ವಾಸಕೋಶದ ರೀತಿಯಲ್ಲಿ ಸಿದ್ದಪಡಿಸಲಾಗಿದೆ. ಇದೇ ರೀತಿಯಲ್ಲಿ ಪ್ರತಿ ಜಿಲ್ಲೆ, ತಾಲೂಕು ಹಾಗೂ ನಗರಗಳಲ್ಲಿ ಲಂಗ್ಸ್ ಸ್ಪೇಸ್ ನಿರ್ಮಾಣ ಮಾಡುವ ಕಾರ್ಯವಾಗಬೇಕಿದೆ ಎಂದರು.
ಮಕ್ಕಳಲ್ಲಿ ಬಾಲ್ಯದಲ್ಲಿಯೇ ದೇಶ ಭಕ್ತಿ ಮತ್ತು ಪರಿಸರ ಪ್ರಜ್ಞೆ ಮೂಡಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಕೇವಲ ಶಿಕ್ಷಕರದ್ದು ಮಾತ್ರವಾಗಿರದೇ, ಪೋಷಕರ ಪಾತ್ರವೂ ಹೆಚ್ಚಿದೆ. ಪ್ರಕೃತಿ ಮನುಷ್ಯನಿಗೆ ಎಲ್ಲವನ್ನೂ ನೀಡಿದೆ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ. ಯುವಾ ಬ್ರಿಗೇಡ್ ಸ್ವಚ್ಛತೆ ಮತ್ತು ಪರಿಸರ ಜಾಗೃತಿಗೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದು, ರಾಜ್ಯದಲ್ಲಿ ಲಕ್ಷಾಂತರ ಯುವ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ದೇಶ ಸೇವೆ ಸಲ್ಲಿಸುತ್ತಾ ಹುತಾತ್ಮರಾದ ಯೋಧರ ಸವಿ ನೆನಪಿಗಾಗಿ ಗ್ರಾಮದಲ್ಲಿ ಸೈನಿಕ ವನ ನಿರ್ಮಿಸಲಾಗುತ್ತಿದೆ. ಕಾರ್ಗಿಲ್ ಯುದ್ದದಲ್ಲಿ ರಾಜ್ಯದ 327 ಯೋಧರು ಸಹ ಹುತಾತ್ಮರಾಗಿದ್ದಾರೆ. ಸುಮಾರು 350 ಗಿಡಗಳನ್ನು ನೆಡಲಾಗುತ್ತಿದ್ದು, ಪ್ರತಿ ಗಿಡಗಳ ಮುಂದೆ ಒಬ್ಬೊಬ್ಬ ಯೋಧರ ಹೆಸರ ಮತ್ತು ಅವರ ಸಾಹಸಗಳ ನಾಮಫಲಕ ಅಳವಡಿಸಲಾಗುವುದು. ದೇಶವು ಪಾಕ್ ವಿರುದ್ಧ ಕಾರ್ಗಿಲ್ ಯುದ್ದದಲ್ಲಿ ಜಯ ಸಾಧಿಸಿ ಮುಂದಿನ ಮೂರು ವರ್ಷಕ್ಕೆ 25 ವರ್ಷಗಳು ತುಂಬುವ ಹೊಸ್ತಿಲಲ್ಲಿ ಇರುವುದರಿಂದ ಸೈನಿಕ ವನ ನಿರ್ಮಿಸಲಾಗುತ್ತಿದೆ. ಇದನ್ನು ಹುತಾತ್ಮ ಯೋಧರಿಗೆ ಸಮರ್ಪಿಸಲಾಗುವುದು ಎಂದರು.
ಬೆಲೆ ಬಾಳುವ ಮರ-ಮುಟ್ಟುಗಳನ್ನು ನೆಡುವ ಬದಲು ಪರಿಸರಲ್ಲಿ ವಾಸಿಸುತ್ತಿರುವ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತ ಹೂ-ಹಣ್ಣಿನ ಮರಗಳನ್ನು ನೆಡಲಾಗುತ್ತಿದೆ. ಮುಂದಿನ ಪೀಳಿಗೆಯವರು ದೇಶಕ್ಕೆ ಕೊಡುಗೆ ನೀಡಬೇಕು ಎನ್ನುವ ಮನೋಭಾವನೆ ಮೂಡುವಂತೆ ನುರಿತ ತಜ್ಞರಿಂದ ವನವನ್ನು ಯುವಾ ಬ್ರಿಗೇಡ್ ವತಿಯಿಂದ ನಿರ್ಮಿಸಲಾಗುತ್ತಿದೆ. ಇದನ್ನು ಕಾಪಾಡಿಕೊಳ್ಳುವ ಹೊಣೆ ಗ್ರಾಮಸ್ಥರು ಮತ್ತು ಸಂಘ-ಸಂಸ್ಥೆಯವರದ್ದಾಗಿದೆ ಎಂದರು.
ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಧರ್ಮಣ್ಣ, ಮಹಾರಕ್ಷಕ್ ದಕ್ಷಿಣ ರಾಜ್ಯ ಸಂಚಾಲಕ ಹರ್ಷ, ಜಿಲ್ಲಾ ಸಂಚಾಲಕ ಶರತ್, ತಾಲೂಕು ಸಂಚಾಲಕ ಮಹೇಶ್ ಖಾರ್ವಿ, ಗ್ರಾಮಾಭಿವೃದ್ಧಿ ಸಮಿತಿ ಸದಸ್ಯ ರಾಜಪ್ಪ, ಎಸ್ಡಿಎಂಸಿ ಅಧ್ಯಕ್ಷ ಗಣಪತಿ, ಮಾಜಿ ಸೈನಿಕ ಭೀಮಪ್ಪ ತವನಂದಿ, ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸಮಾಜ ಸೇವಕ ಶಂಕರ್ ಶೇಟ್, ಪ್ರಮುಖರಾದ ಡಾ.ಎಚ್.ಇ. ಜ್ಞಾನೇಶ್, ನಾಗರಾಜ ಗುತ್ತಿ, ಅಣ್ಣಪ್ಪ ಕುಮಟಾ, ವಾಸಂತಿ ನಾವುಡಾ, ಮಧುಮತಿ, ಯುವಾ ಬ್ರಿಗೇಡ್ ಕಾರ್ಯಕರ್ತರಾದ ರಂಗನಾಥ ಮೊಗವೀರ್, ಲೋಕೇಶ್, ಮಂಜು, ಮಧುರಾಮ್, ವಿನೋದ್ ವಾಲ್ಮೀಕಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಸನ್ನಿಧಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಮುಖ್ಯಶಿಕ್ಷಕ ಸುರೇಶ್ ವಂದಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post