ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನವರಾತ್ರಿ ಎಂದರೆ ಒಂದೆಡೆ ದೇವಿಯ ಆರಾಧನೆಯದರೆ ಇನ್ನೊಂದೆಡೆ ಗೊಂಬೆ ಅಲಂಕಾರದ ವೈಭವ ನಾಡಿನೆಲ್ಲೆಡೆ ಮನೆಮಾಡಿರುತ್ತದೆ. ಇಂತಹುದ್ದೇ ಒಂದು ವೈಭವೋಪೇತ ಗೊಂಬೆ ಅಲಂಕಾರ ನಗರದ ಈ ಮನೆಯಲ್ಲಿ ಮೇಳೈಸಿದೆ.
ಹೌದು… ಭದ್ರಾವತಿ ಹಳೇನಗರದಲ್ಲಿದೆ ಹೊಯ್ಸಳರ ಕಾಲದ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ. ಈ ದೇವಾಲಯದ ಅರ್ಚಕರ ನಿವಾಸವೇ ಈಗ ಗೊಂಬೆ ಅಲಂಕಾರದ ಆಕರ್ಷಣೀಯ ಸ್ಥಳವಾಗಿದೆ.
ದೇವಾಲಯದ ಅರ್ಚಕರ ಮಾರ್ಗದರ್ಶನದಲ್ಲಿ ಸುಮಾರು 50ಕ್ಕೂ ಅಧಿಕ ವರ್ಷದಿಂದ ಗೊಂಬೆ ಅಲಂಕಾರ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕಳೆದ 10 ವರ್ಷಗಳಿಂದ ಮತ್ತಷ್ಟು ಮೆರುಗು ನೀಡಿದ್ದು, ದೇಗುಲದ ಸಹಾಯಕ ಅರ್ಚಕ ಶ್ರೀನಿವಾಸ್ ಅವರ ಪತ್ನಿ ಶ್ರೀಮತಿ ಮೈಥಿಲಿ ಶ್ರೀನಿವಾಸ್ ಅವರು.
Also read: ಕಾಲಿವುಡ್ ನಟಿ ಆಕಾಂಕ್ಷಾ ಮೋಹನ್ ಶವವಾಗಿ ಪತ್ತೆ
ಮೈಥಿಲಿ ಅವರು ಈ ಕುಟುಂಬಕ್ಕೆ ಗೃಹಿಣಿಯಾಗಿ ಬಂದಂದಿನಿಂದ ಪ್ರತಿ ವರ್ಷ ನವರಾತ್ರಿ ಅಲಂಕಾರವನ್ನು ಮತ್ತಷ್ಟು ಹೆಚ್ಚಿಸಿದರು. ಒಂದಿಡೀ ಹಾಲ್’ನಲ್ಲಿ ಸಾವಿರಾರು ಬಗೆಯ ಗೊಂಬೆಗಳನ್ನು ಅಲಂಕರಿಸುತ್ತಾರೆ. ಮೈಥಿಲಿ ಅವರಿಗೆ ಅವರ ಪತಿ ಶ್ರೀನಿವಾಸ್, ಕುಟುಂಬದ ಹಿರಿಯರಾದ ಶ್ರೀ ರಂಗನಾಥ್ ಶರ್ಮಾ ಅವರ ಸಹಕಾರವಿದೆ.
ಯಾವೆಲ್ಲಾ ಅಲಂಕಾರ ಮಾಡಿದ್ದಾರೆ?
ಈ ಬಾರಿಯ ನವರಾತ್ರಿಗೆ, ಮೈಸೂರು ಅರಮನೆ, ಮೈಸೂರು ದಸರಾ ಅಲಂಕಾರ ಹಾಗೂ ಅಂಬಾರಿ ಮೆರವಣಿಗೆ, ಚೆಂದದ ಉದ್ಯಾನವನ, ಹಿಂದಿನ ಕಾಲದ ಹರಟೆಕಟ್ಟೆ, ವಿವಿಧ ರೀತಿಯ ವಸ್ತು ಪ್ರದರ್ಶನ, ಅಡುಗೆ ಕೋಣೆ ಸಾಮಗ್ರಿಗಳ ಮಾದರಿ, ತಿರುಪತಿ ತಿರುಮಲ ಬೆಟ್ಟ, ಬ್ರಹ್ಮರಥೋತ್ಸವ, ಹಿಂದಿನ ಕಾಲದ ಗ್ರಾಮೀಣ ಜೀವನ ಶೈಲಿ, ಹಾವಾಡಿಗ, ವಿಧಾನಸೌಧ ಹಾಗೂ ಆಡಳಿತ ಸೌಧಗಳು, ಸರ್ವಧರ್ಮ ಸಮನ್ವಯದ ಪ್ರತೀಕಗಳು, ಭಾರತೀಯ ಕ್ರಿಕೇಟ್ಹಾಗೂ ಟೆನ್ನಿಸ್ ತಂಡ, ನೂರಾರು ಬಗೆಯ ವಾಹನಗಳ ಮಾದರಿ, ವಿಮಾನ ಹಾಗೂ ರೈಲು ನಿಲ್ದಾಣದ ಮಾದರಿ, ಸಮನ್ವಯ ಸಾರುವ ಕ್ರಿಸ್ಮಸ್ ಟ್ರೀ, ಸಾವಿರಾರು ಬಗೆಯ ದೇವರ ವಿಗ್ರಹ, ಶ್ರೀಕೃಷ್ಣ ಲೀಲೋತ್ಸವ, ಆಂಡಾಳ್ ಜನನ, ರಾಮೇಶ್ವರ, ಅಶ್ವತ್ಥ್ ಪರ್ವತ, ನವಗ್ರಹ ಪೂಜೆ, ಕೈಲಾಸ ಪರ್ವತದ ಮಾದರಿ ಹಾಗೂ ಜಲಪಾತ, ಮೈಸೂರು ದಸರಾ ಪ್ರದರ್ಶನ, ರೇಸ್ ಕೋರ್ಸ್, ಪಾಶ್ಚಿಮಾತ್ಯ ಶೈಲಿಯ ಈಜುಕೊಳ, ರಾಜಾಸ್ಥಾನ್ ಮರುಭೂಮಿ, ರಾಜಾಸ್ಥಾನ ಕಲೆಗಾರಿಕೆ ಸೇರಿದಂತೆ ಸಾವಿರಾರು ಗೊಂಬೆಗಳನ್ನು ತುಂಬಾ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಜೊತೆಗೆ ಆಕರ್ಷಣೀಯ ಫೌಂಟೇನ್, ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಬಲು ಆಕರ್ಷಣೀಯವಾಗಿ ದಸರಾ ಗೊಂಬೆ ಅಲಂಕಾರ ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ಇವರು ಅಲಂಕಾರ ಮಾಡಿರಲಿಲ್ಲ. ಹೀಗಾಗಿ, ಈ ಬಾರಿ ಹೆಚ್ಚಿನ ಅದ್ದೂರಿಯಾಗಿ ಅಲಂಕಾರ ಮಾಡಲಾಗಿದೆ. ನವರಾತ್ರಿ ಆರಂಭದಿಂದಲೂ ಪ್ರತಿನಿತ್ಯ ಇವರ ನಿವಾಸಕ್ಕೆ ನೂರಾರು ಮಂದಿ ಭೇಟಿ ನೀಡಿ ಗೊಂಬೆ ಪ್ರದರ್ಶನವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿದೇಶಿಯರಿಂದ ಪ್ರದರ್ಶನ ವೀಕ್ಷಣೆ
ವಿಶೇಷ ಎಂದರೆ ಕಾರ್ಯಕ್ರಮವೊಂದಕ್ಕೆ ಭದ್ರಾವತಿಗೆ ಭೇಟಿ ನೀಡಿದ್ದ ಅಮೇರಿಕಾ ದೇಶದ ಪ್ರಜೆಗಳು ಮೈಥಿಲಿ ಅವರ ನಿವಾಸದಲ್ಲಿನ ಗೊಂಬೆ ಪ್ರದರ್ಶನದ ಬಗ್ಗೆ ತಿಳಿದು ನಿನ್ನೆ ಇಲ್ಲಿಗೆ ಭೇಟಿ ನೀಡಿದ್ದರು.
ಇವರ ನಿವಾಸದಲ್ಲಿನ ಗೊಂಬೆಗಳ ಅಲಂಕಾರ ಕಂಡು, ಆಶ್ಚರ್ಯಚಕಿತರಾದದ್ದು ಮಾತ್ರವಲ್ಲ ಭಾರತೀಯ ಪರಂಪರೆಯ ಮೆರುಗು ಕಂಡು ಸಂತೋಷ ವ್ಯಕ್ತಪಡಿಸಿದರು.
ಈ ವರ್ಷ ಮಾತ್ರವಲ್ಲದೇ ಹಿಂದೆಯೂ ಸಹ ಬಹಳಷ್ಟು ಮಂದಿ ವಿದೇಶಿಗರು ಇವರ ಮನೆಯಲ್ಲಿನ ಗೊಂಬೆ ಪ್ರದರ್ಶನ ಕಣ್ತುಂಬಿಕೊAಡಿದ್ದಾರೆ.
ವಿಜಯದಶಮಿಯ ನಂತರವೂ ಸುಮಾರು 2-3 ದಿನ ಈ ಗೊಂಬೆ ಪ್ರದರ್ಶನ ಇರುತ್ತದೆ. ಆಸಕ್ತರು ತಪ್ಪದೇ ಭೇಟಿ ನೀಡಿ ವೀಕ್ಷಿಸಲು ಅವಕಾಶವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post