ಜಮ್ಮು: ಇಡಿಯ ಭಾರತ ಮಾತ್ರವಲ್ಲ ಪ್ರಪಂಚವೇ ಬೆಚ್ಚಿ ಬೀಳುವಂತಹ ಕ್ರೂರ ದಾಳಿ ನಡೆಸಿ ಸಿಆರ್’ಪಿಎಫ್’ನ 42 ಯೋಧರನ್ನು ಬಲಿ ಪಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ಥಾನದ ಐಎಸ್’ಐಯ ಸಂಚೂ ಸಹ ಇದೆ ಎಂಬ ಅನುಮಾನಗಳು ಬಲವಾಗುತ್ತಿವೆ.
ಇದರ ನಡುವೆಯೇ, ಸೇನೆಯ 78 ವಾಹನಗಳ ಕಾನ್ವೆ ಸಂಚರಿಸುವ ವೇಳೆ ಇಂತಹ ದಾಳಿ ನಡೆದಿದೆ ಎಂದರೆ ಇದರಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವೂ ಸಹ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕಿದೆ.
42 ಯೋಧರ ವೀರಸ್ವರ್ಗಕ್ಕೆ ಕಾರಣವಾದ ಪುಲ್ವಾಮಾ ದಾಳಿಯ ಹೊಣೆಯನ್ನು ಜೈಶ್ ಎ ಮೊಹಮದ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದರೂ ಸಹ, ಈ ದಾಳಿಯ ಹಿಂದಿನ ರೂವಾರಿ ಪಾಕಿಸ್ಥಾನದ ಗುಪ್ತಚರ ಇಲಾಖೆ ಐಎಸ್’ಐ ಪಾತ್ರವೂ ಸಹ ಇದೆ ಎಂಬ ಬಲವಾದ ಅನುಮಾನಗಳು ವ್ಯಕ್ತವಾಗತೊಡಗಿವೆ.
ಈ ಕುರಿತಂತೆ ಮಾತನಾಡಿರುವ ಮಾಜಿ ಸಿಐಎ ವಿಶ್ಲೇಷಕರು ಹಾಗೂ ದಕ್ಷಿಣ ಭಾರತ ವಿಶೇಷ ತಜ್ಞರು, ದಾಳಿಯ ಹೊಣೆಯನ್ನು ಜೈಶ್ ಮೊತ್ತುಕೊಂಡಿರಬಹುದು. ಆದರೆ, ಇಂತಹ ಕ್ರೂರ ದಾಳಿಯ ಹಿಂದೆ ಪಾಕ್ ಹಾಗೂ ಅಲ್ಲಿನ ಗುಪ್ತಚರ ಇಲಾಖೆಯ ಪಾತ್ರ ಇಲ್ಲ ಎನ್ನುವುದನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ತಜ್ಞರ ಪ್ರಕಾರ, ಈ ದಾಳಿಯ ಹಿಂದಿನ ಹೆಜ್ಜೆಗುರುತುಗಳು ನೇರವಾಗಿ ಪಾಕಿಸ್ತಾನದೊಳಗೆ ಹೋಗುತ್ತದೆ. ಇದೀಗ ಐಎಸ್”ಐ ತರಬೇತಿ, ಲಾಜಿಸ್ಟಿಕ್ ಬೆಂಬಲ ಮತ್ತು ಸ್ಫೋಟಕಗಳ ಸಹಕಾರ ನೀಡುವ ಮೂಲಕ ಸಿಆರ್’ಪಿಫ್ ಸೈನಿಕರ ಮೇಲೆ ಪುಲ್ವಾಮಾದಲ್ಲಿ ದಾಳಿ ನಡೆಸಲು ಪಾಕ್ ಹಾಗೂ ಅಲ್ಲಿನ ಗುಪ್ತಚರ ಇಲಾಖೆ ಮಾಸ್ಟರ್’ಮೈಂಡ್ ಆಗಿ ಕೆಲಸ ಮಾಡಿದೆ ಎಂಬ ಮಾಹಿತಿಗಳು ತಿಳಿದುಬರುತ್ತಿವೆ.
ಇದರ ಜೊತೆಯಲ್ಲಿ ಭದ್ರತಾ ವಿಶ್ಲೇಷಕರ ಪ್ರಕಾರ, ಇಂತಹ ಕ್ರೂರ ದಾಳಿ ನಡೆದಿದೆ ಎಂದರೆ, ಇದರ ಕೊಂಚ ಮಾಹಿತಿಯೂ ಸಹ ದೊರೆಯದಿರುವುದು ಭಾರತೀಯ ಗುಪ್ತಚರ ಇಲಾಖೆ ವೈಫಲ್ಯವಾಗಿದೆ ಎಂದಿದ್ದಾರೆ.

















