ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದಾದ್ಯಂತ ಕೋವಿಡ್19 ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಈದ್ಗಾ, ಶಾದಿಮಹಲ್ ಸಭಾಂಗಣ ಹಾಗೂ ಸಮುದಾಯ ಭವನಗಳಲ್ಲಿ ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆಗಳನ್ನು ನಿರ್ಬಂಧಿಸಲಾಗಿದೆ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಸೂಚಿಸಿದ್ದು, ಮಸೀದಿಗಳ ಆಡಳಿತ ಮಂಡಳಿಯವರು ಸಾಮಾಜಿಕ ಅಂತರ ಮತ್ತು ಸೋಂಕು ಹರಡದಿರುವಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
ಮಸೀದಿಗಳಲ್ಲಿ ಗರಿಷ್ಟ 50 ಮಂದಿಗೆ ಮೀರದಂತೆ ಸಾಮೂಹಿಕ ಪ್ರಾರ್ಥನೆಯನ್ನು ನಿರ್ವಹಿಸುವುದು, ಯಾವುದೇ ಮಸೀದಿಯ ಆಡಳಿತ ಮಂಡಳಿಯು ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರದ ಜುಮ್ಮಾ ಪ್ರಾರ್ಥನೆ ಸಹಿತ ದಿನದ ಐದು ಹೊತ್ತಿನ ಸಾಮೂಹಿಕ ಪ್ರಾರ್ಥನೆಯನ್ನು ಈಗಾಗಲೇ ನಿರ್ಬಂಧಿಸಿದಲ್ಲಿ ಅಂತಹ ಮಸೀದಿ ಆಡಳಿತ ಸಮಿತಿಗಳು ಈ ನಿರ್ಧಾರವನ್ನು ಬಕ್ರೀದ್ ನಮಾಜ್ನಲ್ಲಿ ಸಹ ಮುಂದುವರಿಸುವುದು. ಮಸೀದಿಗಳನ್ನು ಹೊರತುಪಡಿಸಿ ಇತರೇ ಯಾವುದೇ ಸ್ಥಳಗಳಲ್ಲಿ ಈದ್ಗಾ, ಶಾದಿಮಹಲ್ ಸಭಾಂಗಣ ಹಾಗೂ ಸಮುದಾಯ ಭವನ ಮತ್ತಿತರ ತೆರೆದ ಜಾಗಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದೆ.
ನಮಾಜ್ ಹಾಗೂ ಖುದ್ಭಾವನ್ನು 15 ರಿಂದ 20 ನಿಮಿಷದೊಳಗೆ ನಿರ್ವಹಿಸುವುದು ಹಾಗೂ ಬೆಳಗ್ಗೆ 8.00 ಗಂಟೆಯ ಮೊದಲು ಈದ್-ಉಲ್-ಅದ್ಹಾ ನಮಾಜ್ನ್ನು ನಿರ್ವಹಿಸಿ ಪೂರ್ಣಗೊಳಿಸಿ ಮಸೀದಿಯನ್ನು ಕೂಡಲೇ ತಕ್ಷಣವೇ ಮುಚ್ಚುವುದು. ಅನುಮತಿಸಲಾದ ಪ್ರಾಣಿಗಳ ಖುರ್ಬಾನಿಯನ್ನು ಗೊತ್ತುಪಡಿಸಿದ ಕಸಾಯಿಖಾನೆಗಳು ಅಥವಾ ಏಕಾಂತ ಸ್ಥಳಗಳಲ್ಲಿ ಅತ್ಯಂತ ನೈರ್ಮಲ್ಯ ಕಾಪಾಡಿಕೊಂಡು ನಿರ್ವಹಿಸುವುದು. ಸಾರ್ವಜನಿಕ ಸ್ಥಳ ಹಾಗೂ ತೆರೆದ ಸ್ಥಳಗಳಲ್ಲಿ ಮತ್ತು ಸಮುದಾಯ ಭವನಗಳಲ್ಲಿ ಪ್ರಾಣಿಗಳನ್ನು ಖುರ್ಬಾನಿ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ತ್ಯಾಜ್ಯ ಉಳಿಕೆಗಳನ್ನು ಬೇಗನೇ ವಿಲೇವಾರಿ ಮಾಡುವುದು ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
Get In Touch With Us info@kalpa.news Whatsapp: 9481252093







Discussion about this post