ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಜಿನೀವಾ |
ಈಗಾಗಲೇ ಹಲವು ದಾಖಲೆಗಳನ್ನು ಸೃಷ್ಠಿಸಿರುವ ಕಾಂತಾರ ಚಿತ್ರ ಮಾರ್ಚ್ 17ರಂದು ಜಿನೀವಾದಲ್ಲಿ ಪ್ರದರ್ಶನಗೊಳ್ಳಲಿದ್ದು, ರಿಷಬ್ ಶೆಟ್ಟಿ Rishab Shetty ಅವರು ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಮಾತನಾಡಲಿದ್ದಾರೆ.
ವಿಶ್ವಸಂಸ್ಥೆಯ ಜಿನೀವಾದಲ್ಲಿ ನಾಳೆ ಹಾಲ್ ಸಂಖ್ಯೆ 13ರಲ್ಲಿರುವ ಪಾಥೆ ಬಾಲೆಕ್ಸಟರ್’ನಲ್ಲಿ ಕಾಂತಾರ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಕುರಿತಂತೆ ಮಾತನಾಡಿರುವ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ, ಬರಹಗಾರ, ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಈಗಾಗಲೇ ಜಿನೀವಾ ತಲುಪಿದ್ದು, ಮೌಖಿಕ ಸಲ್ಲಿಕೆ ಪೂರ್ಣಗೊಳಿಸಿದ್ದಾರೆ. ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೋಲೀಸ್’ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್’ನಲ್ಲಿ ರಿಷಬ್ ಶೆಟ್ಟಿ ಅವರು ಜೆನೆರಾದಲ್ಲಿ ಯುಎನ್’ಎಚ್’ಆರ್’ಸಿ ಅಧಿವೇಶನದಲ್ಲಿ ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಭಾರತೀಯ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ ಎಂದಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ವಿಶ್ವದ ಹಲವು ದೇಶದ ಪ್ರತಿನಿಧಿಗಳು ಭಾಗಿ ಆಗುತ್ತಿದ್ದು, ಈ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಸಿನಿಮಾ ಮೂಲಕ ಪರಿಸರ ಮತ್ತು ಅರಣ್ಯದಂಚಿನಲ್ಲಿರೋ ಜನರ ಸಮಸ್ಯೆಗಳನ್ನೂ ರಿಷಬ್ ತೋರಿದ್ದಾರೆ. ಅದೇ ವಿಷಯವನ್ನ ರಿಷಬ್ ಇಲ್ಲೂ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಸ್ಕ್ರೀನಿಂಗ್ ನಂತರ ಯುಎನ್ ಗಣ್ಯರೊಂದಿಗೆ ಖಾಸಗಿ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಈ ಸಭೆಯಲ್ಲಿ ಹೆಚ್ಚು ಇಂಗ್ಲಿಷ್ ಭಾಷೆಯನ್ನು ಬಳಸುವುದು ವಾಡಿಕೆ. ಆದರೆ, ರಿಷಬ್ ಈ ಸಭೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ. ಈ ಮೂಲಕ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ಕನ್ನಡಿಗ ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















