ಕಲ್ಪ ಮೀಡಿಯಾ ಹೌಸ್ | ಭದ್ರಾವತಿ/ಬೆಂಗಳೂರು |
ಕೇಂದ್ರ ಸರ್ಕಾರ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ(ವಿಐಎಸ್’ಎಲ್)ಯನ್ನು ಮುಚ್ಚುವ ನಿರ್ಧಾರವನ್ನು ಕೈಬಿಟ್ಟು, ಪುನರುಜ್ಜೀವನ ಮಾಡಬೇಕು ಎಂದು ಒತ್ತಾಯಿಸಿ ನಗರದ ಯುವಕನೊಬ್ಬ ಭದ್ರಾವತಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದಾರೆ.
ನಗರದ ರೈಲ್ವೆ ನಿಲ್ದಾಣದ ಬಳಿ ಅಂಗಡಿ ಹೊಂದಿರುವ ದಯಾನಂದ್ ಎಂಬ ಯುವಕ ಭದ್ರಾವತಿಗೆ ಬಂದ ನೆಲೆಸಿ ಕೇವಲ 4-5 ವರ್ಷಗಳಾಗಿವೆ. ಆದರೆ, ಉಕ್ಕಿನ ನಗರಿ ತನಗೆ ನೆಲೆಸಲು ಜಾಗ, ಅನ್ನ, ನೀರು ನೀಡಿ ಸಲುಹಿದೆ. ಇಂತಹ ನಗರ ಉಳಿಯಬೇಕು ಎಂದರೆ ವಿಐಎಸ್’ಎಲ್ ಹಾಗೂ ಎಂಪಿಎಂ ಕಾರ್ಖಾನೆ ಉಳಿಯಬೇಕು ಎಂದು ಭಾವನಾತ್ಮಕವಾಗಿ ನುಡಿಯುತ್ತಾರೆ ದಯಾನಂದ್.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಮಂದಿಯ ಜೀವನಕ್ಕೆ ಆಧಾರವಾಗಿರುವ ವಿಐಎಸ್’ಎಲ್ ಕಾರ್ಖಾನೆ ಮುಚ್ಚುವುದರಿಂದ ಎಷ್ಟು ಕುಟುಂಬಗಳ ಜೀವನ ನಾಶವಾಗಲಿದೆ. ಹೀಗಾಗಿ, ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಕೈಬಿಟ್ಟು, ಅಗತ್ಯ ಬಂಡವಾಳ ತೊಡಗಿಸಿ ಗತವೈಭವವನ್ನು ಮರುಕಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ದಯಾನಂದ್ ಆಗ್ರಹಿಸಿದ್ದಾರೆ.
Also read: ಜಾನುವಾರುಗಳಿಗೆ ಸಂಬಂಧಿಸಿದ ಪರಿಹಾರ ಮೊತ್ತ ಹೆಚ್ಚಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್ ಆಗ್ರಹ
ಭದ್ರಾವತಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ ದಯಾನಂದ್ ಅವರು ಇಂದು ಮುಂಜಾನೆ ಫ್ರೀಡಂ ಪಾರ್ಕ್ ತಲುಪಿದ್ದಾರೆ. ಇವರು ಪಾದಯಾತ್ರೆ ಕೈಗೊಂಡಿರುವ ವಿಚಾರ ತಿಳಿದ ಕಾರ್ಮಿಕ ಸಂಘದ ಕೆಲವು ಸದಸ್ಯರು ಹಾಗೂ ಗುತ್ತಿಗೆ ಕಾರ್ಮಿಕರು ಇವರೊಂದಿಗೆ ಸೇರಿಕೊಂಡು ತೆರಳಿದ್ದಾರೆ.
ದಯಾನಂದ್ ಅವರು ಮುಖ್ಯಮಂತ್ರಿಗಳ ಭೇಟಿಗೆ ಪೊಲೀಸರ ಬಳಿ ಸಮಯ ಕೇಳಿದ್ದಾರೆ. ಸಿಎಂ ಅವರನ್ನು ಭೇಟಿ ಆಗಲಿರುವ ಇವರು ಕಾರ್ಖಾನೆಯನ್ನು ಉಳಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿ, ಮನವೊಲಿಸುವಂತೆ ಮನವಿ ಮಾಡಲಿದ್ದಾರೆ.
ಇವರೊಂದಿಗೆ ಚಂದ್ರಕಾಂತ್, ಸುರೇಶ್, ಅಮೃತ್, ರಕ್ಷಿತ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















