ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಳೆದ ಕೆಲವು ದಿನಗಳ ಹಿಂದೆ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಹೊಸಮನೆ ಪೊಲೀಸರು ಬಂಧಿಸಿದ್ದಾರೆ.
ಫೇಸ್ ಬುಕ್ ಸ್ಟೇಟಸ್’ನಲ್ಲಿ ಹಾಕಿದ ಪೋಸ್ಟ್’ಗೆ ಸಂಬಂಧಿಸಿದಂತೆ ಎಮೋಜಿ ಹಾಕಿದ ಕಾರಣಕ್ಕೆ ಪ್ರಕರಣ ದ್ವೇಷಕ್ಕೆ ತಿರುಗಿತ್ತು. ಈ ಕುರಿತಂತೆ ತರೀಕೆರೆ ರಸ್ತೆಯ ಜ್ಯೂನಿಯರ್ ಕಾಲೇಜು ಬಳಿಯಲ್ಲಿ ಜಹೀರ್, ಅಸ್ಲಂ ಹಾಗೂ ಹರೀಶ್, ಗೌತಮ್ ಅಪ್ಪು ಅವರುಗಳ ನಡುವೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಪ್ರಕರಣ ಕೋಮು ಗಲಭೆ ರೂಪಕ್ಕೆ ತಿರುಗಿತ್ತು. ಗಲಾಟೆ ವೇಳೆ ಲಘು ಲಾಠಿ ಪ್ರಹಾರವೂ ಸಹ ನಡೆದಿತ್ತು.
ಪ್ರಕರಣ ಕುರಿತಂತೆ ಒಟ್ಟು ಮೂರು ಎಫ್’ಐಆರ್ ದಾಖಲಾಗಿತ್ತು. ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆಮಂಗಳವಾರ ಜಹೀರ್ ನೀಡಿದ ದೂರಿನ ಮೇರೆಗೆ ಹರೀಶ್(22), ಗೌತಮ್ ಅಪ್ಪು(22) ಅವರುಗಳನ್ನು ಬಂಧಿಸಲಾಗಿದೆ.
ಇನ್ನು, ಹರೀಶ್ ನೀಡಿದ ದೂರಿನ ಆಧಾರದಲ್ಲಿ ಸಿದ್ದಾಪುರ ಹೊಸೂರಿನ ನಿವಾಸಿ ಜಹೀರ್(27), ಎಕಿನ್ಸಾ ಕಾಲೋನಿಯ ಅಸ್ಲಾಂ ಅಸ್ಲಿ(29) ಹಾಗೂ ರಿಜ್ವಾನ್ ನೀಡಿದ ದೂರಿನ ಮೇರೆಗೆ ಹೊಸಮನೆ ನಿವಾಸಿ ಮಂಜುನಾಥ್(24), ಅಶೋಕ್(22) ಅವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post