ಭದ್ರಾವತಿ: ಪೊಳ್ಳು ಭರವಸೆಗಳನ್ನು ನೀಡುತ್ತಾ ದಲಿತರ, ರೈತರ, ಅಮಾಯಕರ, ಬಡವರ ದಮನ ಮಾಡಲು ಮುಂದಾಗಿರುವ ಕೇಂದ್ರದ ನರೇಂದ್ರ ಮೋದಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಉಂಟಾಗಿರುವ ಉಪ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾರ್ಮಿಕವಾಗಿ ನುಡಿದರು.
ಅವರು ಸೋಮವಾರ ಹಳೇನಗರದ ವೀರಶೈವ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯವನ್ನು ಪ್ರಗತಿಯತ್ತ ಕೊಂಡ್ಯೊಯುವ ಸಲುವಾಗಿ ಹಾಗು ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸಮಿಶ್ರ ಸರಕಾರ ಅಧಿಕಾರಕ್ಕೆ ಬಂದಿರುವುದೇ ವಿನಾ ಅಧಿಕಾರದ ಆಸೆಯಿಂದಲ್ಲ. ಅನಿರೀಕ್ಷಿತವಾಗಿ ಬಂದಿರುವ ಉಪ ಚುನಾವಣೆಯಾದರೂ ಸಾಮಾನ್ಯ ಚುನಾವಣೆ ಎಂದು ಯಾರು ಅರಿಯಬೇಡಿ. ಮುಂದಿನ ಸಂಸತ್ ಚುನಾವಣೆ ದಿಕ್ಸೂಚಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಿಷ್ಟವಾಗಿದ್ದರು ಯುವ ಶಕ್ತಿಗೆ ಮತ್ತು ಉತ್ತಮ ಅಭ್ಯರ್ಥಿಯನ್ನಾಗಿ ವರಿಷ್ಟರು ಒಗ್ಗೂಡಿ ಶಕ್ತಿಗೆ ಮತ್ತೊಂದು ಹೆಸರಾಗಿದ್ದ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ಉಭಯ ಪಕ್ಷಗಳು ಆಯ್ಕೆ ಮಾಡಿದೆ. ಬಂಗಾರಪ್ಪ ರವರ ಸ್ಥಾನದಲ್ಲಿ ಮಧು ರವರನ್ನು ಕಾಣುವ ಸದಾವಕಾಶ ಸಂದಿದೆ. ನಾವೆಲ್ಲರು ಒಗ್ಗೂಡಿ ಶ್ರಮಿಸಿ ಸಹಕಾರಗೊಳಿಸಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿ ಸಂಸತ್ಗೆ ಕಳುಹಿಸೊಣ.
ಬಿಜೆಪಿಯಲ್ಲಿ ಸಿದ್ದಾಂತ ಮತ್ತು ನೀತಿಗಳಿಲ್ಲ. ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಸಂಸದರಾಗಿ ಈ ಕ್ಷೇತ್ರಕ್ಕೆ ಏನು ಸಾಧಿಸಿಲ್ಲ. ಅವಳಿ ಕಾರ್ಖಾನೆಗಳಿಗೆ ಚೇತನ ನೀಡುವ ಬದಲು ಹಾಳು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಮೋದಿ ಸರಕಾರ ಜನರ ನೆಮ್ಮದಿ ಹಾಳು ಮಾಡುವ ಸರಕಾರವಾಗಿದೆ. ಜನರ ವಿರೋಧಿಯಾಗಿ ವರ್ತಿಸುತ್ತಿದೆ. ದೇಶವನ್ನು ಛಿದ್ರ ಮಾಡುವ ಕೆಲಸದಲ್ಲಿ ತೊಡಗಿದೆ. ಮೋದಿ ಅಧಿಕಾರಕ್ಕೇರಿ ನಾಲ್ಕುವರೆ ವರ್ಷಗಳು ಆದರೂ ಏನು ಸಾಧನೆ ಮಾಡದೆ ಕೇವಲ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವ ಕೆಲಸದಲ್ಲಿ ತೊಡಗಿದೆ. ಅದೇ ಅವರ ಸಾಧನೆಯಾಗಿದೆ ಎಂದು ಟೀಕಿಸಿದರು.
ವಿದೇಶಿ ಹಣ, ಭಯೋತ್ಪಾದನೆ ನಿಗ್ರಹ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಎಂಬಿತ್ಯಾದಿ ಸುಳ್ಳು ಭರವಸೆ ನೀಡುತ್ತಾ ದೇಶದ ಸ್ಥಿತಿ ಚಿಂತಾಜನಕ ಮಾಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲದಂತಾಗಿದೆ. ಪವಿತ್ರ ಗಂಗಾನದಿಯನ್ನು ಸ್ವಚ್ಚ ಮಾಡುತ್ತೇನೆಂದು ಹೇಳಿ ಐದಾರು ಸಾವಿರ ಕೋಟಿ ಹಣ ನುಂಗಿ ನೀರು ಕುಡಿದಿದ್ದಾರೆ. ಹಿಂದೆಂಗಿಂತಲೂ ನದಿಯು ಹೆಚ್ಚು ಮಾಲಿನ್ಯವಾಗಿದೆ. ಧರ್ಮ ಪ್ರಚೋಧನೆ ಮಾಡುವುದರಿಂದ ಹಾಗೂ ಅಲ್ಪಸಂಖ್ಯಾತರ, ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ನೋಟು ಅಮಾನ್ಯದಿಂದ ಬಡವರಿಗೆ ತೊಂದರೆ ಮುಂತಾದ ಸಾಧನೆಯೆ ಬಿಜೆಪಿ ಸರಕಾರದ್ದಾಗಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಬಂಗಾರಪ್ಪ ರವರ ಸ್ಥಾನ ತುಂಬಲು ಕಾಂಗ್ರೆಸ್ ಪಕ್ಷದ ಅಪಾರ ಶಕ್ತಿಯನ್ನು ಸ್ಥಳೀಯ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ನೇತೃತ್ವದಲ್ಲಿ ಮಧು ಬಂಗಾರಪ್ಪ ಅವರಿಗೆ ಮತ ನೀಡುವ ಮೂಲಕ ಶಕ್ತಿ ತುಂಬುವುದು ನೆರೆದಿರುವ ಜನಸ್ಥೋಮವೇ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಪ್ಪು ಮಾಡಿ ಸ್ಥಳೀಯ ಶಾಸಕರಿಗೆ ಟಿಕೇಟ್ ವಂಚಿಸಿದೆ. ಅದರ ಅರಿವಾಗಿ ಪುನಃ ಟಿಕೇಟ್ ನೀಡಿ ಪಕ್ಷವನ್ನು ಬಲಿಷ್ಟಗೊಳಿಸಿದೆ. ಮುಂದಿನ ದಿನಗಳಲ್ಲಿ ಅವರು ಪಕ್ಷದಲ್ಲಿ ಬಹು ಎತ್ತರಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದರು.
ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ನಿರೀಕ್ಷಿಸದೆ ಬಂದಿರುವ ಚುನಾವಣೆಯಲ್ಲಿ ಹಿರಿಯರ ಮಾತಿಗೆ ಗೌರವಿಸಿ ರಾಷ್ಟ್ರ ಕಟ್ಟಲು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಇದರಿಂದ ಸಮಿಶ್ರ ಸರಕಾರಕ್ಕೆ ಹೆಚ್ಚಿನ ಶಕ್ತಿ ಬಂದಂತ್ತಾಗಿದೆ. ಬಿಜೆಪಿಯನ್ನು ದೂರವಿಡಲು ತೀರ್ಮಾನಿಸಿರುವ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷ ಎಲ್ಲಾ ಮುಖಂಡರು ಪಣ ತೊಟ್ಟಿರುವುದರಿಂದ ಬಂಗಾರಪ್ಪ ರವರ ಶಕ್ತಿ ತಾಣವಾಗಿರುವ ಈ ಜಿಲ್ಲೆಯಿಂದ ನಮ್ಮನ್ನು ಸಂಸದರಾಗಿ ಆರಿಸಿ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಪ್ರಸ್ತುತ ಉಪ ಚುನಾವಣೆಯಲ್ಲಿ ಮಾತಿಗಿಂತ ಹೆಚ್ಚು ಕೆಲಸ ಮಾಡಿ ಮಧು ಬಂಗಾರಪ್ಪ ಅವರನ್ನು ಲೋಕಸಭೆಗೆ ಆರಿಸಿ ಕಳುಹಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ. ಕಾರ್ಯಕರ್ತರು ನಮ್ಮೊಂದಿಗೆ ಶ್ರಮವಹಿಸಿ ಗೆಲ್ಲಿಸಲು ಪಣ ತೊಡಬೇಕೆಂದು ಮತದಾರರನ್ನು ನಮ್ರವಾಗಿ ಕಾಲು ಮುಗಿದು ಬೇಡುತ್ತೇನೆ ಎಂದು ಮನವಿ ಮಾಡಿದರು.
ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್ ಮುಖಂಡರಾದ ಪ್ರಭಾಕರ್, ಎಚ್.ಸಿ. ದಾಸೇಗೌಡ, ವಿಷ್ಣುನಾಥ್, ಸುಂದರೇಶ್, ರವಿಕುಮಾರ್, ಶಾಂತವೀರನಾಯ್ಕ, ಬಲ್ಕೀಷ್ ಬಾನು, ನಾರಾಯಣಸ್ವಾಮಿ, ಸಿ.ಎಂ. ಖಾದರ್, ಬಿ.ಟಿ. ನಾಗರಾಜ್, ಚಂದ್ರಶೇಖರಪ್ಪ, ಬಾಲಕೃಷ್ಣ, ಎಚ್.ಎಲ್. ಷಡಾಕ್ಷರಿ, ಟಿ. ಚಂದ್ರೇಗೌಡ, ಲೋಕೇಶ್, ಶಿವಕುಮಾರ್, ಅಂಜನಿ, ಫ್ರಾನ್ಸಿಸ್, ಬಾಬಾಜಾನ್ ಮುಂತಾದವರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
















