ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾರ್ತಿಕ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಬುಧವಾರ ನಗರದ ಹಲವು ದೇವಾಲಯಗಳಲ್ಲಿ ಲಕ್ಷ ದೀಪೋತ್ಸವದ ಸಂಭ್ರಮದ ಮನೆ ಮಾಡಿತ್ತು.
ಹಳೇನಗರದ ಶ್ರೀ ರಾಘವೇಂದ್ರ ಮಠದಲ್ಲಿ ಲಕ್ಷ ದೀಪೋತ್ಸವದ ಅಂಗವಾಗಿ ನಿನ್ನೆ ಮುಂಜಾನೆಯಿಂದಲೇ ಗುರುಗಳಿಗೆ, ಪ್ರಾಣದೇವರಿಗೆ ಹಾಗೂ ವಾದಿರಾಜರ ಬೃಂದಾವಕ್ಕೆ ಅಭಿಶೇಕ, ಪೂಜೆ, ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಹಳೇನಗರದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಉತ್ಸವ ಸಾಗಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಕಾರ್ತಿಕ ಅಮಾವಾಸ್ಯೆಯ ನಿಮಿತ್ತ ಶ್ರೀಮಠದಲ್ಲಿ ಸಾಂಪ್ರದಾಯಿಕವಾಗಿ ಚೊಕ್ಕೆ ಸುಟ್ಟು, ದೀಪೋತ್ಸವ ನಡೆಸಲಾಯಿತು. ಪಲ್ಲಕ್ಕಿ ಉತ್ಸವಕ್ಕೆ ಕರಾವಳಿಯ ಸಾಂಪ್ರದಾಯಿಕ ಚಂಡೆ ವಾದ್ಯ ಮೆರುಗು ನೀಡಿತ್ತು. ಶ್ರೀಮಠದಲ್ಲಿ ಮಾನಿನಿಯರಿಂದ ಸಾಂಪ್ರದಾಯಿಕ ಕೋಲಾಟ ನೃತ್ಯ ಸಂಭ್ರಮವನ್ನು ಹೆಚ್ಚಿಸಿತ್ತು.
ಸತ್ಯನಾರಾಯಣಾಚಾರ್, ಗೋಪಾಲಾಚಾರ್, ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ ತಂತ್ರಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ ತಂತ್ರಿ, ಖಜಾಂಚಿ ನಿರಂಜಾನಾಚಾರ್, ಮ್ಯಾನೇಜರ್ ಶ್ರೀಪತಿ, ರಾಘವೇಂದ್ರ, ಶುಭಾ ಗುರುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀ ರಾಮೇಶ್ವರ ದೇವಾಲಯ
ಇನ್ನು, ಹಳೇನಗರದ ಶ್ರೀ ರಾಮೇಶ್ವರ ದೇವಾಲಯದಲ್ಲಿಯೂ ಸಹ ಮೂಲ ದೇವರ ಮುಂಭಾಗದಲ್ಲಿ ಚೊಕ್ಕ ಸುಟ್ಟು, ದೀಪೋತ್ಸವ ಆಚರಣೆ ಮಾಡಲಾಯಿತು.
ದೇವಾಲಯದ ಆವರಣದಲ್ಲಿ ಸುಂದರ ಸಾಲುಗಳಾಗಿ ಜೋಡಿಸಲಾಗಿದ್ದ ದೀಪಗಳನ್ನು ಹಚ್ಚಿ ಲಕ್ಷ ದೀಪೋತ್ಸವವನ್ನು ಆಚರಿಸಲಾಯಿತು. ಇದಕ್ಕೂ ಮುನ್ನ ಹಳೇನಗರದ ಪ್ರಮುಖ ಬೀದಿಗಳಲ್ಲಿ ಶ್ರೀದೇವರ ಉತ್ಸವ ನಡೆಸಲಾಯಿತು.
ಶ್ರೀಆಂಜನೇಯ ದೇವಾಲಯ
ಹಳೇನಗರದ ಕಂಚಿ ಬಾಗಿಲು ಬಳಿಯಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲೂ ಸಹ ಲಕ್ಷ ದೀಪೋತ್ಸವವನ್ನು ಆಚರಿಸಲಾಯಿತು.
ಮುಂಜಾನೆಯಿಂದಲೇ ಶ್ರೀಸ್ವಾಮಿಗೆ ವಿಶೇಷ ಅಭಿಶೇಕ, ಅಲಂಕಾರ ಹಾಗೂ ಪೂಜೆ ನಡೆಸಲಾಯಿತು. ಇಡಿಯ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿತ್ತು. ಸಂಜೆ, ದೇವಾಲಯದ ಪ್ರಾಂಗಣದಲ್ಲಿ ಲಕ್ಷ ದೀಪೋತ್ಸವ ಆಚರಿಸಲಾಯಿತು.
ಶ್ರೀಕಾಳಿಕಾ ಪರಮೇಶ್ವರಿ ದೇವಾಲಯ:
ಹಳೇನಗರದ ಭದ್ರಾ ನದಿ ತಟದಲ್ಲಿರುವ ಶ್ರೀ ಕಾಳಿಕಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನಡೆಸಿ, ಲಕ್ಷ ದೀಪೋತ್ಸವ ಆಚರಿಸಲಾಯಿತು.
ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ರಾಜಬೀದಿ ಉತ್ಸವ ನಡೆಸಲಾಯಿತು. ಸಮಾಜ ಬಾಂಧವರ ಪಾಲ್ಗೊಂಡಿದ್ದರು.
ಶ್ರೀ ಶೈನೈಶ್ಚರ ದೇವಾಲಯ:
ರಂಗಪ್ಪ ವೃತ್ತದ ಬಳಿಯಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆಯ ನಿಮ್ಮಿತ್ತ ಮುಂಜಾನೆಯಿಂದಲೇ ವಿಶೇಷ ಅಭಿಶೇಕ, ಅಲಂಕಾರ, ಪೂಜೆ ನಡೆಸಲಾಯಿತು.
ಸಂಜೆ ದೇವಾಲಯದ ಪ್ರಾಂಗಣದಲ್ಲಿ ಲಕ್ಷ ದೀಪೋತ್ಸವ ಆಚರಿಸಲಾಯಿತು. ಈ ಅಂಗವಾಗಿ ಸಂಗೀತ, ಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post