ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಮನ ಕಾಲದಲ್ಲಿದ್ದ ರಾಜ್ಯದ ವೈಭವ ಅಂದರೆ ರಾಮರಾಜ್ಯ ಈಗಲೂ ನಿರ್ಮಾಣವಾಗಬೇಕು ಎಂಬುದು ಎಲ್ಲರ ಆಶಯವಾಗಿದ್ದು, ಇದು ಸಾಕಾರವಾಗಬೇಕಾದರೆ ಪ್ರತಿ ಪ್ರಜೆಯೂ ಸಹ `ರಾಮ’ರಾಗಬೇಕ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜ್ಞಾನವಾಹಿನಿ ಸಂಘದ 25ನೆಯ ವಾರ್ಷಿಕೋತ್ಸವ, ಮಾದನೂರು ಶ್ರೀವಿಷ್ಣುತೀರ್ಥ ಶ್ರೀಪಾದಂಗಳವರ ಆರಾಧನೆ ಹಾಗೂ ಶ್ರೀಮದ್ ವಾಲ್ಮೀಕಿ ರಾಮಾಯಣದ ಮಹಾಮಂಗಳೋತ್ಸವ ಅಂಗವಾಗಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರ್ಶೀವಚನ ನೀಡಿ ಅವರು ಮಾತನಾಡಿದರು.
ರಾಮನ ಆಳ್ವಿಕೆಯಲ್ಲಿ ಎಲ್ಲರೂ ಉತ್ಕೃಷ್ಟವಾದ ಜೀವನ ನಡೆಸುತ್ತಿದ್ದರು. ಹೀಗಾಗಿ, ಇಂದಿಗೂ ರಾಮರಾಜ್ಯ ಬರಬೇಕು ಎಂದು ಪ್ರತಿಯೊಬ್ಬರೂ ಸಹ ಬಯಸುತ್ತಾರೆ. ಎಲ್ಲವೂ ಅಂದು ಸಂಮೃದ್ದವಾಗಿದ್ದ ಕಾರಣ ಎಲ್ಲರಲ್ಲೂ ಇಂದಿಗೂ ರಾಮರಾಜ್ಯದ ಕನಸಿದೆ. ಒಬ್ಬ ರಾಮನಿಂದ ಅಂದು ರಾಮರಾಜ್ಯವಾಯಿತು. ಆದರೆ, ಈಗ ರಾಮರಾಜ್ಯದ ಕನಸು ನನಸಾಗಿ ಅದು ಸಾಕಾರವಾಗಬೇಕಾದರೆ ಪ್ರಜೆಗಳೆಲ್ಲಾ ರಾಮರಾಗಬೇಕು. ರಾಮ ಬೇರೆ ಅಲ್ಲ, ಗುಣಗಳ ರಾಶಿ ಬೇರೆ ಅಲ್ಲ.ಅಂದರೆ, ರಾಮನಲ್ಲಿದ್ದ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಕೊಂಚವಾದರೂ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಗವಂತನ ಅನುಗ್ರಹ ಮುಖ್ಯ
ಜೀವಮಾನದಾದ್ಯಂತ ಕಷ್ಟ ಬರಲೇಬಾರದು ಎಂಬುದು ಎಲ್ಲರ ಬಯಕೆ. ಆದರೆ, ಬಯಸಿದ ಮಾತ್ರಕ್ಕೆ ಅದು ಆಗುತ್ತದೆಯೇ? ಅದಕ್ಕೆ ನಿರಂತರ ಪ್ರಯತ್ನಗಳು ಬೇಕು. ಅಂತಿಮವಾಗಿ ಭಗವಂತನ ಅನುಗ್ರಹವೂ ಸಹ ಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಧರ್ಮ ಕಾರ್ಯಗಳನ್ನು ಮಾಡಬೇಕು ಎಂದರು.
ರಾಮರಾಜ್ಯ-ರಾವಣರಾಜ್ಯ
ನಮ್ಮ ಇಷ್ಟಾರ್ಥಗಳಿಗಾಗಿ ಮಾಡುವ ಪ್ರಯತ್ನ ಇನ್ನೊಬ್ಬರ ದುಃಖಕ್ಕೆ ಕಾರಣವಾಗಬಾರದು. ನಾನು ಸುಖ ಪಡೆಬೇಕು ಎಂದು ಪ್ರಯತ್ಮ ಮಾಡುವಾಗ ನನಗೆ ಮಾತ್ರವಲ್ಲ ಅಕ್ಕಪಕ್ಕದವರಿಗೂ ಸಹ ಸುಖ ದೊರೆಯಬೇಕು ಎಂಬ ಮನಃಸ್ಥಿತಿಯನ್ನು ಸದಾ ಹೊಂದಿರಬೇಕು. ಇಂತಹ ಮನಃಸ್ಥಿತಿಯೊಂದಿಗೆ ಸಮಾಜ ಸಾಗಿದಾಗ ಅದು ರಾಮರಾಜ್ಯ ನಿರ್ಮಾಣವಾಗಲು ದಾರಿಯಾಗುತ್ತದೆ. ನನ್ನೊಂದಿಗೆ ಇತರರಿಗೂ ಸುಖ ಎಂಬುದು ರಾಮರಾಜ್ಯ, ಬೇರೆಯವರಿಗೂ ದುಃಖವಾದರೂ ನನಗೆ ಮಾತ್ರ ಸುಖ ದೊರೆಯಬೇಕು ಎಂಬುದು ರಾವಣರಾಜ್ಯ ಎಂದು ಸೂಕ್ಷ್ಮವಾಗಿ ಅರ್ಥೈಸಿದರು.
Also read:
ರಾಮನಂತೆ ರಾವಣನೂ ಸಹ ಆದರ್ಶ
ನಮ್ಮೆಲ್ಲರಿಗೂ ರಾಮ ಹೇಗೆ ಆದರ್ಶನೋ, ರಾವಣನೂ ಸಹ ಆದರ್ಶವಾಗಿದ್ದಾನೆ. ಹೇಗೆ ಬದುಕಬೇಕು ಎಂಬುದಕ್ಕೆ ರಾಮ ಆದರ್ಶವಾದರೆ, ಹೇಗೆ ಬದುಕಬಾರದು ಎಂಬುದಕ್ಕೆ ರಾವಣ ಆದರ್ಶ ಎಂದು ಜೀವನವನ್ನು ಹೇಗೆ ಸಾಗಿಸಬೇಕು ಎಂಬುದನ್ನು ಶ್ರೀಗಳು ಸೂಕ್ಷ್ಮವಾಗಿ ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಿಂದ ಶ್ರೀಮಠದವರೆಗೂ ಶ್ರೀಪಾದಂಗಳವರ ಸನ್ನಿಧಾನದಲ್ಲಿ ಶ್ರೀರಾಮದೇವರ ಉತ್ಸವ ನಡೆಯಿತು.
ರಾತ್ರಿ ತೊಟ್ಟಿಲು ಪೂಜೆ ಹಾಗೂ ಶ್ರೀಗಳಿಂದ ಫಲ ಮಂತ್ರಾಕ್ಷತೆ ವಿತರಣೆ ನಡೆಯಿತು. ಗುರುರಾಜ ಸೇವಾ ಸಮಿತಿಯ ಪ್ರಮುಖರು, ಸದಸ್ಯರು, ಜ್ಞಾನವಾಹಿನಿ ಸಂಘದ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post