ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾ ಅಭಯಾರಣ್ಯದ ಭಾಗದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸುವ ಸಲುವಾಗಿ ಅರಣ್ಯ ಕೋಠಿಯಲ್ಲಿ ಸಿಸಿಎಫ್ ರವಿಶಂಕರ್ ಜೊತೆ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡ ಉಪಸ್ಥಿತಿಯಲ್ಲಿ ಉಂಬ್ಳೆಬೈಲು ರೈತರು ಸಭೆ ನಡೆಸಿದರು.
ಕಾಡಾನೆ ಮತ್ತು ಕಾಡು ಪ್ರಾಣಿಗಳಿಂದ ಉಂಬ್ಳೆಬೈಲು-ಕಡೇಕಲ್ ವ್ಯಾಪ್ತಿಯಲ್ಲಿನ ರೈತರ ಜಮೀನುಗಳು ನಾಶವಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಹಾಗೂ ಆನೆಗಳಿಂದ ಶಾಶ್ವತ ಪರಿಹಾರ ನೀಡುವಂತೆ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಇಲಾಖಾ ಮುಖ್ಯಸ್ಥರ ಜೊತೆ ಮಾತನಾಡಿದ ಸಿಸಿಎಫ್ ರವಿಶಂಕರ್, ಶಾಶ್ವತ ಪರಿಹಾರವಾಗಿ ಭದ್ರಾ ಅಭಯಾರಣ್ಯದಿಂದ 33 ಕಿ.ಮಿ ಆನೆ ಕಂದಕ ರಚಿಸಲು ಯೋಚಿಸಲಾಗಿದೆ. ಸರ್ಕಾರ, ಹಣಕಾಸು ಇಲಾಖೆ ಅನುಮತಿನೀಡಿದರೆ ಈ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಮಾತನಾಡಿ, ಕಂದಕ ತೋಡಲು ಸರ್ಕಾರ ಅನುಮತಿ ಕೊಡುವವರೆಗೆ ನಿಗದಿತ ಗ್ರಾಮಗಳಲ್ಲಿ ಆನೆ ದಾಳಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾ.31ರ ಒಳಗೆ ಈ ಕಾಮಗಾರಿ ನಡೆಸಿ. ಇಲ್ಲವಾದಲ್ಲಿ ರಸ್ತೆ ತಡೆಗೆ ರೂಪುರೇಷ ರಚಿಸಲಾಗುವುದು ಎಂದು ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಸಿಎಫ್ ಕಾಮಗಾರಿಯನ್ನು ಎರಡು ತಿಂಗಳಲ್ಲಿ ಮುಗಿಸಿಕೊಡುತ್ತೇವೆ ಎಂದು ಹೇಳಿದರು..
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್, ಆನೆ ಕಂದಕ ರಚಿಸಲು ಸರ್ಕಾರದಿಂದ 3 ಕೋಟಿ ರೂ. ಹಣದ ನೆರವಿಗಾಗಿ ಅರಣ್ಯ ಇಲಾಖೆ ಕಾಯುತ್ತಿದೆ. ಮಾ.31ರೊಳಗೆ ಹಣ ಬಿಡುಗಡೆ ಮಾಡಿ ಯೋಜನೆ ಆರಂಭವಾಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post