ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಗುತ್ತಿಗೆ ಕಾರ್ಮಿಕರ ಜೀವನಮಟ್ಟ ಸುಧಾರಣೆಗಾಗಿ ಕಾರ್ಮಿಕರು ಒಗ್ಗಟ್ಟಾಗಬೇಕು, ಸರ್ಕಾರಿ ನೌಕರರಿಗೆ ಸಿಗುವಂತಹ ಸೌಲಭ್ಯಗಳು ನಮ್ಮ ಗುತ್ತಿಗೆ ಕಾರ್ಮಿಕರಿಗೂ ಸಿಗುವಂತಾಗಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ತಾಲೂಕು ನಗರಸಭೆಯಲ್ಲಿ ಆಯೋಜಿಸಲಾಗಿದ್ದ ನಗರಸಭಾ ಗುತ್ತಿಗೆ ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು,ಸದನದಲ್ಲೂ ಸಹ ಗುತ್ತಿಗೆ ಕಾರ್ಮಿಕರ ಪರವಾಗಿ ತಾನು ಧ್ವನಿ ಎತ್ತಿದ್ದು, ಸದಾಕಾಲವೂ ಗುತ್ತಿಗೆ ಕಾರ್ಮಿಕರ ಯೋಗ ಕ್ಷೇಮದ ವಿಚಾರದ ವಿಷಯದಲ್ಲಿ ಆಸಕ್ತಿ ವಹಿಸುತ್ತಾ ಎಲ್ಲರ ಹಿತ ಕಾಪಾಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಧ್ಯೇಯ ಸಂಕಲ್ಪವಾದ ಶಿಕ್ಷಣ ಸಂಘಟನೆ ಹೋರಾಟ ಎಂಬ ಪರಿಕಲ್ಪನೆಯೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು, ನಿರಂತರ ನ್ಯಾಯ ಸಮ್ಮತ ಹೋರಾಟವೇ ಮನುಷ್ಯನಿಗೆ ಯಶಸ್ಸಿನ ಹಂತಕ್ಕೆ ತಲುಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಗುತ್ತಿಗೆ ಕಾರ್ಮಿಕರ ಕುಶಲೋಪರಿಗಳನ್ನು ಆಲಿಸಿದ ಶಾಸಕರು ಅವರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿ, ಕೆಲ ಸಮಸ್ಯೆಗಳನ್ನು ಸಭೆಯಲ್ಲಿಯೇ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗುತ್ತಿಗೆ ಕಾರ್ಮಿಕರ ಯೋಗ ಕ್ಷೇಮ, ಸಂಭಾವನೆಯ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದು ಇದನ್ನು ಸರ್ಕಾರದ ಗಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಸ್ರಮವಹಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಭದ್ರಾವತಿ ತಾಲ್ಲೂಕು ದಂಡಾಧಿಕಾರಿ ಪ್ರದೀಪ್, ನಗರಸಭಾ ಪೌರಾಯಕ್ತ ಪರಮೇಶ್ವರ್, ನಗರಸಭಾ ಕಂದಾಯಾಧಿಕಾರಿ ರಾಜ್ ಕುಮಾರ್, ಗುತ್ತಿಗೆ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಗೌಡ, ರಾಮನಗರ ಗುತ್ತಿಗೆ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಛಲಪತಿ ಹಾಗೂ ಭದ್ರಾವತಿ ತಾಲ್ಲೂಕಿನ ನಗರಸಭಾ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಹಾಲಿ ಸದಸ್ಯರಾದ ಬಿ.ಕೆ. ಮೋಹನ್, ನಗರಸಭಾ ಸದಸ್ಯರಾದ ಎಸ್.ಎಸ್. ಭೈರೇಗೌಡ, ರಿಯಾಜ್, ಟೀಕು ಮಂಜುನಾಥ್, ಬಿ.ಟಿ.ನಾಗರಾಜ್, ಟೀಪುಸುಲ್ತಾನ್, ಮೋಹನ್, ಬಷೀರ್, ಓಬಿಸಿ ತಾಲ್ಲೂಕು ಅಧ್ಯಕ್ಷರಾದ ಗಂಗಾಧರ್, ಕಾಂಗ್ರೆಸ್ ಮುಖಂಡರಾದ ಡಿ.ಟಿ. ಶ್ರೀನಿವಾಸ್, ದೇವೇಂದ್ರ, ಗುಂಡಣ್ಣ, ಗುತ್ತಿಗೆ ಕಾರ್ಮಿಕ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post