ಭದ್ರಾವತಿ: ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬದ ವೇಳೆ ಕಂಡು ಬರುವ ಅಂಟಿಗೆ-ಪಿಂಟಿಗೆ ಜಾನಪದ ಕಲಾ ಕಾರ್ಯಕ್ರಮ ಆಚರಣೆಯನ್ನು ಜಿಲ್ಲೆಯಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಕಲಾ ಸಂಸ್ಕೃತಿ ಉಳಿಸುವ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನ್ಯೂಟೌನ್ ಎಸ್ಎವಿ ಕನ್ನಡ ವಿದ್ಯಾಸಂಸ್ಥೆ ಸಮೀಪ ಶ್ರೀ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ಪೂಜೆ ಸಲ್ಲಿಸಿ ನಂತರ ಶಾಸಕ ಬಿ.ಕೆ. ಸಂಗಮೇಶ್ವರ್ ಗೃಹದಲ್ಲಿ ಚಾಲನೆ ನೀಡಿದರು.
ಅಂಟಿಕೆ ಪಿಂಟಿಕೆಯ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಜಾನಪದ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ಅಂಗವಾಗಿ ಮಲೆನಾಡು ಭಾಗದಲ್ಲಿ ಕಲೆಗಳು ನಶಿಸುವಂತಹ ಸಂದರ್ಭದಲ್ಲಿಯೂ ಸಹ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ತಾಲೂಕಿನ ಜಾನಪದ ಪರಿಷತ್ ಜಂಟಿಯಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಕಲೆಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇಂತಹ ಜಾನಪದ ಕಲೆಗಳಿಂದ ಮುಂದಿನ ಪೀಳಿಗೆಗೂ ಶಾಶ್ವತವಾಗಿ ಉಳಿಯಲು ಸಹಕಾರಿಯಾಗಲಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ಜಿ. ಚಂದ್ರಪ್ಪ ಮಾತನಾಡಿ ಮಲೆನಾಡಿನಲ್ಲಿ ಹೆಸರುಗಳಿಸಿರುವ ಜಾನಪದ ಕಲೆಯನ್ನು ಸಹಪರಿಚಯಿಸುವುದರ ಜೊತೆಗೆ ಜಾನಪದ ಕಲಾ ಸಾಂಸ್ಕೃತಿಕ ಪ್ರಾಕಾರವನ್ನು ಉಳಿಸುವ ದೃಷ್ಠಿಯಿಂದ ಆಯೋಜಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯ ತೀರ್ಥಹಳ್ಳಿಯಿಂದ ಆಗಮಿಸಿರುವ ಎರಡು ಜಾನಪದ ತಂಡಗಳು ಕಾರ್ಯಕ್ರಮದಲ್ಲಿ ಯಶಸ್ವಿಗೊಳಿಸಲಿವೆ. ನಗರದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಎರಡನೆಯ ವರ್ಷಕ್ಕೆ ಮುನ್ನಡೆದಿದೆ. ಪ್ರತಿ ವರ್ಷ ದೀಪಾವಳಿ ಹಬ್ಬದಂದು ನಡೆಸಿಕೊಡಲಿದ್ದಾರೆ. ಶಾಸಕ ಸಂಗಮೇಶ್ವರ್ ರವರ ಮನೆಯಿಂದ ಆರಂಭಗೊಂಡಿರುವ ಜ್ಯೋತಿಯು ಆಯ್ದ 37 ಮನೆಗಳಿಗೂ ಭೇಟಿ ನೀಡಿ ಅಂತಿಮವಾಗಿ ಎಸ್ಎವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಇವರ ಗೃಹದಲ್ಲಿ ಜ್ಯೋತಿ ಸಮರ್ಪಿಸಲಾಗುವುದು ಎಂದರು.
ಪರಿಷತ್ ಮತ್ತು ವೇದಿಕೆ ಪದಾಧಿಕಾರಿಗಳಾದ ವೇದಿಕೆ ಸಂಚಾಲಕ ಕೋಡ್ಲುಯಜ್ಞಯ್ಯ ಸಹ ಸಂಚಾಲಕ ಕೃಷ್ಣಮೂರ್ತಿ, ಕೋಶಾಧ್ಯಕ್ಷ ಹಿರಿಯೂರು ಕೆ.ಟಿ. ಪ್ರಸನ್ನ, ವೇದಮೂರ್ತಿ, ಮೌನೇಶ್ವರಚಾರ್, ಪೀಟರ್, ಮಂಜುನಾಥ್ ಮತ್ತಿತರರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post