ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಐತಿಹಾಸಿಕ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಸುಮಾರು 50 ಲಕ್ಷ ರೂ. ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಶಿಥಿಲಗೊಳ್ಳುತ್ತಿರುವ ದೇವಾಲಯವನ್ನು ಜೀರ್ಣೋದ್ದಾರ ಮಾಡಲು ಹಾಗೂ ದೇವಾಲಯ ಅಭಿವೃದ್ಧಿಗಾಗಿ ಕೇಂದ್ರ ಪುರಾತತ್ವ ಇಲಾಖೆಯಿಂದ ಸುಮಾರು 4 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದರು.
ಕೇಂದ್ರದ ಅನುದಾನ ದೊರೆಯುವುದು ತಡವಾದರೆ, ಸದ್ಯ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡಿರುವ 50 ಲಕ್ಷ ರೂ. ಅನುದಾನದಲ್ಲಿ ದೇವಾಲಯದ ಆವರಣದಲ್ಲಿ ಯಾತ್ರಿ ನಿವಾಸ, ಶೌಚಾಲಯ ಸೇರಿದಂತೆ ಭಕ್ತರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ದೇವಾಲಯದಲ್ಲಿ ಸೋರುವುದನ್ನು ತಡೆಯಲು ಶೀಘ್ರ ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ನಮ್ಮ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಗತವೈಭವವನ್ನು ಸಾರುವಂತೆ ದೇವಸ್ಥಾನ ಅಭಿವೃದ್ಧಿಯನ್ನು ಮಾಡಿದ್ದಾರೆ. ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ನವರು ಕೂಡ ಮಠ ಮಂದಿರದ ಜೀರ್ಣೋದ್ಧಾರಕ್ಕಾಗಿ ಅನುದಾನ ನೀಡಿದ್ದಾರೆ. ನಮ್ಮ ಭದ್ರಾವತಿಯ ನರಸಿಂಹ ದೇವಸ್ಥಾನ, ಕೆಳದಿಯ ಅರಸ ಶ್ರೀ ಶಿವಪ್ಪ ನಾಯಕರ ಬಿದನೂರು ಕೋಟೆ, ಬಳ್ಳಿಗಾವಿಯ ಆಂಜನೇಯ ದೇವಸ್ಥಾನ ಹಾಗೂ ಗರುಡಗಂಬದ ರಕ್ಷಣೆಗಾಗಿ ವಿಶೇಷ ಅನುದಾನದ ಹಂತದಲ್ಲಿದೆ, ನಮ್ಮ ಸರ್ಕಾರದಿಂದ ದೇವಸ್ಥಾನ ರಕ್ಷಣೆಗೆ ಸದಾ ಬೆಂಬಲವಿರುತ್ತದೆ ಎಂದರು.
ದೇವಾಲಯದ ಅಭಿವೃದ್ಧಿ ಸಮಿತಿಯೊಂದಿಗೆ, ಸಾರ್ವಜನಿಕರೊಂದಿಗೆ ಹಾಗೂ ಪುರಾತತ್ವ ಅಧಿಕಾರಿಗಳೊಂದಿಗೆ ಮಳೆಯಿಂದ ರಕ್ಷಿಸಲು ಮಾಡಬೇಕಾಗದ ಕೆಲಸಗಳ ಬಗ್ಗೆ ಸಂಸದರು ಚರ್ಚಿಸಿದರು.
ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿ ಶೇಜೇಶ್ವರ್, ಎಸಿ ದೊಡ್ಡಣ್ಣ ಗೌಡ, ಪ್ರಮುಖರಾದ ಎಸ್. ದತ್ತಾತ್ರಿ, ಮಂಗೋಟೆ ರುದ್ರೇಶ್, ಕೆಂಚೇನಳ್ಳಿ ಕುಮಾರ್, ಆನಂದ್, ತಹಶೀಲ್ದಾರ್ ಪ್ರದೀಪ್ ನಿಕ್ಕಂ, ಎಇಇ ದಯಾನಂದ್, ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾರುತಿ, ಪ್ರಧಾನ ಅರ್ಚಕ ರಂಗನಾಥ್ ಶರ್ಮಾ, ಸಹಾಯಕ ಅರ್ಚಕ ಶ್ರೀನಿವಾಸ್, ಪ್ರಮುಖರಾದ ನರಸಿಂಹಾಚಾರ್, ರಾಮಲಿಂಗಯ್ಯ, ನಗರಸಭಾ ಸದಸ್ಯೆ ಅನುಪಮಾ ಚೆನ್ನೇಶ್ ಹಾಗೂ ಹಲವು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















