ಭದ್ರಾವತಿ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದಂತೆ ಸರಕಾರಿ ನೌಕರರ ಎನ್ಪಿಎಸ್ ಪಿಂಚಣಿ ಯೋಜನೆ ರದ್ದುಪಡಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ಹೇಳಿದರು.
ಹಳೇನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಮತ್ತು ಎನ್ಪಿಎಸ್ ನೌಕರರ ಸಂಘ ಸಂಯುಕ್ತಶ್ರಯದಲ್ಲಿ ವಿನೂತನವಾಗಿ ಹಮ್ಮಿಕೊಂಡಿದ್ದ ರಕ್ತಕೊಟ್ಟೇವು ಪಿಂಚಣಿ ಬಿಡೆವು ಎಂಬ ಹೋರಾಟದ ಅಂಗವಾಗಿ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರವರು ಚುನಾವಣಾ ಪೂರ್ವದಲ್ಲಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮತ್ತು ಸರಕಾರಿ ನೌಕರರ ನೂತನ ಪಿಂಚಣಿ ಯೋಜನೆ ಎನ್ಪಿಎಸ್ ರದ್ದುಪಡಿಸುವುದಾಗಿ ಹೇಳಿದ್ದರು. ಅದರಂತೆ ರೈತರ ಸಾಲಮನ್ನ ಮಾಡಿದ್ದಾರೆ. ಎನ್ಪಿಎಸ್ ಯೋಜನೆಯನ್ನು ರದ್ದು ಪಡಿಸಿ ನೌಕರರ ಹಿತ ಕಾಪಾಡುವಂತಾಗಬೇಕು. ಹಳೇ ಪಿಂಚಣಿ ಯೋಜನೆ ಜಾರಿಗೊಂಡಲ್ಲಿ ಸರ್ವ ನೌಕರರ ರಕ್ಷಣೆ ಮಾಡಿದಂತಾಗುತ್ತದೆ. ಇಲ್ಲದಿದ್ದಲ್ಲಿ ಓಪಿಎಸ್ ಕೋಟ್ಯಾಧಿಪತಿ-ಎನ್ಪಿಎಸ್ ಭಿಕ್ಷಾಧಿಪತಿ ಎಂಬ ಮಾತಿನಂತೆ ಎನ್ಪಿಎಸ್ ನೌಕರರು ಜೀವನ ರಕ್ಷಣೆ ಇಲ್ಲದೆ ಬೀದಿ ಪಾಲಾಗುತ್ತಾರೆ. ಮುಂದಿನ ದಿನದಲ್ಲಿ ಎನ್ಪಿಎಸ್ ರದ್ದುಪಡಿಸುವಂತೆ ಒತ್ತಾಯಿಸುವ ಯಾವುದೇ ರೀತಿಯ ಹೋರಾಟಕ್ಕೆ ಅಥವಾ ವಿಧಾನ ಸೌಧ ಮುತ್ತಿಗೆ ಮಾಡುವ ಹೋರಾಟಕ್ಕೆ ನೌಕರರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದ ಅವರು ಗ್ರಾಮಾಭಿವೃದ್ದಿ ಮತ್ತು ಕಂದಾಯ ಇಲಾಖೆಗಳ ನೌಕರರು ಈ ಹೋರಾಟಕ್ಕೆ ಭಾಗವಹಿಸದೆ ಇರುವುದನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದರು.
ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಮಲ್ಲಪ್ಪ ಹಾಗು ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಗುಡದಪ್ಪ ಕಸಬಿ ಮಾತನಾಡಿ, ಸಮಾಜದಲ್ಲಿಂದು ರಸ್ತೆತಡೆ, ಬಂದ್, ರಸ್ತೆಯಲ್ಲಿ ಬೆಂಕಿಹಚ್ಚಿ ಮಾಡುವ ಮುಂತಾದ ಹೋರಾಟಗಳನ್ನು ನೋಡಿದ್ದೇವೆ. ಆದರೆ ಎನ್ಪಿಎಸ್ ನೌಕರರು ಸರಕಾರವನ್ನು ಕಣ್ತೆರಸಲು ವಿನೂತನವಾಗಿ ರಕ್ತದಾನ ಮಾಡುವ ಅಮೂಲ್ಯ ಹೋರಾಟ ಸಂತಸ ತಂದಿದೆ. ಹೋರಾಟಗಾರರಿಗೆ ಬೆಂಬಲ ಸೂಚಿಸಿ ಪವಿತ್ರ ರಕ್ತದಾನದಿಂದ ನೊಂದವರಿಗೆ ಪ್ರಾಣ ಉಳಿಸುವ ಕಾರ್ಯ ಮಾಡುತ್ತಿದ್ದೀರಿ. ನಿಮ್ಮ ಸಂಕಷ್ಟದಲ್ಲು ನೊಂದು ರಕ್ತದಾನ ಮಾಡದೆ ಪರರಿಗೆ ಒಳಿತನ್ನು ಬಯಸಿ ರಕ್ತದಾನ ಮಾಡಿ ಎಂದು ಹೇಳಿದ ಅವರು ಈ ಹಿಂದೆ ರಾಜ್ಯವ್ಯಾಪಿ ನಡೆದ ವೈದ್ಯಾಧಿಕಾರಿಗಳ ಹೋರಾಟದ ಸಂದರ್ಭದಲ್ಲಿ ಎಲ್ಲಾ ವೈದ್ಯರುಗಳಿಂದ ಐಎಎಸ್ ಅಧಿಕಾರಿಗಳು ರಾಜೀನಾಮೆ ಪಡೆದಿದ್ದರು. ಆದರೆ ನಾವು ಅಂಜದೆ, ಹೆದರದೆ ಹೋರಾಟಕ್ಕೆ ಮುನ್ನುಗ್ಗಿದ್ದರಿಂದ ಯಶಸ್ಸು ಸಾಧಿಸಿದ್ದೇವೆ. ಅದರಂತೆ ನೀವು ಸಹ ನಿಮ್ಮ ರಕ್ಷಣೆಗಾಗಿ ಮಾಡುವ ಹೋರಾಟ ಯಶಸ್ವಿಯಾಗಲೆಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಎನ್ಪಿಎಸ್ ನೌಕರರ ಸಂಘದ ಸಂಚಾಲಕ ರಂಗನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ರಂಗನಾಥ ಪ್ರಸಾದ್, ಎ.ಕೆ.ಚಂದ್ರಪ್ಪ, ಆರ್.ಎನ್.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್.ಬಸವರಾಜ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ವಿನೂತ ಉಪಸ್ಥಿತರಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post