ಭದ್ರಾವತಿ: ನಗರದ ಜಿಂಕ್ ಲೈನ್ ನಿವಾಸಿ ಮಹೇಶ್ ಎಂಬ ಹಲ್ಲೆಕೋರನನ್ನು ಬಂಧಿಸುವಂತೆ ಸ್ಥಳೀಯ ನಿವಾಸಿಗಳು ನ್ಯೂಟೌನ್ ಪೊಲೀಸ್ ಠಾಣೆ ಮುಂಭಾಗ ಶಾಮಿಯಾನ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಜಿಂಕ್ ಲೈನ್ ವಾಸಿ ಮಹೇಶ ಎಂಬ ವ್ಯಕ್ತಿಯು ಗುರುವಾರ ರಾತ್ರಿ ಕುಡಿದ ಅಮಲಿನಲ್ಲಿ ಅದೇ ಬಡಾವಣೆಯ ಗಿರಿ ಮತ್ತಿತರರ ಮೇಲೆ ಹಲ್ಲೆ ನಡೆಸಿದ್ದಾನೆ. ಈತನನ್ನು ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಿ ಹಲ್ಲೆಗೊಳಗಾದ ವ್ಯಕ್ತಿಯ ತಾಯಿ ಸರೋಜಮ್ಮ ದೂರು ಸಲ್ಲಿಸಿ ಕುಟುಂಬಸ್ಥರೊಂದಿಗೆ ಠಾಣೆ ಮುಂಭಾಗ ಪ್ರತಿಭಟಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮಹೇಶ್ ಎಂಬಾತನು ನನ್ನ ಮತ್ತು ನನ್ನ ಮಗ ಗಿರಿ ಮತ್ತಿತರರ ಮೇಲೆ ವಿನಾಃಕಾರಣ ಹಲ್ಲೆ ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಆತನ ಕುಟುಂಬಸ್ಥರಿಂದ ಇಂತಹ ಪ್ರಕರಣಗಳು ಪದೆ ಪದೇ ನಡೆದು ಶಾಂತಿಗೆ ಭಂಗವಾಗುತ್ತಿದೆ. ಸ್ಥಳೀಯ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವುದೆ ಕಷ್ಟಕರವಾಗಿದೆ. ಅದ್ದರಿಂದ ಪೊಲೀಸರು ಆತನನ್ನು ಬಂಧಿಸಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಠಾಣೆಯ ಮುಂಭಾಗ ಜನರು ಜಮಾಯಿಸುತ್ತಿದ್ದಂತೆ ಈ ಪ್ರಕರಣವು ರಾಜಕೀಯವಾಗಿ ತಿರುವು ಪಡೆದುಕೊಂಡು ಮಹೇಶನನ್ನು ಬಂಧಿಸುವಂತೆ ಒತ್ತಾಯಿಸುವ ಗುಂಪಿಗೆ ಬೆಂಬಲವಾಗಿ ಮಾಜಿ ನಗರಸಭಾಧ್ಯಕ್ಷ ಬಿ.ಕೆ.ಮೋಹನ್, ನಗರಸಭಾ ಸದಸ್ಯ ಚನ್ನಪ್ಪ, ಮಾಜಿ ಸದಸ್ಯ ಬಾಲಕೃಷ್ಣ, ಛಲವಾದಿ ಮಹಾಸಭಾಧ್ಯಕ್ಷ ಸುರೇಶ್ ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರು. ಈ ಗುಂಪಿನ ವಿರುದ್ದ ಅದೇ ಜಿಂಕ್ ಲೈನ್ ನಿವಾಸಿಗಳು ಜಿಪಂ ಮಾಜಿ ಸದಸ್ಯ ಎಸ್.ಕುಮಾರ್ ನೇತೃತ್ವದಲ್ಲಿ ನಗರಸಭಾ ಸದಸ್ಯ ಅಜಿತ್ ಮುಂತಾದವರು ಸೇರಿದಂತೆ ಮಹೇಶ್ ಬೆಂಬಲವಾಗಿ ಠಾಣೆ ಮುಂಭಾಗ ಜಮಾಯಿಸಿದ್ದರು.
ಡಿವೈಎಸ್ಪಿ ಓಂಕಾರನಾಯ್ಕ, ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್, ನ್ಯೂಟೌನ್ ಸಬ್ಇನ್ಸ್ಪೆಕ್ಟರ್ ಪ್ರಕಾಶ್ ಸೇರಿದಂತೆ ಹಳೇನಗರ, ಕಾಗದ ನಗರ, ಶಿವಾಜಿ ಸರ್ಕಲ್ ಹಾಗು ಗ್ರಾಮಾಂತರ ಪೊಲೀಸ್ ಠಾಣೆಗಳ ಸಬ್ಇನ್ಸ್ಪೆಕ್ಟರ್ಗಳು ಮತ್ತು ಸಿಬ್ಬಂದಿ ವರ್ಗ ಜಮಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪೊಲೀಸ್ ಅಧಿಕಾರಿಗಳು ಗಲಭೆ ನಡೆದ ಬಡಾವಣೆಯಲ್ಲಿ ಉಭಯೇತರರ ಶಾಂತಿ ಸಭೆ ನಡೆಸಲು ಮುಂದಾಗುವುದಾಗಿ ತಿಳಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post