ಭದ್ರಾವತಿ: ತಾಲೂಕಿನ ಬಾಳೆಮಾರನಹಳ್ಳಿ ಸರ್ವೆನಂ: 4 ರಲ್ಲಿ ಸಾಗು ಮಾಡುತ್ತಿರುವ ರೈತರು ಸೇರಿದಂತೆ ಗ್ರಾಮಸ್ಥರು ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಮಂಗಳವಾರ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಗ್ರಾಮದ ಸರ್ವೆ ನಂ: 4 ರಲ್ಲಿ 5.20 ಎಕರೆ ಸರಕಾರಿ ಗುಂಡುತೋಪು ಭೂಮಿಯಲ್ಲಿ ಸುಮಾರು 50 ವರ್ಷಗಳಿಂದ ಸಾಗು ಮಾಡುತ್ತಿರುವ ಕೃಷಿಕರಿಗೆ ತಾಲೂಕು ಆಡಳಿತ ಸಾಗುವಳಿ ಚೀಟಿ ನೀಡದೆ ನಿರ್ಲಕ್ಷ ವಹಿಸಿದೆ. ಗ್ರಾಮದ ಮಹೇಶ್ವರಪ್ಪ 1.20 ಎಕರೆ ಭೂಮಿಯನ್ನು ಸಾಗು ಮಾಡುತ್ತಿದ್ದರೆ ಜಿ.ಉಮೇಶ್ 0.30 ಗುಂಟೆ, ಬಿ.ಕೆ.ಸೋಮಶೇಖರ್ 0.30 ಭೂಮಿಯನ್ನು ಸಾಗು ಮಾಡುತ್ತಾ ಅಡಿಕೆ ಮತ್ತಿತರೆ ಫಸಲುಗಳನ್ನು ಬೆಳೆಯುತ್ತಿದ್ದಾರೆ.
ಇನ್ನುಳಿದ ಸರಕಾರಿ ಭೂಮಿಯನ್ನು ವಶ ಪಡಿಸಿಕೊಳ್ಳಲು ಕೆಲವರು ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಂಡು ದುಂಡಾವರ್ತನೆ ಮಾಡುತ್ತಿದ್ದ ಘಟನೆಯು ತಾಲೂಕು ಆಡಳಿತಕ್ಕೆ ತಿಳಿದು ಸ್ಥಳ ತನಿಖೆ ಮಾಡಿ ಅನಧಿಕೃತ ಗುಡಿಸಲು ವಾಸಿಗಳನ್ನು ತೆರವುಗೊಳಿಸಿದ್ದು ನ್ಯಾಯ ಸಮ್ಮತವಾಗಿದೆ. ಸುಮಾರು ೫೦ ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಈ ಅಕ್ರಮದಾರರಿಂದ ಅನ್ಯಾಯ ಎದುರಾಗುವುದನ್ನು ತಡೆಗಟ್ಟಿ ಸಾಗು ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಸಾಗುವಳಿದಾರರಾದ ಜಿ.ಉಮೇಶ್, ಮಹೇಶ್ವರಪ್ಪ, ಸೋಮಶೇಖರ್ ವಹಿಸಿದ್ದರು. ಮುಖಂಡರಾದ ನವೀನ್, ಉಮೇಶ್, ಹರೀಶ್, ಗಿರೀಶ್, ಸತೀಶ್ ಸೇರಿದಂತೆ ಅನೇಕ ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post