ಕಲ್ಪ ಮೀಡಿಯಾ ಹೌಸ್ | ಬೀದರ್ |
ಮುಖ್ಯಮಂತ್ರಿ ಸಿದ್ಧರಾಮಯ್ಯ CM Siddaramaiah ಅವರು ಇಂದು ಮಂಡಿಸಿದ 2024-25ನೇ ಸಾಲಿನ ಬಜೆಟ್ ಅಭಿವೃದ್ಧಿ ವಿರೋಧಿ, ಜನ ವಿರೋಧಿ ಹಾಗೂ ರೈತ ವಿರೋಧಿಯಾಗಿದೆ. ಯಾವುದೇ ಗೊತ್ತು ಗುರಿ ಇಲ್ಲದ ಬೋಗಸ್ ಗ್ಯಾರಂಟಿ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ MLA Shailendra Beldale ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಪರದಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಕಾರಣಕ್ಕಾಗಿ ಅಭಿವೃದ್ಧಿ ಹಳ್ಳ ಹಿಡಿಸಲಾಗಿದೆ. ಇದೀಗ ಬಜೆಟ್ ನಲ್ಲಿ ಯಾವುದೇ ಮಹತ್ವದ ಯೋಜನೆ ಘೋಷಣೆ ಮಾಡಿಲ್ಲ ಎಂದಿದ್ದಾರೆ.
ಬಜೆಟ್ ಗಾತ್ರ ಹೆಚ್ಚಿಸಿದ್ದರೂ ಸಂಪನ್ಮೂಲದ ಕ್ರೋಢೀಕರಣ ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಬಜೆಟ್ ಕೇವಲ ಅಂಕಿ-ಸಂಖ್ಯೆಗಳಿಗೆ ಸೀಮಿತವಾಗಿದ್ದು, ಗೊತ್ತು ಗುರಿಯನ್ನೇ ಹೊಂದಿಲ್ಲ. ಇಂತಹ ಬಜೆಟ್ ಮಂಡನೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿಯೇ ನಾವು ಮುಖ್ಯಮಂತ್ರಿಗಳ ಬಜೆಟ್ ಭಾಷಣಕ್ಕೆ ಬಹಿಷ್ಕಾರ ಹಾಕಿದ್ದೇವೆ ಎಂದು ಕಿಡಿ ಕಾರಿದ್ದಾರೆ.
Also read: ತಲೆ ಬುಡವಿಲ್ಲದ ಬೋಗಸ್ ಬಜೆಟ್: ಸರ್ಕಾರದ ವಿರುದ್ಧ ಎಂಎಲ್’ಸಿ ಡಿ.ಎಸ್. ಅರುಣ್ ಕಿಡಿ
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ. ಹೀಗಾಗಿ ಈ ಬಾರಿ ಹಿಂದುಳಿದ ಬೀದರ್ ಜಿಲ್ಲೆಗೆ ವಿಶೇಷ ಯೋಜನೆ ಸಿಗಬಹುದೆಂಬ ಜನರ ಭರವಸೆಗಳು ಸಂಪೂರ್ಣ ಹುಸಿಯಾಗಿವೆ. ಬಂಡವಾಳ ಹೂಡಿಕೆದಾರರಿಗೆ ಜಿಲ್ಲೆಗೆ ಆಕರ್ಷಿಸಿ ಜವಳಿ(ಅಪರೇಲ್ ಪಾರ್ಕ್) ಅಥವಾ ದೊಡ್ಡ ಕೈಗಾರಿಕೆ ತಂದು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಬಹುದು ಎಂಬ ಜನರ ಬೇಡಿಕೆಗೆ ಸ್ಪಂದಿಸಿಲ್ಲ. ಗೋದಾವರಿ ಜಲಾನಯನದ ನೀರಿನ ಸದ್ಬಳಕೆ ಮಾಡಿಕೊಂಡು ರೈತರಿಗೆ ಅನುಕೂಲ ಕಲ್ಪಿಸುವ ರೈತರ ಬೇಡಿಕೆಗೆ ಮನ್ನಣೆ ನೀಡಿಲ್ಲ. ಕಾರಂಜಾ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಜಿಲ್ಲೆಯ ನೀರಾವರಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದು ದೂರಿದ್ದಾರೆ.
ಜಿಲ್ಲೆಗೆ ನಾಮವಾಸ್ತೆ ಕೆಲವೊಂದು ಯೋಜನೆ ಘೋಷಿಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ. ಈ ಬಜೆಟ್’ನಲ್ಲಿರುವ ಅಂಶಗಳಿಗೂ ವಾಸ್ತವಕ್ಕೂ ತಾಳೆಯಾಗುತ್ತಿಲ್ಲ. ಇದನ್ನು ಗಮನಿಸಿದರೆ ಈ ಬಜೆಟ್ ಬೇಕಾರ್ ಎಂಬುದು ಸ್ಪಷ್ಟವಾಗುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ- ಒಂದು ಕಣ್ಣಿಗೆ ಸುಣ್ಣ ಹಚ್ಚು ಕಾಂಗ್ರೆಸ್ ಮನಸ್ಥಿತಿಯನ್ನು ಈ ಬಜೆಟ್ ತೋರಿಸಿಕೊಟ್ಟಿದೆ. ಜನ ವಿರೋಧಿ, ರೈತ ವಿರೋಧಿ, ಅಭಿವೃದ್ಧಿ ವಿರೋಧಿ ಬಜೆಟ್ ಕೊಟ್ಟವರಿಗೆ ಜನರು ತಕ್ಕ ಪಾಠ ಕಲಿಸುವುದು ಖಚಿತ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















