ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೆಳೆ ವಿಮೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳು ಹಾಗೂ ಸಹಾಯವಾಣಿ ಸಂಖ್ಯೆಯ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಇನ್ಶುರೆನ್ಸ್ ಕಂಪನಿಯ ಅಧಿಕಾರಿಗಳಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸೂಚಿಸಿದರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕಮಠಾಣಾ ಗ್ರಾಮದಲ್ಲಿ ಸೋಮವಾರ 2021-22ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಿಂದ ಬಹಳಷ್ಟು ದೂರುಗಳು ಕೇಳಿ ಬರುತ್ತಿವೆ. ಬೆಳೆ ಹಾನಿ ಸಮೀಕ್ಷೆ ನಡೆಸುವ ವಿಧಾನಗಳು, ಸಹಾಯವಾಣಿ ಸಂಖ್ಯೆಯ ವಿಷಯದಲ್ಲಿ ರೈತರು ದೂರುತ್ತಿದ್ದಾರೆ ಎಂದು ಹೇಳಿದರು.
ಬೆಳೆ ವಿಮೆಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಸಂಪರ್ಕಿಸುವಂತೆ ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಆ ಸಂಖ್ಯೆಗೆ ಕರೆ ಮಾಡಿದರೆ ಅನೇಕ ಭಾರಿ ಲೈನ್ ಸಿಗುವುದಿಲ್ಲ. ಸಂಪರ್ಕ ಸಾಧ್ಯವಾದರು ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ. ಇನ್ಶುರೆನ್ಸ್ ಕಂಪನಿಯ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಕೂಡಲೇ ಪರಿಹಾರ ಕಂಡುಕೊಳ್ಳಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅಧಿಕಾರಿಗಳಿಗೆ ಸೂಚಿಸಿದರು.
2006ರಲ್ಲಿ ನಾನು ಕೃಷಿ ಸಚಿವನಾಗಿದ್ದಾಗ ಕೃಷಿ ಇಲಾಖೆಯಿಂದ ರೈತರ ಬಿತ್ತನೆ ಬೀಜ ಖರೀದಿಗೆ ಶೇ. 70ರಷ್ಟು ಸಬ್ಸಿಡಿ ನೀಡಿದ್ದೆವು. ಈಗ ಶೇ. 50ಕ್ಕಿಂತ ಕಡಿಮೆ ಸಬ್ಸಿಡಿ ನೀಡ್ತಿದ್ದಾರೆ. 2006ರಲ್ಲಿ ರೈತರ ಸಾಲಮನ್ನಾ ಮಾಡಿದ್ದೇವು. ಮೊನ್ನೆ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕೂಡ ರೈತರ ಸಾಲಮನ್ನಾ ಮಾಡಿದ್ದೇವೆ. ನಾನು ಕೃಷಿ ಸಚಿವನಾಗಿದ್ದಾಗ, ರೈತರು ಕೇವಲ ಒಂದು ರೂಪಾಯಿ ನೀಡಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಿದ್ದೆ. ರೈತರು ಹೆಸರು ನೊಂದಾಯಿಸುವ ಮೂಲಕ ತಮಗೆ ಯಾವ ಬೀಜ, ಯಾವ ತಳಿಯ ಬೀಜ ಬೇಕು ಎಂಬುದನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದಾಗಿತ್ತು. ಆದರೆ ಈಗ ಆ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು.
ಕೃಷಿ ಇಲಾಖೆಯ ಸುಧಾರಣೆಯ ದೃಷ್ಟಿಯಿಂದ ಅನೇಕ ಬದಲಾವಣೆ ತರುವ ಕೆಲಸವನ್ನು ನಾನು ಕೃಷಿ ಸಚಿವನಾಗಿದ್ದಾಗ ಮಾಡಿದ್ದೆ. ಇನ್ಶುರೆನ್ಸ್ ವಿಷಯದಲ್ಲಿ ಕೆಲ ಬದಲಾವಣೆಗಳು ಆಗಬೇಕಾಗಿದೆ. ರೈತರಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಬೀದರ್ ನಿಂದ ದಿಲ್ಲಿಯವರೆಗೂ ರೈತರ ಬೆಳೆಗಳಿಗೆ ಒಂದೇ ಬೆಲೆ ಇರಬೇಕು. ಅದು ವೈಜ್ಞಾನಿಕ ಬೆಲೆಯಾಗಿರಬೇಕು. ರೈತರ ಪರವಾಗಿ ನಾನು ಸದಾಕಾಲವೂ ಧ್ವನಿ ಎತ್ತುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಇದೇ ವೇಳೆ ಮಾತನಾಡಿದ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಸ್ ರವರು, ಹಿಂಗಾರು ಹಂಗಾಮಿನಲ್ಲಿ ನಮ್ಮ ಜಿಲ್ಲೆಯಲ್ಲಿ ಮುಖ್ಯವಾಗಿ ಬೆಳೆಯುವ ಬೆಳೆ ಕಡಲೆಯಾಗಿದೆ. ಜೆ.ಜಿ ಲೆವೆನ್, ಜಾಕಿ ಎಂಬ ಎರಡು ತಳಿಯ ಕಡಲೆ ಬೀಜಗಳನ್ನು ಕೃಷಿ ಇಲಾಖೆಯಿಂದ ವಿತರಣೆ ಮಾಡುತ್ತಿದ್ದೇವೆ. ಎಮ್ 35-1 ತಳಿಯ ಜೋಳದ ಬೀಜ ವಿತರಣೆ ಮಾಡುತ್ತಿದ್ದೇವೆ. ಎ-ಒನ್ ಎಂಬ ತಳಿಯ ಕುಸುಬೆ ಬೀಜ ವಿತರಣೆ ಮಾಡಲಾಗುತ್ತದೆ ಎಂದರು.
ರೈತರು ಬೀಜೋಪಚಾರ ಮಾಡುವ ಮೂಲಕ ಬಿತ್ತನೆ ಮಾಡಬೇಕು. ಅದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ. ಮಿಶ್ರ ಬೆಳೆ ಪದ್ದತಿಯಲ್ಲಿ ಬಿತ್ತನೆ ಮಾಡಿದರೆ ರೈತರಿಗೆ ಒಳ್ಳೆಯ ಲಾಭ ದೊರೆಯುತ್ತದೆ ಎಂದು ತಾರಾಮಣಿ ಜಿ.ಎಸ್ ರವರು ಹೇಳಿದರು. ಸಹಾಯಕ ಕೃಷಿ ನಿರ್ದೇಶಕರಾಗಿರುವ ದೂಳಪ್ಪ ಹೊಸಾಳೆ, ಬೆಳೆ ಹಾನಿ ವೀಕ್ಷಣೆ ಜಿಲ್ಲಾ ಸಂಯೋಜಕರಾಗಿರುವ ಪವನ್ ಗೋನಾಳಿಕರ್ ರವರು ಮಾತನಾಡಿ, ಬೆಳೆ ವಿಮೆಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಜಿ.ಎಸ್. ತಾರಾಮಣಿ , ಸಹಾಯಕ ಕೃಷಿ ನಿರ್ದೇಶಕ ದೂಳಪ್ಪ ಹೊಸಾಳೆ, ಕಮಠಾಣಾ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಜಮೀರ್, ಬೆಳೆ ಹಾನಿ ವೀಕ್ಷಣೆ ಜಿಲ್ಲಾ ಸಂಯೋಜಕ ಪವನ್ ಗೋನಾಳಿಕರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿಜಯಕುಮಾರ್ ಸೇರಿದಂತೆ ಕೃಷಿ ಇಲಾಖೆ, ಇನ್ಶುರೆನ್ಸ್ ಕಂಪನಿಯ ಅಧಿಕಾರಿಗಳು, ರೈತರು, ಗ್ರಾಮಸ್ಥರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post