ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಳ್ಳಿ, ಮನ್ನಾಎಖೇಳ್ಳಿ ಗ್ರಾಮಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು Bandeppa Khashempur ಭಾನುವಾರ ಸಂಜೆ ಗ್ರಾಮ ಸಂಚಾರ ನಡೆಸಿ ಅಬ್ಬರದ ಪ್ರಚಾರದೊಂದಿಗೆ ಮತಯಾಚನೆ ನಡೆಸಿದರು.
ಮನ್ನಳ್ಳಿ, ಮನ್ನಾಎಖೇಳ್ಳಿ ಗ್ರಾಮಗಳ ಗ್ರಾಮಸ್ಥರು ಡೊಳ್ಳು, ಹಲಗೆ, ಭಾಜಾ ಭಜಂತ್ರಿ ಸೇರಿದಂತೆ ವಿವಿಧ ಕಲಾಮೇಳಗಳೊಂದಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರೆ ಕುಂಭ, ಕಳಸ ಹೊತ್ತು ಬಂದ ಮಹಿಳೆಯರು ಮತಯಾಚನಾ ಯಾತ್ರೆಗೆ ಮೆರುಗು ತಂದರು. ಗ್ರಾಮಗಳ ವಿವಿಧೆಡೆ ನೂರಾರು ಜನ ಮಹಿಳೆಯರು ಶಾಸಕರಿಗೆ ಆರತಿ ಬೆಳಗಿ ಶುಭ ಹಾರೈಸಿದರು.
ಇದೇ ವೇಳೆ ರಸ್ತೆ ಸಂಚಾರ ನಡೆಸಿ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದ ಶಾಸಕರನ್ನು ವಿವಿಧೆಡೆ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು. ಮತಯಾಚನಾ ಯಾತ್ರೆಯುದ್ದಕ್ಕೂ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಸಿಳ್ಳೆ, ಕೇಕೆ, ಹರ್ಷೋದ್ಗಾರ ಮೊಳಗಿಸಿದರು. ಮತಯಾಚನೆಯ ನಡುವೆ ಶಾಸಕರು ಗ್ರಾಮಗಳ ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಗ್ರಾಮಗಳಲ್ಲಿನ ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.
Also read: ಕಾಂಗ್ರೆಸ್ ಪಕ್ಷ ಪಿಎಫ್ಐ ಅಜೆಂಡಾದಂತೆ ಕಾರ್ಯ ನಿರ್ವವಹಿಸುತ್ತಿದೆ: ಅಮಿತ್ ಶಾ
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನಾನು ಮೂರು ಭಾರಿ ಶಾಸಕನಾಗಿ, ಎರಡು ಬಾರಿ ಸಚಿವನಾಗಿ ಜಿಲ್ಲೆಯ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಕೆಲಸ ಮಾಡಿದ್ದೇನೆ. ಜೆಡಿಎಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲಾ ರೈತರ ಸಾಲಮನ್ನಾ ಸೇರಿದಂತೆ ಮಹತ್ವದ ಕಾರ್ಯಕ್ರಮಗಳನ್ನು ನೀಡಿದ್ದೇವೆ ಎಂದರು.
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡುತ್ತೇವೆ. ರೈತರ ಬೋರ್ವೆಲ್ ಗಳಿಗೆ ದಿನದ ಇಪ್ಪತ್ನಾಲ್ಕು ತಾಸು ವಿದ್ಯುತ್ ಪೂರೈಕೆ ಕೆಲಸ ಮಾಡುತ್ತೇವೆ. ರೈತರಿಗೆ ಪ್ರತಿ ಎಕರೆಗೆ ಹತ್ತು ಸಾವಿರ ರೂ.ಗಳಂತೆ ಹತ್ತು ಎಕರೆಯವರೆಗೂ ಸಾಗುವಳಿ ಖರ್ಚಿಗಾಗಿ ಸಹಾಯಧನ ನೀಡುತ್ತೇವೆ. ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಿಗೆ ಮಹತ್ವದ ಕಾರ್ಯಕ್ರಮಗಳನ್ನು ನೀಡುತ್ತೇವೆ.
ನಾಡಿನ ಒಳಿಗಾಗಿ, ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ನಾಡಿನ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಜನರು ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ನಮ್ಮನ್ನು ಅತಿಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚುನಾವಣಾ ಪ್ರಚಾರದ ವೇಳೆ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post