ಕಲ್ಪ ಮೀಡಿಯಾ ಹೌಸ್ | ಬೀದರ್ |
ಇತ್ತೀಚೆಗೆ ನಿಧನರಾದ ರಾಜಕೀಯ ನಾಯಕರು, ಗಣ್ಯ ವ್ಯಕ್ತಿಗಳು, ನಟರು, ಸಾಹಿತಿಗಳು, ಸೈನಿಕರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಆರಂಭವಾದ ಚಳಿಗಾಲದ ಅದಿವೇಶನದ ಮೊದಲ ದಿನದ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಂಡು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಂಡಿಸಿದ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಅವರು, ಕಳೆದ ಅದಿವೇಶನದಿಂದ ಇಲ್ಲಿಯವರೆಗೂ ನಾವು ಅನೇಕರನ್ನು ಕಳೆದುಕೊಂಡಿದ್ದೇವೆ.
ಅವರಲ್ಲಿ ಕೊಪ್ಪಳ ಜಿಲ್ಲೆಯವರಾದ ಮಾಜಿ ಸಚಿವ ಎಸ್.ಆರ್. ಮೋರೆ, ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಶಾಸಕರಾದ ಉರಿಮಜಲು ರಾಮ್ ಭಟ್, ಮಾಜಿ ಶಾಸಕರಾದ ಡಾ. ಎಮ್.ಪಿ ಕರ್ಕಿ, ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್ ನಾರಾಯಣಾಚಾರ್ಯ, ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಹಿರಿಯ ನಟ ಶಿವರಾಂ, ಸಿಡಿಎಸ್ ಬಿಪಿನ್ ರಾವತ್ ಮತ್ತು ಸೈನಿಕರು, ಮಾಜಿ ರಾಜ್ಯಪಾಲರಾಗಿದ್ದ ಕೆ. ರೋಸಯ್ಯರವರು ಸೇರಿದಂತೆ ಅನೇಕರು ನಿಧನರಾಗಿದ್ದಾರೆ. ಅವರೆಲ್ಲರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಅವರುಗಳ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇದೇ ವೇಳೆ ಸೇನಾ ಹೆಲಿಕಾಪ್ಟರ್ ಪತನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೆಲಿಕಾಪ್ಟರ್ ಪತನದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ರವರು ಮತ್ತು ಸೈನಿಕರು ಮೃತಪಟ್ಟಿದ್ದಾರೆ. ಬಿಪಿನ್ ರಾವತ್ ರವರು ಸೇನಾ ಮುಖ್ಯಸ್ಥರಾಗಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ದೇಶದ ಒಳಿತಿಗಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅವರ ಸಾವು ದೇಶಕ್ಕೆ ದೊಡ್ಡಮಟ್ಟದ ನಷ್ಟವನ್ನು ಉಂಟುಮಾಡಿದೆ. ಅವರೊಟ್ಟಿಗೆ ಅನೇಕ ಯೋಧರು ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯಬೇಕು ಎಂದರು.
ನಟ ಪುನೀತ್ ರವರ ನಿಧನದ ಕುರಿತು ಮಾತನಾಡಿದ ಅವರು, ನಟ ಪುನೀತ್ ರವರ ಸಾವಿನ ಸುದ್ದಿ ಕೇಳಿ ನಾಡಿಗೆ ನಾಡು ಸ್ತಬ್ದವಾಗಿತ್ತು. ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಅವರ ಸಮಾಜ ಸೇವೆಯ ಬಗ್ಗೆ ಅವರ ನಿಧನದ ನಂತರವೇ ಗೋತ್ತಾಗುತ್ತಿದೆ. ಅವರ ನಗುಮುಖದ ಪೋಟೋ ಆಕರ್ಷಕವಾಗಿದೆ. ಅವರ ವ್ಯಕ್ತಿತ್ವ ಮಾದರಿಯಾಗಿದೆ. ಪುನೀತ್ ರವರಿಗೆ ಕರ್ನಾಟಕ ರತ್ನದ ಜೊತೆಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post