ಭದ್ರಾವತಿ: ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಹೆಸರಿನ ರಾಜಕಾರಣ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಅವರು ಸೋಮವಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೇಶದಾಧ್ಯಂತ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಶಾಸಕ ಬಿ.ಕೆ.ಸಂಗಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಕೇಂದ್ರ ನರೇಂದ್ರ ಮೋದಿ ಸರಕಾರದ ವಿರುದ್ದ ಮಾತನಾಡಿದರು.
ದೇಶದಲ್ಲಿ ಅಗತ್ಯ ವಸ್ತುಗಳ ಮತ್ತು ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗು ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರು ತತ್ತರಿಸುವಂತಾಗಿದೆ. ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿ ಕೇವಲ ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಾ ಬಡವರ ಏಳಿಗೆಯನ್ನು ಮರೆತಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಜಾತ್ಯಾತೀತ ಸರಕಾರ ನೀಡಲು ಸಾಧ್ಯ. ಅದ್ದರಿಂದ ಬಿಜೆಪಿಯನ್ನು ಕಿತ್ತೊಗೆಯಬೇಕೆಂದು ಹೇಳಿದರು.
ಪಕ್ಷದ ನಗರಾಧ್ಯಕ್ಷ ಟಿ.ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಮುಖಂಡರಾದ ಮೆಡಿಕಲ್ ಆನಂದ್, ಬಾಲಕೃಷ್ಣ, ಬಿ.ಟಿ.ನಾಗರಾಜ್, ಅಮೀರ್ಜಾನ್, ಬಾಬಾಜಾನ್, ಚನ್ನಪ್ಪ, ಫ್ರಾನ್ಸಿಸ್, ಅಂಜನಪ್ಪ, ಗಂಗಾಧರ, ಕಾವೇರಮ್ಮ ಮುಂತಾದವರು ಮಾತನಾಡಿ ಮೋದಿ ರವರು ಕಪ್ಪುಹಣ ತರುವುದಾಗಿ, ಬಡವರ ಖಾತೆಗೆ ಹಣ ಹಾಕುವುದಾಗಿ ಹೇಳಿ ವಂಚಿಸಿದ್ದಾರೆ. ರಾಮಮಂದಿರ ನಿರ್ಮಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಇವರದು ಡೋಗಿ ಮತ್ತು ಭೂಕಾಳಿ ಸರಕಾರವಾಗಿದೆ. ಜಾತಿ-ಜಾತಿಗಳ ನಡುವೆ ಘರ್ಷಣೆ ನಡೆಸಿ ಅಶಾಂತಿ ಮೂಡಿಸುವ ಪಕ್ಷವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನೀಯರನ್ನು ಗುಂಡಿಟ್ಟು ಕೊಂದ ಪಕ್ಷವಾಗಿದೆ. ಸಿದ್ದಾಂತವಿಲ್ಲದ ಬಿಜೆಪಿಯನ್ನು ಬುಡ ಸಮೇತ ಕಿತ್ತೊಗೆಯಬೇಕು. ಅಚ್ಚೇದಿನ್ ಆಯೇಗಾ ಎಂದು ಹೇಳುವ ಮೋದಿರವರಿಂದ ಬಡವರಿಗೆ ಅಚ್ಚೇದಿನ್ ಬಾರದೆ ಮೋದಿ ರವರಿಗೆ ಮಾತ್ರ ಲಭಿಸಿದೆ ಎಂದು ವ್ಯಂಗ್ಯ ಮಾಡಿದರು.
ಮುಖಂಡರಾದ ಲೋಕೇಶ್, ಶಿವಕುಮಾರ್, ಇಮ್ರಾನ್, ಪ್ರೇಮ್ ಕುಮಾರ್, ರಾಘವೇಂದ್ರ, ಜಾರ್ಜ್ ಗೋಪಿ, ವೆಂಕಟೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ















