ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ : ಬುಡಕಟ್ಟು ಜನರ ಆರಾಧ್ಯ ದೈವ, ಮ್ಯಾಸ ಮಂಡಲದ ಶಕ್ತಿದೇವತೆ ತಾಲೂಕಿನ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಯು ಮಂಗಳವಾರ ತುಮ್ಮಲು ಪ್ರದೇಶದಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.


ಕೋವಿಡ್ ನಿರ್ಬಂಧಗಳ ನಡುವೆ ಸಾವಿರಾರು ಭಕ್ತಾಧಿಗಳು ಎತ್ತಿನ ಗಾಡಿಗಳ ಮೂಲಕ, ಇತರೆ ವಾಹನಗಳಲ್ಲಿ ಸೋಮವಾರ ಸಂಜೆ ತುಮ್ಮುಲು ಪ್ರದೇಶಕ್ಕೆ ಆಗಮಿಸಿ ವಾಸ್ತವ್ಯ ಮಾಡಿದರು. ತುಮ್ಮಲಿನಲ್ಲಿರುವ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಾದಿಗಳು ಭಕ್ತಿಯನ್ನು ಸಮರ್ಪಿಸಿದರು.
ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ತುಮ್ಮಲು ಪ್ರದೇಶಕ್ಕೆ ಕರೆದುಕೊಂಡು ಹೋಗಲು ಜಿಲ್ಲಾಡಳಿತ ಬ್ರೇಕ್ ಹಾಕಿ, ಪೂಜೆ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿತ್ತು. ಇದರಿಂದ ತುಮ್ಮಲು ಪ್ರದೇಶಕ್ಕೆ ಗೌರಸಮುದ್ರ ಮಾರಮ್ಮ ದೇವಿ ಉತ್ಸವ ಬರುತ್ತದೆ ಆಶೀರ್ವಾದ ಪಡೆಬೇಕು ಎಂದು ಎದುರು ನೋಡುತ್ತಿದ್ದ ಭಕ್ತಾಧಿಗಳಿಗೆ ನಿರಾಸೆಯಾಯಿತು.


ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತಾದಿಗಳು:
ಮಾರಮ್ಮ ದೇವಿಯ ಜಾತ್ರೆ ಮಹೋತ್ಸವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿ, ದೇವಾಲಯದಲ್ಲಿ ಪೂಜೆ ಕಾರ್ಯಗಳಿಗೆ ಮಾತ್ರ ಅವಕಾಶ ನೀಡಿದ್ದರು. ಆದರೂ ಸಾವಿರಾರು ಭಕ್ತಾದಿಗಳು ಗೌರಸಮುದ್ರ ಮಾರಮ್ಮ ಸನ್ನಿಧಿಯಾದ ತುಮ್ಮಲು ಪ್ರದೇಶಕ್ಕೆ ಆಗಮಿಸಿ ವಾಸ್ತವ್ಯ ಮಾಡಿ, ದೇವಿ ಮೂರ್ತಿಗೆ ಪ್ರದಕ್ಷಣೆ ಹಾಕಿ, ಹೂವು, ಹಣ್ಣು, ಕಾಯಿ ಇಟ್ಟು ಪೂಜೆ ಸಲ್ಲಿಸಿದರು.
ಸಂಚಾರ ದಟ್ಟಣೆ:
ಹೆಚ್ಚಿನ ಸಂಖ್ಯೆಯಲ್ಲಿ ಎತ್ತಿನಗಾಡಿ, ಟ್ರಾಕ್ಟರ್ಗಳಲ್ಲಿ, ಆಟೋಗಳಲ್ಲಿ ಅಪಾರ ಭಕ್ತಾದಿಗಳು ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಟ ನಡೆಸಬೇಕಾಯಿತು. ಗಂಟೆಗಂಟಲೇ ಟ್ರಾಫಿಕ್ನಲ್ಲಿ ಸಿಲುಕಿಕೊಂಡು ಪರಿಸ್ಥಿತಿ ಸುಧಾರಿಸಲು ಪೊಲೀಸ್ ಸಿಬ್ಬಂದಿಗಳು ಹರಸಾಹಸಪಟ್ಟರು.

ಇನ್ನು ಟ್ರಾಫಿಕ್ನಲ್ಲಿ ಸಿಲುಕಿಕೊಂಡ ವಾಹನ ಸವಾರರು, ಭಕ್ತಾದಿಗಳು ಜಾತ್ರೆಯಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ಎಂದು ತಾಲ್ಲೂಕು ಆಡಳಿತಕ್ಕೆ ಹಿಡಿಶಾಪ ಹಾಕಿದರು.
ದೇವಿಯ ದರ್ಶನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ತಹಶೀಲ್ದಾರ್ ಎನ್. ರಘುಮೂರ್ತಿ ಸೇರಿದಂತೆ ಮುಂತಾದ ಅಧಿಕಾರಿಗಳು, ಸಾವಿರಾರು ಭಕ್ತಾಧಿಗಳು ಇದ್ದರು.

ಭಕ್ತಾದಿಗಳ ಬೇಸರ:
ಮಾರಮ್ಮ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ತುಮ್ಮಲು ಪ್ರದೇಶಕ್ಕೆ ಕರೆದುಕೊಂಡು ಹೋಗುವುದಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದರಿಂದ ಭಕ್ತಾಧಿಗಳಿಗೆ ನಿರಾಸೆಯಾಗಿದೆ ಎಂದು ಗ್ರಾಮಸ್ಥ ಮಂಜುನಾಥ ಹೇಳಿದರು.
ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಆಚರಣೆ ೫೦೦ ವರ್ಷಗಳ ಇತಿಹಾಸ ಇದೆ. ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ಭಕ್ತರು ಆಗಮಿಸಿದ್ದಾರೆ. ಆದರೆ ಅವರಿಗೆ ಇಂದು ದೇವಿಯು ತುಮ್ಮಲಿಗೆ ಹೋಗಲು ಸರ್ಕಾರು ಅನುಮತಿ ನೀಡದೆ ಇರುವುದರಿಂದ ಭಕ್ತಾಧಿಗಳಿಗೆ ಬೇಸರವಾಗಿದೆ. ಕಳದೆ ವರ್ಷ ಹಾಗೂ ಈ ವರ್ಷ ಗೌರಸಮುದ್ರ ಮಾರಮ್ಮ ದೇವಿಯಯನ್ನು ತುಮ್ಮಲು ಪ್ರದೇಶ ಕರದುಕೊಂಡು ಹೋಗಲು ಅವಕಾಶ ನೀಡಿಲ್ಲ ಇದರಿಂದ ಭಕ್ತಾಧಿಗಳಿಗೆ ನಿರಾಸೆಯಾಗಿದೆ. ಈ ಬಾರಿಯು ಕೂಡ ದೇವಾಲಯದಲ್ಲಿ ಪೂಜೆ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ.

ದೇವಿಯು ತುಮ್ಮಲು ಪ್ರದೇಶಕ್ಕೆ ಹೋಗಿ ಬಂದರೆ ಮಳೆ, ಬೆಳೆ, ಜನ ಜಾನುವಾರುಗಳಿಗೆ ಯಾವುದೇ ರೋಗಗಳು ಬರುವುದಿಲ್ಲ ಎನ್ನುವ ನಂಬಿಕೆ ಇದೆ. ಮುಂದಿನ ವರ್ಷದಲ್ಲಿ ಗೌರಸಮುದ್ರ ಮಾರಮ್ಮ ದೇವಿಯನ್ನು ತುಮ್ಮಲಿಗೆ ಕರೆದುಕೊಂಡು ಹೋಗಲು ಹಾಗೂ ದೇವಿಯನ್ನು ಮೆರವಣಿಗೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















