ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಾಯಕನಹಟ್ಟಿಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸಮಿತಿಯ ಪದಾಧಿಕಾರಿಗಳು ಜವಾಬ್ದಾರಿತವಾಗಿ ಕೆಲಸ ಮಾಡಬೇಕೆಂದು ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಬೋರನಾಯ್ಕ ಹೇಳಿದರು.
ಮೋಳಕಾಲ್ಮೂರು ಪಟ್ಟಣದ ಯಾತ್ರಿ ನಿವಾಸದಲ್ಲಿ ನಡೆದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿಯೊಂದು ಹಳ್ಳಿಗೂ ಮುಟ್ಟುವಂತಹ ಕೆಲಸವನ್ನು ಪದಾಧಿಕಾರಿಗಳು ಮಾಡಬೇಕಾಗಿದೆ. ಪದಾಧಿಕಾರಿಗಳು ಸಂಘಟಿತರಾಗಿ, ಸಕ್ರೀಯ ಕೆಲಸ ಮಾಡುವ ಮೂಲಕ ಸ್ಥಳೀಯವಾಗಿ ಪ್ರಬಲ ಬಿಜೆಪಿ ಪಕ್ಷ ಕಟ್ಟಲು ಶ್ರಮಿಸಬೇಕು ಎಂದು ಹೇಳಿದರು.
ಹೊಸದುರ್ಗದ ಕಾರ್ಯಕಾರಿಣಿ ಸಮಿತಿ ಎಸ್.ಟಿ. ಮೋರ್ಚಾ ಸದಸ್ಯರಾದ ನೇತ್ರಾವತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಜನಪರ ಕೆಲಸ ಮಾಡಿದ್ದಾರೆ. ಮಹಿಳೆಯರಿಗೆ ಉಜ್ವಲ ಗ್ಯಾಸ್, ಗರ್ಭಿಣಿಯರಿಗೆ ೬ ಸಾವಿರ ರೂ. ಸಹಾಯಧನ, ಹಾಗೂ ಮಕ್ಕಳಿಗೆ ಉಚಿತವಾಗಿ ಬೈಸಿಕಲ್ ವಿತರಿಸಲಾಗುತ್ತಿದೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ನಿರ್ಲಕ್ಷ್ಯ ವಹಿಸದೆ ಕೆಲಸ ಮಾಡಬೇಕು. ಪ್ರಾಮಾಣಿಕವಾಗಿ ಕೆಲಸಮಾಡಿ ಮುಂಬರುವ ತಾಪಂ. ಜಿಪಂ. ಪಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಪದಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ರಾಜ್ಯ ಪ್ರಧಾನಕಾರ್ಯದರ್ಶಿ ನರಸಿಂಹನಾಯಕ ಮಾತನಾಡಿ, ಬಿಜೆಪಿಯಲ್ಲಿ ನಿಸ್ವಾರ್ಥದಿಂದ ಪಕ್ಷದ ಒಳಿತಿಗಾಗಿ ಕೆಲಸ ಮಾಡಿದವರನ್ನು ಗುರುತಿಸಿ ಟಿಕೇಟ್ ನೀಡಲಾಗುವುದು. ನರೇಂದ್ರಮೋದಿ ಅವರು ಇಂದು ಪ್ರಧಾನಿಯಾಗಿರುವುದು ಇದಕ್ಕೆ ಒಂದು ಉದಾಹರಣೆ. ಪದಾಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುವುದರಿಂದ ಮುಂದಿನ ದಿನಗಳಲ್ಲಿ ಎಂಪಿ ಎಂಎಲ್ಎ ಆಗಬಹುದು ಎಂದು ಹೇಳಿದರು.
ನಾಯಕನಹಟ್ಟಿ ಮಂಡಲದ ಅಧ್ಯಕ್ಷರಾದ ಎ. ರಾಮರೆಡ್ಡಿ ಮಾತನಾಡಿ, ಪಕ್ಷದಲ್ಲಿ ನಿಷ್ಠವಂತರಾಗಿ ಕೆಲಸ ಮಾಡಿ ಮುಂಬರುವಂತಹ ಜಿಪಂ. ತಾಪಂ. ಪ.ಪಂ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು. ಪ್ರಧಾನಿ ನರೇಂದ್ರಮೋದಿ, ಬಿ.ಎಸ್. ಯಡಿಯೂರಪ್ಪ ಅವರ ಸಾಧನೆಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು. ಈಗಿನಿಂದಲೇ ಪಕ್ಷ ಸಂಘಟಿಸಿದರೆ ೧೪-೧೫ ಸೀಟುಗಳನ್ನು ಗೆಲ್ಲಿಸಿಕೊಳ್ಳಬಹುದು ಎಂದರು.

ನಾಯಕನಹಟ್ಟಿ ಪ.ಪಂ. ಅಧ್ಯಕ್ಷ ಎನ್. ಮಹಂತಣ್ಣ, ಎಸ್ಟಿ ಮೋರ್ಚಾದ ಅಧ್ಯಕ್ಷ ಸಿ.ಬಿ. ಮೋಹನ್, ಮಂಡಲ ಪ್ರಧಾನಕಾರ್ಯದರ್ಶಿ ಡಿ.ಆರ್. ಬಸವರಾಜ್, ಎಸ್ಟಿ ಮೋಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಪ್ರಧಾನಕಾರ್ಯದರ್ಶಿ ಪಿ.ಬಿ. ತಿಪ್ಪೇಸ್ವಾಮಿ, ಮಂಡಲ ಅಧ್ಯಕ್ಷ ರಾಮರೆಡ್ಡಿ, ಜಿಲ್ಲಾ ಎಸ್ಟಿ ಅಧ್ಯಕ್ಷ ನರಸಿಂಹ ನಾಯಕ, ರಾಜ್ಯ ಎಸ್ಟಿ ಮೋರ್ಚಾ ಪ್ರಧಾನಕಾರ್ಯದರ್ಶಿ ಎಸ್. ದಿವಾಕರ್, ಕೆ.ಟಿ. ಸ್ವಾಮಿ, ನಗರ ಘಟಕದ ಪ್ರಧಾನಕಾರ್ಯದರ್ಶಿ ತ್ರಿಶೂಲ್ ಕುಮಾರ್, ಮಾರುತಿ ಹಿರೇಹಳ್ಳಿ, ಹಾಗೂ ಪಕ್ಷದ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















