ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಅಧಿಕಾರಿಗಳು ಮಾಹಿತಿ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಷಯಗಳ ಕುರಿತು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಎನ್ಇಜಿಡಿ ಸಾಮರ್ಥ್ಯಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಗ್ರೂಪ್ ಎ ಅಧಿಕಾರಿಗಳಿಗೆ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಷಯಗಳ ಕುರಿತು ಏರ್ಪಡಿಸಲಾದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸೈಬರ್ ಸೆಕ್ಯೂರಿಟಿ ಇಂದು ಅತ್ಯಂತ ಅಗತ್ಯವಾಗಿದ್ದು, ಆಡಳಿತ ಸುಧಾರಣಾ ಇಲಾಖೆ ತರಬೇತಿ ಸಂಸ್ಥೆಯ ಮೂಲಕ ಕಾರ್ಯಗಾರವನ್ನು ಏರ್ಪಡಿಸಿ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಇ-ಆಡಳಿತದ ಅನುಕೂಲತೆಗಳು ಸಹ ಆಡಳಿತಕ್ಕೆ ಸಹಕಾರಿಯಾಗಿದ್ದು, ಈ ವಿಷಯವಾಗಿಯು ತರಬೇತಿ ನೀಡಲಾಗುತ್ತಿದೆ. ಆಡಳಿತದ ದೃಷ್ಟಿಯಿಂದ ಕಾರ್ಯಗಾರದ ಸದುಪಯೋಗ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಸೈಬರ್ ಸೆಕ್ಯೂರಿಟಿ ಕೇಂದ್ರ ಮುಖ್ಯಸ್ಥ ಕಾರ್ತಿಕ್ ರಾವ್ ಬಪ್ಪನಾಡ್ ಮಾತನಾಡಿ, ಸೈಬರ್ ಸೆಕ್ಯೂರಿಟಿ ನಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ತುಂಬಾ ಮಹತ್ವದಾಗಿದೆ. ಸೈಬರ್ ಜಗತ್ತಿನಲ್ಲಿ ಸೆಕ್ಯೂರಿಟಿ ಬಗ್ಗೆ ಜಾಗೃತಿ ಇರಬೇಕು. ಇಲ್ಲದಿದ್ದಾಗ ಸೈಬರ್ ಕ್ರೈಮ್ಗಳು ನಡೆಯುತ್ತವೆ. ಇದನ್ನು ತಡೆಗಟ್ಟಲು ಜಾಗೂರುಕರಾಗಿರುವುದು ಅತ್ಯವಶ್ಯಕ ಎಂದರು.
ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಜ್ಞಾನದ ತ್ವರಿತ ಬಳಕೆ, ದುಡ್ಡಿಗಾಗಿ ನ್ಯಾಯ ವ್ಯಾಪ್ತಿಯ ಕೊರತೆ ಮತ್ತು ಮನಿ ಲಾಂಡರಿಂಗ್ ಮೂಲಕ ಸೈಬರ್ ಕ್ರೈಮ್ಗಳು ನಡೆಯುತ್ತಿವೆ. ಸೃಷ್ಟಿ ಪಿಳ್ಳೆಗಳು, ಹವ್ಯಾಸಿ ಹ್ಯಾಕರ್ಗಳು, ಹ್ಯಾಕ್ಕಿವಿಸ್ಟ್ಗಳು, ಒಳಗಿನವರು(ಇನ್ಸೈಡರ್) ಸಿಂಡಿಕೇಟ್ಗಳು ಸೈಬರ್ ಕ್ರೈಮ್ನ ಅಪಾಯಕಾರಿ ವ್ಯಕ್ತಿಗಳಾಗಿದ್ದಾರೆ. 2020ರಲ್ಲಿ ಸೈಬರ್ ತೊಂದರೆಗಳು ಅತಿದೊಡ್ಡ ತೊಂದರೆಗಳಾಗಿ ಪರಿಣಮಿಸಿದ್ದವು. ಶೇ.80ರಷ್ಟು ಸೈಬರ್ ಕ್ರೈಮ್ಗಳನ್ನು ತಡೆಗಟ್ಟಬಹುದು ಎಂದರು.
ಕಾರ್ಯಗಾರದಲ್ಲಿ ಜಿಎಂಐಟಿ ದಾವಣಗೆರೆಯ ಸಿಎಸ್ಇ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಮೌನೇಶ್ ಆಚಾರ್, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯೆ ಪಿ.ವಿ. ಸವಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಚಾರ್ಯ ಚಂದ್ರಕುಮಾರ್ ಸ್ವಾಗತಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















