ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯ ಕಾಂಗ್ರೆಸ್ ಸರ್ಕಾರದ ಅಡಳಿತ ಸಂಪೂರ್ಣ ವಿಫಲವಾಗಿದ್ದು, ಆರ್ಥಿಕತೆಯನ್ನು ಶೂನ್ಯದ ಕಡೆ ನೂಕಲಾಗಿದೆ ಎಂದು ಬಿಜೆಪಿ ಮುಖಂಡ ಡಾ.ಎಚ್.ಇ. ಜ್ಞಾನೇಶ್ ಆರೋಪಿಸಿದರು.
ಬುಧವಾರ ಪಟ್ಟಣದ ಸಾಗರ ರಸ್ತೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಧೋರಣೆ ವಿರೋಧಿಸಿ ಹಮ್ಮಿಕೊಂಡ ರಸ್ತೆ ಸಂಚಾರ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉಚಿತ ಯೋಜನೆಗಳಿಗೆ ವಿನಿಯೋಗಿಸಲು ಖಜಾನೆಯನ್ನು ಖಾಲೆ ಮಾಡಲಾಗುತ್ತಿದೆ. ಕ್ಷೇತ್ರವೂ ಸೇರಿದಂತೆ ರಾಜ್ಯದಾದ್ಯಂತ ರಸ್ತೆಗಳು ಗುಂಡಿಮಯವಾಗಿವೆ. ಅವುಗಳನ್ನು ಮುಚ್ಚಲು ಸಹ ರಾಜ್ಯ ಸರ್ಕಾರದ ಬಳಿ ಹಣವಿಲ್ಲದಿರುವುದು ವಿಪರ್ಯಾಸದ ಸಂಗತಿ. ಗ್ರಾಮೀಣ ಭಾಗದಲ್ಲಿಯಂತೂ ರಸ್ತೆಗಳ ಸ್ಥಿತಿ ಹೇಳತೀರದಂತಾಗಿದೆ. ಈ ನಿಟ್ಟಿನಲ್ಲಿ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಜಾತಿ ಜಾತಿಗಳ ನಡುವೆ ಭಿನ್ನಾಬಿಪ್ರಾಯವನ್ನು ಬಿತ್ತಿ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರವನ್ನು ಕಾಂಗ್ರೆಸ್ ನಡೆಸುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಆರ್ಥಿಕ ದಿವಾಳಿತನವನ್ನು ಗಮನಿಸಿದಂತೆ ಕೇಂದ್ರದಲ್ಲಿ ಅಕಸ್ಮಾತ್ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದರೆ ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಅಗಸಹನಳ್ಳಿ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಜನತೆಯ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸಲಾಗಿದೆ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಸಹ ಕಾಂಗ್ರೆಸ್ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಸಾರ್ವಜನಿಕರು ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಾನಕಪ್ಪ ಒಡೆಯರ್, ಸುರೇಶ್ ಉದ್ರಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ, ಪ್ರಧಾನಕಾರ್ಯದರ್ಶಿ ಸಂಜಯ ಗೌಡ, ಹರೀಶ್ ಸೊರಬ, ಉಪಾಧ್ಯಕ್ಷ ವಿನಯ್, ಕಾರ್ಯದರ್ಶಿಗಳಾದ ಶಶಿಧರ ಓಟೂರು, ಲಿಂಗರಾಜ, ಶಿವರಾಜ್, ಪ್ರಮುಖರಾದ ಎಂ.ಕೆ. ಯೋಗೇಶ್, ದೇವೇಂದ್ರಪ್ಪ ಚನ್ನಾಪುರ, ಓಂಕಾರಪ್ಪ, ಆಶೀಕ್ ನಾಗಪ್ಪ, ಪ್ರಭು ಪಿ. ಅರಳೇಶ್ವರ, ಶಿವು ನೇರಲಗಿ, ಶಿವಕುಮಾರ್ ನೆಗವಾಡಿ, ಸಂದೀಪ ಮಳಲಗದ್ದೆ, ಕರಣ್ಕುಮಾರ್ ಗೌಡ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post