ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ತಮಗೆ ಲಭಿಸಿರುವ ಪ್ರಶಸ್ತಿಯನ್ನು ತನ್ನ ಜೊತೆ ಕೆಲಸ ಮಾಡುತ್ತಿರುವ ತಮ್ಮ ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಮತ್ತು ಮುದ್ದು ಮಕ್ಕಳಿಗೆ ಸಲ್ಲಿಸುತ್ತೇನೆ ಎಂದು ಪಂಪಾರೂಢಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಹೊನ್ನೂರು ಶಾಲೆಯ ಮುಖ್ಯ ಶಿಕ್ಷಕಿ ಬಿ. ಸುಜಾತ ಸುರೇಶ್ ಹೇಳಿದರು.
ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ, ನಿವೃತ್ತ ನೌಕರರಿಗೆ ಸನ್ಮಾನ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಪಾರೂಢಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಹೊನ್ನೂರು ಶಾಲೆಯ ಮುಖ್ಯ ಶಿಕ್ಷಕಿ ಬಿ. ಸುಜಾತ ಸುರೇಶ್ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ನೀಡಲಾಗುವ 2022-23ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ತಮ್ಮ 35 ವರ್ಷದ ಶಿಕ್ಷಕ ವೃತ್ತಿಯನ್ನು ಗುರುತಿಸಿದ ಶಿಕ್ಷಣ ಇಲಾಖೆಗೆ ಅಭಾರಿಯಾಗಿರುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ರವೀಂದ್ರನಾಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಮತ್ತು ವೈ.ಎ. ನಾರಾಯಣಸ್ವಾಮಿ, ಉಪನಿರ್ದೇಶಕ ಜಿ.ಆರ್. ತಿಪ್ಪೇಶಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ ಅಂಬಣ್ಣ ಮತ್ತು ನಿರಂಜನ ಮೂರ್ತಿ, ಉಪ ನಿರ್ದೇಶಕ ಕಂಪ್ಲ ರಾಮನಗೌಡರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಉಪಸ್ಥಿತರಿರುವರು.
ವೇದಿಕೆ ಮೇಲಿದ್ದ ಅತಿಥಿಗಳು ಮಾತನಾಡಿ, ಸನ್ಮಾನ ಪಡೆದವರ ಕೈಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಉತ್ತಮ ಜೀವನವನ್ನು ನಡೆಸುತ್ತಿರುವುದನ್ನು ಸ್ಮರಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಆಗಿದೆ. ಅದರಂತೆ ಶಿಕ್ಷಕರು ಸಹ ಬದಲಾಗಿ ಉತ್ತಮ ಶಿಕ್ಷಣವನ್ನು ಕೊಡುವುದು ಬಹಳ ಮುಖ್ಯವಾಗಿದೆ. ಕಾಯಕಯೋಗಿಗಳಾಗಿ ಚೈತನ್ಯ ಚಿಲುಮೆಗಳಾಗಿ ಸದಾ ಕ್ರಿಯಾಶೀಲತೆಯಿಂದ ಆದರ್ಶ ಸಮಾಜಕ್ಕೆ ಉತ್ತಮ ನಾಗರಿಕರ ಕೊಡುಗೆಯಾಗಿ ನೀಡುವ ಕೆಲಸದಲ್ಲಿ ತೊಡಗಿರುವ ಪ್ರಶಸ್ತಿ ಪಡೆದ ಅತ್ಯತ್ತಮ ಶಿಕ್ಷಕಿಯರುಗಳಿಗೆ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ದಾವಣಗೆರೆ ಜಿಲ್ಲಾ ಬ್ರಾಹ್ಮಣ ಸಂಘದ ಮುಖ್ಯಸ್ಥರು ಮತ್ತು ಭರಮಸಾಗರದ ಬ್ರಾಹ್ಮಣ ಸಮಾಜದ ಮುಖಂಡರಾದ ಗಣೇಶರಾವ್, ಶೇಷಗಿರಿರಾವ್, ಗುರುರಾಜರಾಜ್, ಗುರುನಾಥ್ ರಾವ್, ಮಲ್ಲಾರಿರಾವ್, ನಾಗಭೂಷಣ್ ರಾವ್, ವಿಜಯಕುಮಾರ್ ಪತ್ರಕರ್ತರರಾದ ಚಂದ್ರಶೇಖರ್, ಮುರುಳೀಧರ್ ಮತ್ತು ಶ್ರೀಪಾದರಾವ್ ಇವರು ಸಂತೋಷವನ್ನು ತಿಳಿಸುವುದರ ಮೂಲಕ ಅಭಿನಂದಿಸಿದರು.
ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಪ್ರಸ್ತುತ ಈ ಊರು ಶರವೇಗದಿಂದ ಬೆಳೆಯುತ್ತಿದೆ. ಹಾಗೆಯೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಬೆಳೆದು ನಿಂತಿದೆ. ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಾವಣಗೆರೆ ಭಾಗದ ಫ್ರೌಡಶಾಲಾ ಮಟ್ಟದಲ್ಲಿ 8 ಶಿಕ್ಷಕರಿಗೆ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ.
ಬಿ. ಸುಜಾತಾ ಸುರೇಶ್ ಪರಿಚಯ:
ಕರ್ನಾಟಕ ರಾಜ್ಯದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ದಾವಣಗೆರೆ ಜಿಲ್ಲಾ ಘಟಕದಿಂದ ಮಾರ್ಚ್ 18 ರಂದು ಜಿಲ್ಲಾ ಗುರುಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಸಂಧರ್ಭದಲ್ಲಿ ‘ಅನುಪಮ ಸೇವಾ ರತ್ನ’ ಪ್ರಶಸ್ತಿ ಪುರಸ್ಕಾರ ಪಡೆದಿದ್ದರು. ಇವರು ಚಿತ್ರದುರ್ಗ ಜಿಲ್ಲೆಯ ಬಿಚ್ಚುಗತ್ತಿ ಭರಮಣ್ಣ ನಾಯಕರು ಕಟ್ಟಿದ ಭರಮಸಾಗರ ಗ್ರಾಮದವರು, ದಿವಂಗತ ಅನುಸೂಯಮ್ಮ ಮತ್ತು ಭೀಮರಾವ್ ರವರ ಕೊನೆಯ ಮಗಳು, ಬಡತನದ ಜೊತೆ ಜೀವನ ಮಾಡಿ ವಿದ್ಯಾಭ್ಯಾಸ ಪೂರೈಸಿ, ಖಾಸಗಿ ಅನುದಾನಿತ ಶಾಲೆಯ ಶಿಕ್ಷಕಿಯಾಗಿ ವೈವಾಹಿಕ ಜೀವನವನ್ನು ಇವರು ದಾವಣಗೆರೆಯಲ್ಲಿ ವಾಸವಾಗಿದ್ದುಕೊಂಡು, ದಾವಣಗೆರೆ ಜಿಲ್ಲೆಯ ಹೊನ್ನೂರು ಗ್ರಾಮದ ಶ್ರೀ ಪಂಪಾರೂಢ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರದುರ್ಗಜಿಲ್ಲೆಯ ಭರಮಸಾಗರ, ಇಸಾಮುದ್ರ, ದಾವಣಗೆರೆ ಮತ್ತು ಹೊನ್ನೂರು ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ, ಇವರು ಶಾಲಾ ಅಭಿವೃದ್ಧಿ , ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆ ಅವರನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಮೇಲೆ ತರುವಂತಹ ಕೆಲಸಗಳನ್ನು ಮಾಡಿರುತ್ತಾರೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಇವರನ್ನು ಸನ್ಮಾನಿಸಿದೆ. ಇವರು ಉತ್ತಮ ಗಾಯಕಿಯಾಗಿ ಮಕ್ಕಳಿಗೆ ಸಂಗೀತ,ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯುವುದನ್ನು ತಮ್ಮ ಶಿಕ್ಷಣದ ಉಪನ್ಯಾಸದ ಜೊತೆಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚಿಗೆ ದಾವಣಗೆರೆ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಶಾಲೆಯ ಎಲ್ಲಾ ಶಿಕ್ಷಕರ ಸಹಕಾರದಿಂದ ಪ್ರಥಮ ಸ್ಥಾನ ಗಳಿಸಿ ಪುಟ್ಟ ಗ್ರಾಮದ ಹೆಸರನ್ನು ಮೇಲಕ್ಕೆ ಎತ್ತಿ ಹಿಡಿದು ಶಾಲೆಯ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಹೆಸರು ಬಂದಿದ್ದನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ. ಇವರ ಸಾಧನೆಗೆ ಇವರ ಶಾಲೆಯ ಸಹ ಶಿಕ್ಷಕರ ಉತ್ತಮ ಸೇವೆ, ಪ್ರತಿ ವರ್ಷದ ಪ್ರೌಢ ಶಾಲೆಯ ಉತ್ತಮ ಪಲಿತಾಂಶ ಸಹ ಒಳಗೊಂಡಿದೆ.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post