ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಗ್ರಾಹಕರೊಬ್ಬರಿಗೆ ದೋಷಯುಕ್ತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕೊಟ್ಟ ಹಿನ್ನೆಲೆಯಲ್ಲಿ ಟಿವಿಎಸ್ ಕಂಪೆನಿಗೆ ಬರೋಬ್ಬರಿ 1.60 ಲಕ್ಷ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಘಟನೆಯ ಹಿನ್ನೆಲೆಯೇನು?
ಹುಬ್ಬಳ್ಳಿಯ ಶಿಂದೆ ಕಾಂಪ್ಲೆಕ್ಸ್ ನಿವಾಸಿ ಉಷಾ ಜೈನ್ ಎನ್ನುವವರು ಅಲ್ಲಿಯ ವಿದ್ಯಾನಗರದ ಪ್ರಕಲ್ಪ ಮೋಟರ್ಸ್ ಅವರಿಂದ 2021ರ ಜೂನ್ 18ರಂದು ರೂ. 1,25,000/- ಕೊಟ್ಟು ಟಿವಿಎಸ್ ಐಕ್ಯೂಬ್ ಇಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರ ಬ್ರೇಕ್’ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು. ಈ ಬಗ್ಗೆ ದೂರುದಾರಳು ಪ್ರಕಲ್ಪ ಮೋಟರ್ಸ್’ಗೆ ವಾಹನ ತೆಗೆದುಕೊಂಡು ಹೋಗಿ ದೋಷ ಸರಿಪಡಿಸಲು ಹಲವು ಬಾರಿ ಕೋರಿಕೊಂಡಿದ್ದರು. ಆದರೆ ಪ್ರಕಲ್ಪ ಮೋಟರ್ಸ್’ರವರು ಸದರಿ ವಾಹನದ ಹಲವು ಬಿಡಿ ಭಾಗಗಳನ್ನು 5-6 ಸಾರಿ ಬದಲಾಯಿಸಿ ರಪೇರಿ ಮಾಡಿಕೊಟ್ಟಿದ್ದರು. ಆದರೂ ಸಹ ವಾಹನದ ರಿಪೇರಿ ಕೆಲಸ ಸರಿಯಾಗಿ ಆಗಿರಲಿಲ್ಲ.
ವಾಹನವನ್ನು ಚಾಲು ಮಾಡುವಾಗ ದೂರುದಾರರ ಕೈಗೆ ಇಲೆಕ್ಟ್ರಿಕ್ ಶಾಕ್ ತಗುಲುತ್ತಿತ್ತು. ಸಾಕಷ್ಟು ರಿಪೇರಿ ಮಾಡಿದರು ಅದರಲ್ಲಿ ಯಾವುದೇ ಸುಧಾರಣೆ ಆಗದ್ದರಿಂದ ಸದರಿ ವಾಹನವನ್ನು ಬದಲಾಯಿಸಿ ಬೇರೆ ವಾಹನ ಕೊಡುವಂತೆ ಅಥವಾ ಆ ವಾಹನದ ಸಂಪೂರ್ಣ ಹಣವನ್ನು ಮರಳಿಸುವಂತೆ ದೂರುದಾರಳು ಪ್ರಕಲ್ಪ ಮೋಟರ್ಸ್’ರವರಿಗೆ ಮತ್ತು ಟಿವಿಎಸ್ ಕಂಪನಿಗೆ ಕೇಳಿಕೊಂಡಿದ್ದರು. ದೂರುದಾರರ ವಿನಂತಿಯನ್ನು ಎದುರುದಾರರು ನಿರಾಕರಿಸಿದ್ದರು. ಅವರ ಈ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರುದಾರಳು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2023ರ ಫೆಬ್ರವರಿ 9ರಂದು ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ಅವರು ಸದರಿ ಇಲೆಕ್ಟಿçಕ್ ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರಿದರೂ ಎದುರುದಾರ ಕಂಪನಿಯವರು ಅದರ ದೋಷ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ.
ರಿಪೇರಿ ಮಾಡಿದ ನಂತರವು ಅದನ್ನು ಚಾಲನೆ ಮಾಡುವಾಗ ಸಡನ್ ಆಗಿ ಕರೆಂಟ್ ಬರುತ್ತಿರುವುದರಿಂದ ಆ ವಾಹನದಲ್ಲಿ ಉತ್ಪಾದನಾ ದೋಷ ಇದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
Also read: ವಿಜಯದಶಮಿಯಂದು ಪ್ರಧಾನಿ ಮೋದಿ ದೇಶದ ಜನತೆಗೆ ಮಾರ್ಮಿಕ ಸಂದೇಶವೇನು?
ಎದುರುದಾರ ಟಿವಿಎಸ್ ಉತ್ಪಾದಾನಾ ಕಂಪನಿ ಮತ್ತು ಡೀಲರ್’ಗಳಿಂದ ದೂರುದಾರರಿಗೆ ಸೇವಾ ನ್ಯೂನ್ಯತೆ ಆಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಎಲ್ಲ ಎದುರುದಾರು ವೈಯಕ್ತಿಕವಾಗಿ ಮತ್ತು ಜಂಟಿನಾತೆಯಿಂದ ಆ ಐಕ್ಯೂಬ್ ಇಲೆಕ್ಟಿçಕ್ ವಾಹನವನ್ನು ಬದಲಾಯಿಸಿ ಅದೇ ರೀತಿಯ ಹೊಸ ವಾಹನವನ್ನು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆದೇಶಿಸಿದೆ.
ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಹೊಸ ವಾಹನ ಕೊಟ್ಟು ಬದಲಾವಣೆ ಮಾಡಲು ಎದುರುದಾರರು ವಿಫಲರಾದಲ್ಲಿ ನಂತರ ಆ ವಾಹನದ ಮೌಲ್ಯ ಪೂರ್ತಿ ಹಣ ರೂ.1,25,000/-ಮತ್ತು 2023ರ ಫೆ.9ರಿಂದ ಶೇ.8 ರಷ್ಟು ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಎದುರುದಾರ ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರರು ರೂ.25,000/-ಗಳ ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post