ಬೆಂಗಳೂರು: ಇಸ್ರೋ ವಿಜ್ಞಾನಿಗಳ ಶ್ರಮ ಹಾಗೂ ಕೋಟ್ಯಂತರ ಭಾರತೀಯರ ಕನಸಾಗಿರುವ ಚಂದ್ರಯಾನ-2 ಯೋಜನೆಯ ಭಾಗವಾದ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕಕ್ಕೆ ಇಂದೇ ಕೊನೆಯ ದಿನವಾಗಿದ್ದು, ಇಂದು ಸಂಪರ್ಕ ಸಾಧ್ಯವಾಗದೇ ಇದ್ದಲ್ಲಿ, ಇನ್ನೆಂದೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ವಿಕ್ರಮ್ ಲ್ಯಾಂಡರನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸುವ ವೇಳೆ ಅದರೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಈ ಅನಿರೀಕ್ಷಿತ ಘಟನೆ ಇಸ್ರೋ ವಿಜ್ಞಾನಿಗಳ ವರ್ಷಗಳ ಶ್ರಮಕ್ಕೆ ತಣ್ಣೀರೆರಚುವ ಕ್ಷಣವಾಗಿತ್ತು. ಆದರೆ, ಕಣ್ಮರೆಯಾಗಿದ್ದ ವಿಕ್ರಮ್ ಲ್ಯಾಂಡರ್, ಕೆಲವು ದಿನಗಳ ನಂತರ ಪತ್ತೆಯಾಗಿದ್ದು, ಸಂಪರ್ಕ ಸಾಧನೆಗೆ ಪ್ರಯತ್ನಿಸಲಾಗುತ್ತಿತ್ತು. ಇದಕ್ಕಾಗಿ ಸಂಪರ್ಕ ಸ್ಥಾಪನೆಗೆ ಕನಿಷ್ಠ 14 ದಿನಗಳು ಬೇಕು ಎಂದು ತಿಳಿಸಲಾಗಿತ್ತು.
ಅದರಂತೆ ಇಂದೇ ಕೊನೆಯ ದಿನವಾಗಿದ್ದು, ಇಂದು ಸಂಪರ್ಕ ಸಾಧಿಸಲು ಕೊನೆಯ ಯತ್ನ ನಡೆಯುತ್ತಿದ್ದು, ಸಾಧ್ಯವಾಗದೇ ಇದ್ದಲ್ಲಿ, ಈ ಯೋಜನಾ ಭಾಗ ಶಾಶ್ವತವಾಗಿ ಸ್ಥಗಿತಗೊಳ್ಳುತ್ತದೆ. ಇನ್ನೆಂದೂ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧ್ಯವಾಗುವುದಿಲ್ಲ.

















